ಬೆಳ್ತಂಗಡಿ | ಬೈಕ್ ಕಳವು ಯತ್ನ, ಹಲ್ಲೆ ಹಾಗೂ ಗುಂಪು ದೌರ್ಜನ್ಯ: ವೇಣೂರು ಠಾಣೆಯಲ್ಲಿ ಎರಡು ಪ್ರಕರಣ ದಾಖಲು
ಬೆಳ್ತಂಗಡಿ: ತಾಲೂಕಿನ ಮರೋಡಿ ಗ್ರಾಮದ ಪಳಾರಗೋಳಿ ಪ್ರದೇಶದಲ್ಲಿ ಬೈಕ್ ಕಳವು ಯತ್ನ, ಹಲ್ಲೆ ಹಾಗೂ ಗುಂಪು ದೌರ್ಜನ್ಯಕ್ಕೆ ಸಂಬಂಧಿಸಿದಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ದಿನಾಂಕ 20-01-2026 ರಂದು ಬೆಳಗಿನ ಜಾವ 2.10 ರಿಂದ 2.30ರ ಅವಧಿಯಲ್ಲಿ ಮರೋಡಿ ಗ್ರಾಮದ ನಿವಾಸಿ ದೇವಿಪ್ರಸಾದ್ (22) ಅವರ ಮನೆಯ ಬಳಿ ಆರೋಪಿತರಾದ ಮೋಯಿದಿನ್ ನಾಸೀರ್ ಹಾಗೂ ಅಬ್ದುಲ್ ಸಮದ್ ಎಂಬವರು ಪಿರ್ಯಾದಿದಾರರ ಬೈಕ್ ಕಳವು ಮಾಡಿಕೊಂಡು ಹೋಗಲು ಯತ್ನಿಸಿದ್ದಾರೆ. ಈ ವೇಳೆ ಪಿರ್ಯಾದಿದಾರರು ತಡೆಯಲು ಮುಂದಾದಾಗ ಆರೋಪಿತರು ಹಲ್ಲೆ ನಡೆಸಿ ಬೈಕ್ನೊಂದಿಗೆ ಪರಾರಿಯಾಗಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 02/2026 ಕಲಂ 303(2), 307 ಭಾರತೀಯ ನ್ಯಾಯ ಸಂಹಿತೆ–2023ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ಘಟನೆಗೆ ಸಂಬಂಧಿಸಿದಂತೆ, ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಬೈಕ್ ತೆಗೆದುಕೊಂಡು ಹೋಗುವ ವೇಳೆ ಸುಮಾರು 25ರಿಂದ 30 ಜನರ ಅಕ್ರಮ ಕೂಟ ಸೇರಿ ಪಿರ್ಯಾದಿದಾರರು ಹಾಗೂ ಅವರ ಸ್ನೇಹಿತನನ್ನು ಸುತ್ತುವರಿದು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಾಗೂ ಮರದ ಕೋಲಿನಿಂದ ಹಲ್ಲೆ ನಡೆಸಿ, ಮರಕ್ಕೆ ಕಟ್ಟಿಹಾಕಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಬೇಂಗ್ರೆ ಕುಳೂರು, ಮಂಗಳೂರು ನಿವಾಸಿ ಅಬ್ದುಲ್ ಸಮದ್ (29) ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 03/2026 ಕಲಂ 189(2), 191(2), 191(3), 352, 115(2), 118(1), 351(2) ಹಾಗೂ 190 ಬಿಎನ್ಎಸ್–2023ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಎರಡೂ ಪ್ರಕರಣಗಳನ್ನು ಪೊಲೀಸರು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದಾರೆ.
