78 ವಿದ್ಯಾರ್ಥಿಗಳಿಗೆ ಒಬ್ಬರೂ ಶಿಕ್ಷಕರಿಲ್ಲ!: ಅನುದಾನಿತ ಶಾಲೆಯ ಗೋಳು ಕೇಳುವವರಿಲ್ಲ

Spread the love

78 ವಿದ್ಯಾರ್ಥಿಗಳಿಗೆ ಒಬ್ಬರೂ ಶಿಕ್ಷಕರಿಲ್ಲ!: ಅನುದಾನಿತ ಶಾಲೆಯ ಗೋಳು ಕೇಳುವವರಿಲ್ಲ

  • ವಾರದ ಹಿಂದೆ ನಿವೃತ್ತಿಗೊಂಡ ಮುಖ್ಯೋಪಾಧ್ಯಾಯರು. ಶಿಕ್ಷಕರಿಲ್ಲದೇ ಅತಂತ್ರರಾದ ಅನುದಾನಿತ ಶಾಲೆಯ ಮಕ್ಕಳು.
  • ಶಿಕ್ಷಕರನ್ನು ನೇಮಿಸಿ, ಇಲ್ಲವೇ ಸರ್ಕಾರದ ಸುಪರ್ದಿಗೆ ಪಡೆಯಿರಿ: ಶಿಕ್ಷಣಪ್ರೇಮಿಗಳ ಆಗ್ರಹ

ಕುಂದಾಪುರ: ಈ ಶಾಲೆಗೆ ಬರೋಬ್ಬರಿ 116 ವರ್ಷಗಳ ಇತಿಹಾಸವಿದೆ. ಶತಮಾನೋತ್ಸವದ ಸಂಭ್ರಮ ಕಂಡು ದಾನಿಗಳ ಸಹಕಾರದಿಂದ ಕಳೆದ ವರ್ಷವಷ್ಟೇ 115ನೇ ವರ್ಷದ ಅದ್ದೂರಿ ಕಾರ್ಯಕ್ರಮವೂ ನಡೆದು ಹೋಗಿದೆ. ಗ್ರಾಮೀಣ ಭಾಗದ ಸಹಸ್ರಾರು ಮಕ್ಕಳಿಗೆ ಆಸರೆಯಾಗಿದ್ದ ಈ ಶಾಲೆ ಇಂದು ಶಿಕ್ಷಕರಿಲ್ಲದೇ ಅತಂತ್ರ ಸ್ಥಿತಿಗೆ ಬಂದು ತಲುಪಿದ್ದು, ಶಿಕ್ಷಣ ಇಲಾಖೆಗಳ, ಆಳುವ ಸರ್ಕಾರಗಳ ಬೇಜವಾಬ್ದಾರಿಗಳಿಗೆ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಾಗಿದೆ.

ತಾಲೂಕಿನ ಬೈಂದೂರು ವಲಯದ ಗುಲ್ವಾಡಿ ಸರ್ವೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 78 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಇರುವ ಓರ್ವ ಶಿಕ್ಷಕರು ಮೇ 31 ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಈ ಶಾಲೆಯಲ್ಲಿ ಶಿಕ್ಷಕರಿಲ್ಲದೇ ಹಳೆ ವಿದ್ಯಾರ್ಥಿಗಳು ಎಸ್ಡಿಎಂಸಿ ಸಹಕಾರದಲ್ಲಿ ಐವರು ಗೌರವ ಶಿಕ್ಷಕರನ್ನು ನೇಮಿಸಿದ್ದಾರೆ.

