ಯುವತಿಯರ ಮೇಲೆ ಹಲ್ಲೆಆರೋಪ – 9 ಮಂದಿ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು
ಉಪ್ಪಿನಂಗಡಿ: ಕಾರನ್ನು ಅಕ್ರಮವಾಗಿ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಹಾಗೂ ಜೀವ ಬೆದರಿಕೆ ಒಡ್ಡಿದ ಘಟನೆಗೆ ಸಂಬಂಧಿಸಿದಂತೆ ಒಂಬತ್ತು ಮಂದಿ ಆರೋಪಿಗಳ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ಠಾಣಾ ವ್ಯಾಪ್ತಿಯ ನಿವಾಸಿ ಫಾಯಿಝಾ (18) ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದೂರುದಾರರಾದ ಫಾಯಿಝಾ ಅವರು ಆಗಸ್ಟ್ 12ರ ರಾತ್ರಿ ಕೆಲಸ ಮುಗಿಸಿಕೊಂಡು ತಮ್ಮ ಪರಿಚಯದ ಸಿಪ್ನಾನ್, ಝಾಹಿರ್ ಹಾಗೂ ಸಫಿಯಾ ಅವರೊಂದಿಗೆ ಕಾರಿನಲ್ಲಿ ಮನೆಗೆ ಆಗಮಿಸಿದ್ದರು. ಫಾಯಿಝಾ ಅವರನ್ನು ಅವರ ಮನೆಯ ಬಳಿ ಬಿಟ್ಟು ಉಳಿದ ಮೂವರು ಹಿಂತಿರುಗುತ್ತಿದ್ದಾಗ, ಕಡಬ ತಾಲೂಕಿನ ಕೊಣಾಲು ಗ್ರಾಮದ ಕೋಲ್ಪೆ ಎಂಬಲ್ಲಿ ಆರೋಪಿಗಳು ಕಾರನ್ನು ಅಕ್ರಮವಾಗಿ ತಡೆದು ಗಲಾಟೆ ಮಾಡಿದ್ದಾರೆ.
ಆರೋಪಿಗಳಾದ ಜಾಬಿರ್, ಸಿದ್ದೀಕ್, ಉನೈಸ್, ರಂಶಿಕ್, ಸಂಶುದ್ದೀನ್, ಜಾಫರ್, ಆಶಿತ್, ಆಚೂರು ಅಲಿಯಾಸ್ ಅಶ್ರಫ್ ಹಾಗೂ ಅಶ್ರಫ್ ಕೋಲ್ಪೆ ಎಂಬವರುಗಳು ಕಾರಿನಲ್ಲಿದ್ದವರನ್ನು ಅಕ್ರಮವಾಗಿ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ದೂರುದಾರ ಫಾಯಿಝಾ, ಜಮಾಲ್ ಹಾಗೂ ದೂರುದಾರರ ತಂಗಿಯ ಮೇಲೆಯೂ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ 107/2026ರಲ್ಲಿ ಬಿಎನ್ಎಸ್ (ಭಾರತೀಯ ನ್ಯಾಯ ಸಂಹಿತೆ) ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
