ಮಲ್ಪೆ ಬಂದರಿನಲ್ಲಿ ಮೀನು ಏಲಂ ಮಾಡುತ್ತಿದ್ದ ಕಾರ್ಮಿಕನ ಮೇಲೆ ಹಲ್ಲೆ ಖಂಡನೀಯ: ಹಮ್ಮದ್ ಉಡುಪಿ
ಉಡುಪಿ: ಮಲ್ಪೆ ಬಂದರಿನಲ್ಲಿ ದಿನನಿತ್ಯ ಬೆಳಿಗ್ಗೆ ಬಂದು ಮೀನು ಏಲಂ ಮಾಡಿ ಜೀವನ ಸಾಗಿಸುತ್ತಿದ್ದ ಬಡ ಕಾರ್ಮಿಕ ಶೇಖ್ ಅಯ್ಯುಬ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯವಾಗಿದ್ದು ಆರೋಪಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಹಮ್ಮದ್ ಅವರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ವೃತ್ತಿಯಲ್ಲಿ ಸಾವಿರಾರು ಜನರು ಜೀವನ ನಡೆಸುತ್ತಿದ್ದು, ಅದರಂತೆ ಮೀನು ಏಲಂ ಮಾಡಿಕೊಡುವ ವೃತ್ತಿ ನಿರ್ವಹಿಸಿಕೊಂಡಿದ್ದ ಶೇಖ್ ಅಯ್ಯಬ್ ಎನ್ನುವ ಕಾರ್ಮಿಕನ ಮೇಲೆ ಮಿಥುನ್ ಕರ್ಕೇರಾ ಎಂಬವರು ಮಾರಣಾಂತಿಕ ಹಲ್ಲೆ ನಡೆಸಿರುವುದು ಮತ್ತು ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಸ್ಥಳೀಯರು ಹಾಗೂ ಹೊರ ಜಿಲ್ಲೆಯಿಂದ ಬಂದು ಮೀನುಗಾರಿಕಾ ವೃತ್ತಿಯನ್ನು ನಿರ್ವಹಿಸುತ್ತಿದ್ದು ಬಡ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಹಲ್ಲೆ ,ದಬ್ಬಾಳಿಕೆ, ದೌರ್ಜನ್ಯ ನಡೆಸುವುದು ಹೆಚ್ಚಾಗುತ್ತಿದೆ. ಬಲಾಡ್ಯರ ಮುಂದೆ ಬಡ ಕಾರ್ಮಿಕರ ನೋವಿಗೆ ದನಿಯಾಗುವರು ಯಾರು ಇಲ್ಲದಂತಾದ ಪರಿಸ್ಥಿತಿ ಬಂದರಿನಲ್ಲಿ ನಿರ್ಮಾಣವಾಗಿದೆ.
ಇಂತಹ ಘಟನೆಗಳು ನಡೆದಾಗ ಮೀನುಗಾರಿಕಾ ಇಲಾಖೆ, ಪೊಲೀಸ್ ಇಲಾಖೆ ಇಂತಹ ಆರೋಪಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ವಹಿಸಬೇಕು. ಬಡ ಕಾರ್ಮಿಕ ಅಯ್ಯುಬ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಪೊಲೀಸರು ಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸುವಂತೆ ಹಾಗೂ ಪೊಲೀಸ್ ಇಲಾಖೆಯ ಮೂಲಕ ಬಂದರಿನಲ್ಲಿ ವೃತ್ತಿನಿರತ ಕಾರ್ಮಿಕರಲ್ಲಿ ಭರವಸೆ ಮೂಡಿಸುವ ಕೆಲಸ ಮಾಡಬೇಕು. ಬಂದರಿನ ಒಳಗೆ ಕಾರ್ಮಿಕರ ರಕ್ಷಣೆಗೆ ಸೂಕ್ತ ಮಾಡಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