ಗ್ರಾಮೀಣ ಭಾಗದ ಮಕ್ಕಳಿಗೆ ಆಸರೆ:
ಗುಲ್ವಾಡಿ ಭಾಗದ ಉದಯ ನಗರ, ಸೌಕೂರು ಕುದ್ರು, ಕಳುವಿನ ಬಾಗಿಲು, ದಾಸರಬೆಟ್ಟು, ಗುಡಾರ ಹಕ್ಲು ಸೇರಿದಂತೆ ಮೊದಲಾದ ಸುತ್ತು ಮುತ್ತಲಿನ ಊರಿನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ದಾಖಲಾತಿ ಜಾಸ್ತಿಯಾಗಿದೆ. 2012ರಿಂದ ಇಬ್ಬರು ಶಿಕ್ಷಕರು ಮಾತ್ರ ಸೇವೆ ಸಲ್ಲಿಸುತ್ತಿದ್ದು, ಕಳೆದ ವರ್ಷ ಮೇ ತಿಂಗಳಲ್ಲಿ ಅನಾರೋಗ್ಯದಿಂದ ಸಹ ಶಿಕ್ಷರೋರ್ವರು ಸಾವನ್ನಪ್ಪಿದ್ದು, ಶಾಲಾ ಮುಖ್ಯೋಪಾಧ್ಯಾಯರಾದ ಜಯಕರ ಶೆಟ್ಟಿ ಆ ಬಳಿಕ ಗೌರವ ಶಿಕ್ಷಕರ ನೆರವಿನಿಂದ ಶಾಲೆಯನ್ನು ಮುನ್ನಡೆಸಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಐವರು ಗೌರವ ಶಿಕ್ಷಕರ ಸಂಬಳವನ್ನು ಶಿಕ್ಷರೇ ಭರಿಸುತ್ತಿದ್ದು, ಕಳೆದ ವರ್ಷದಿಂದೀಚೆಗೆ ಹಳೆ ವಿದ್ಯಾರ್ಥಿಗಳು, ಶಾಲಾಭಿವೃದ್ದಿ ಸಮಿತಿ ಭರಿಸುತ್ತಿದೆ. ಮೂಖ್ಯೋಪಾಧ್ಯಾಯ ಜಯಕರ ಶೆಟ್ಟಿ ಅವರು ಮೇ 31 ರಂದು ಸೇವಾ ನಿವೃತ್ತಿ ಹೊಂದಿದ್ದು, ಇದೀಗ ಈ ಶಾಲೆಯ ಮಕ್ಕಳು ಶಿಕ್ಷಕರಿಲ್ಲದೇ ಅನಾಥರಾಗಿದ್ದಾರೆ.

ಸರ್ಕಾರಕ್ಕೆ ಹಸ್ತಾಂತರಿಸಲು ಮನವಿ:
ಶಿಕ್ಷಕರ ಕೊರತೆ, ಕೆಲವು ಮೂಲಭೂತ ಸಮಸ್ಯೆಗಳಿಂದಾಗಿ ಅನುದಾನಿತ ಶಾಲೆಯನ್ನು ಸರ್ಕಾರಕ್ಕೆ ಹಸ್ತಾಂತರಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮನವಿಯನ್ನೂ ಸಲ್ಲಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಈ ಪ್ರಯತ್ನ ಚಾಲ್ತಿಯಲ್ಲದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಮನವಿಗೆ ಸ್ಪಂದಿಸಿಲ್ಲ. ಸಹಸ್ರಾರು ಮಕ್ಕಳಿಗೆ ವಿದ್ಯಾರ್ಜನೆ ಮಾಡಿದ ಶಾಲೆಯನ್ನು ಉಳಿಸಿಕೊಳ್ಳಬೇಕು ಎನ್ನುವುದು ಹಳೆ ವಿದ್ಯಾರ್ಥಿಗಳ ಹಾಗೂ ಶಾಲಾಭಿವೃದ್ದಿ ಸಮಿತಿಯ ಪ್ರಯತ್ನಗಳಿಗೆ ಇನ್ನೂ ಜಯ ಸಿಕ್ಕಿಲ್ಲ. ಆಡಳಿತ ಮಂಡಳಿಯೊಳಗಿನ ಒಳಜಗಳ ಕೋರ್ಟ್ ಮೆಟ್ಟಿಲೇರಿದ್ದು, ಕಳೆದ ಇಪ್ಪತ್ತು ವರ್ಷಗಳಿಂದ ಆಡಳಿತ ಮಂಡಳಿ ಇಲ್ಲದೇ ಶಾಲೆ ಕಾರ್ಯಾಚರಿಸುತ್ತಿದೆ. ಇದೀಗ ಆಡಳಿತ ಮಂಡಳಿಗೆ ಸಂಬಂಧಪಟ್ಟವರು ಸರ್ಕಾರಕ್ಕೆ ಹಸ್ತಾಂತರಿಸಲು ಒಪ್ಪಿಗೆ ನೀಡಿದ್ದಾರೆ.

ಶಾಲೆಯ ಸಾಧನೆ:
ಈ ಶಾಲೆಯಲ್ಲಿ ಕಲಿತವರು ಇಂದು ಅನೇಕ ಹುದ್ದೆಗಳಲ್ಲಿದ್ದಾರೆ. ಪಿಎಸ್ಐ, ಕೆಎಎಸ್, ನ್ಯಾಯಧೀಶ, ವೈದ್ಯ, ಲೇಖಕರೂ ಸೇರಿಂದತೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಿಂದೆ ವಾಲಿಬಾಲ್ನಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು, ಸಾಂಸ್ಕøತಿಕ ಕ್ಷೇತ್ರದಲ್ಲೂ ಗಣನೀಯ ಸಾಧನೆಗೈದಿದ್ದಾರೆ. 1ರಿಂದ 7ನೇ ತರಗತಿ ತನಕ ಇದ್ದು, ಒಟ್ಟು 8 ಕೊಠಡಿಗಳಿವೆ. ಒಂದು ಶಾಲಾ ಕಚೇರಿ ಸೇರಿದಂತೆ ಅಕ್ಷರದಾಸೋಹ ಕೊಠಡಿ ಇದೆ. ವಿಸ್ತೀರ್ಣವಾದ ಮೈದಾನ ಹೊಂದಿದ್ದು, ಶಾಲೆಯ ಎರಡು ಎಕರೆ ಜಾಗ ಸರ್ಕಾರದ ಹೆಸರಲ್ಲಿದೆ.

