ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಆಟಿಡೊಂಜಿ ದಿನ ಆಚರಣೆ
ಉಡುಪಿ: ತುಳುನಾಡಿನಲ್ಲಿ ಬಾಳಿ ಬದುಕಿದ ಹಿರಿಯರು ಪ್ರಕೃತಿಯಲ್ಲಿ ದೊರೆಯುವ ಮರಗಿಡ, ಬಳ್ಳಿ, ಗೆಡ್ಡೆ ಮುಂತಾದವುಗಳನ್ನು ಆಹಾರ, ಔಷಧಿಯಾಗಿ ಬಳಸಿಕೊಂಡು ಆಟಿ ತಿಂಗಳ ಕಷ್ಟದ ದಿನಗಳಲ್ಲಿ ರೋಗರುಜಿನ ಬಾಧಿಸದಂತೆ ಬದುಕಿದ್ದರು. ಇಲ್ಲಿನ ಎಲ್ಲಾ ಹಬ್ಬಗಳಿಗೆ ಕೃಷಿ ಮೂಲವಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಆಚರಣೆ ಬೆಳೆದು ಬಂದಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಸೋಮವಾರ ಜಿಲ್ಲಾ ಕಾಂಗ್ರೆಸ್ ಭನವದಲ್ಲಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ ಆಟಿಡೊಂಜಿ ದಿನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಆಟಿ ತಿಂಗಳು ತುಳುವರಲ್ಲಿ ಬಹಳ ಸಂಕಷ್ಟದ ಸಮಯವಾಗಿತ್ತು. ಎಡೆಬಿಡದೆ ಸುರಿಯುವ ಮಳೆ, ಬೇಸಾಯ ಕೆಲಸ ಆಯಾಸ, ರೋಗರುಜಿನಗಳ ಪ್ರಸಾರ, ಆಹಾರದ ಕೊರತೆ ಬಹಳವಿತ್ತು. ಈ ಸಂದರ್ಭ ಹಿರಿಯರು ಪ್ರಕೃತಿದತ್ತವಾಗಿ ಸಿಗುತ್ತಿದ್ದ ಗಡ್ಡೆಗೆಣಸು, ಹಲಸು, ಸೊಪ್ಪು, ತರಕಾರಿಗಳನ್ನು ತಿಂದು ತಮ್ಮ ಆರೋಗ್ಯ ಕಾಪಾಡಿಕೊಂಡಿದ್ದರು. ಇಂದಿನ ಯುವ ಸಮುದಾಯಕ್ಕೆ ಇದರ ಪರಿಚಯವನ್ನು ಮಾಡುವ ಅಗತ್ಯವಿದೆ ಎಂದರು.
ಸಭಾ ಕಾರ್ಯಕ್ರಮದ ಬಳಿಕ ವಿವಿಧ ಬಗೆಯ ಆಟಿ ಖಾದ್ಯಗಳನ್ನು ಸಭಿಕರಿಗೆ ಉಣ ಬಡಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯಡ್ಕ ಕಾಲೇಜಿನ ಉಪನ್ಯಾಸಕಿಶಾಲಿನಿ ಆಟಿ ಆಚರಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜ್ಯೋತಿ ಹೆಬ್ಬಾರ್, ನಾಯಕರಾದ ಕಿಶನ್ ಹೆಗ್ಡೆ ಕೊಳಕೆಬೈಲು, ನಮಿತಾ ರಾವ್, ಹರೀಶ್ ಕಿಣಿ, ಸರಸು ಡಿ ಬಂಗೇರಾ, ನಿರೀಕ್ಷಾ ಮೆಂಡನ್ ಹಾಗೂ ಇತರರು ಉಪಸ್ಥಿತರಿದ್ದರು.