ನಿವೃತ್ತಿಯಾದರೂ ಶಾಲೆಗೆ ಬರುವ ಶಿಕ್ಷಕ:
ಅನುದಾನಿತ ಶಾಲೆಗೆ 40:1 ಅನುಪಾತದಡಿಯಲ್ಲಿ ಶಿಕ್ಷಕರನ್ನು ನೇಮಿಸಲಾಗುತ್ತದೆ. ಪ್ರಸ್ತುತ 78 ವಿದ್ಯಾರ್ಥಿಗಳಿದ್ದು, ದಾಖಲಾತಿಯೂ ಚಾಲ್ತಿಯಲ್ಲಿದೆ. ಪ್ರಸ್ತುತ ವಿದ್ಯಾರ್ಥಿಗಳ ಸಂಖ್ಯೆ ಗಣನೆಗೆ ತೆಗೆದುಕೊಂಡರೆ ಕನಿಷ್ಠ ಇಬ್ಬರು ಶಿಕ್ಷರನ್ನಾದರು ಇಲಾಖೆ ನೇಮಿಸಲೇಬೇಕು. ಕಳೆದ ಒಂದು ವಾರಗಳ ಹಿಂದೆ ಈ ಶಾಲೆಯ ಮುಖ್ಯೋಪಾಧ್ಯಾಯ ಜಯಕರ ಶೆಟ್ಟಿಯವರು ನಿವೃತ್ತಿಗೊಂಡರೂ ಶಿಕ್ಷಕರಿಲ್ಲದ ಕಾರಣ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಗೌರವ ಶಿಕ್ಷಕಿಯರಿಗೆ ಸಲಹೆಗಳನ್ನು ನೀಡುತ್ತಾ ಎಂದಿನಂತೆ ಶಾಲೆಗೆ ಬಂದು ಪಾಠ ಪ್ರವಚನಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

116 ವರ್ಷಗಳ ಇತಿಹಾಸವಿರುವ ಶಾಲೆಗೆ ಇದೀಗ ಒಬ್ಬರೇ ಒಬ್ಬ ಶಿಕ್ಷಕರಿಲ್ಲ. ಅನುದಾನಿತ ಶಾಲೆಗೆ ಶಿಕ್ಷಕರ ನೇಮಕಾತಿ ವಿಳಂಬವಾಗುತ್ತಿರುವುದು ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಲಿದೆ. ನಾವೆಲ್ಲರೂ ಸೇರಿ ಗೌರವ ಶಿಕ್ಷಕರನ್ನು ನೇಮಿಸಿಕೊಂಡು ಶಾಲೆಯನ್ನು ಮುನ್ನಡೆಸುತ್ತಿದ್ದೇವೆ. ಸರ್ಕಾರಕ್ಕೆ ಹಸ್ತಾಂತರ ಆಗಬೇಕೆನ್ನುವುದು ನಮ್ಮೆಲ್ಲರ ಬೇಡಿಕೆ. ಶಿಕ್ಷಣ ಇಲಾಖೆ ಈ ಬಗ್ಗೆ ಗಮನಹರಿಸಬೇಕು ಎನ್ನುವುದು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುದೀಶ್ ಕುಮಾರ್ ಶೆಟ್ಟಿ ಆಗ್ರಹ

ಒಂದು ಕಾಲದಲ್ಲಿ 8 ಶಿಕ್ಷಕರಿದ್ದು, 600 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದ ಶಾಲೆ ಇಂದು ಮಕ್ಕಳಿದ್ದು, ಮುಚ್ಚುವ ಹಂತಕ್ಕೆ ತಲುಪಿರುವುದು ದುರದೃಷ್ಟಕರ. ಸಂಬಧಪಟ್ಟ ಇಲಾಖೆಗೆ ಮನವಿ ಕೊಟ್ಟು ಬೇಸತ್ತು ಹೋಗಿದ್ದೇವೆ. ತಕ್ಷಣವೇ ಶಿಕ್ಷಕರನ್ನು ನೇಮಿಸಬೇಕು. ಇಲ್ಲವಾದರೆ ಸರ್ಕಾರಕ್ಕೆ ಶಾಲೆ ಹಸ್ತಾಂತರವಾಗಬೇಕು ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಇಸ್ಮಾಯಿಲ್ ಒತ್ತಾಯಿಸಿದ್ದಾರೆ.


Spread the love