Home Mangalorean News Kannada News ಭಟ್ಕಳ | ಚಿಪ್ಪು ಸಂಗ್ರಹಿಸಲು ನದಿಗೆ ಇಳಿದಿದ್ದ ಒಂದೇ ಕುಟುಂಬದ 8 ಮಂದಿ ನೀರುಪಾಲು

ಭಟ್ಕಳ | ಚಿಪ್ಪು ಸಂಗ್ರಹಿಸಲು ನದಿಗೆ ಇಳಿದಿದ್ದ ಒಂದೇ ಕುಟುಂಬದ 8 ಮಂದಿ ನೀರುಪಾಲು

Spread the love

ಭಟ್ಕಳ | ಚಿಪ್ಪು ಸಂಗ್ರಹಿಸಲು ನದಿಗೆ ಇಳಿದಿದ್ದ ಒಂದೇ ಕುಟುಂಬದ 8 ಮಂದಿ ನೀರುಪಾಲು

ಭಟ್ಕಳ : ತಾಲೂಕಿನ ಅಳ್ವೇಕೋಡಿ ಸಮುದ್ರ ತೀರದಲ್ಲಿ ರವಿವಾರ ಸಂಭವಿಸಿದ ಭೀಕರ ದುರಂತದಲ್ಲಿ, ಚಿಪ್ಪು ತೆಗೆಯಲು ನೀರಿಗೆ ಇಳಿದಿದ್ದ ಒಂದೇ ಕುಟುಂಬದ ಎಂಟು ಮಂದಿ ನೀರುಪಾಲಾಗಿದ್ದಾರೆ. ಘಟನೆಯಲ್ಲಿ ಮೂವರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಲಕ್ಷ್ಮೀ ಮಾದೇವ ನಾಯ್ಕ(38), ಲಕ್ಷ್ಮೀ ಶಿವರಾಮ್ ನಾಯ್ಕ(39), ಮಾಲತಿ ಜಟ್ಟಪ್ಪ ನಾಯ್ಕ(38), ಮಾಸ್ತಮ್ಮ ಮಂಜುನಾಥ ನಾಯ್ಕ(43), ಲಕ್ಷ್ಮೀ ನಾಯ್ಕ, ಲಕ್ಷ್ಮೀ ಅಣ್ಣಪ್ಪ ನಾಯ್ಕ(44), ಜ್ಯೋತಿ ನಾಯ್ಕ(37) ಉಮೇಶ್ ಮಂಜುನಾಥ ನಾಯ್ಕ(42) ಮೃತರು. ಮೃತರು ಒಂದೇ ಕುಟುಂಬದ ಪಡುಶಿರಾಲಿ ಶಾರದಹೊಳೆ ನಿವಾಸಿಗಳು.

ಒಂದೇ ಕುಟುಂಬದ 13 ಮಂದಿ ರವಿವಾರ ರಜೆಯ ಹಿನ್ನೆಲೆಯಲ್ಲಿ ಅಳ್ವೇಕೋಡಿ ಸಮುದ್ರ ತೀರಕ್ಕೆ ವಿಹಾರಕ್ಕೆ ತೆರಳಿದ್ದರು. ಈ ವೇಳೆ ಸಮುದ್ರದ ಬಳಿಯ ನದಿಯಲ್ಲಿ ಕೆಲವರು ಚಿಪ್ಪು ಸಂಗ್ರಹಿಸಲು ನೀರಿಗೆ ಇಳಿದಾಗ, ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಮೃತಪಟ್ಟ ಎಂಟು ಮಂದಿಯ ಪೈಕಿ ಆರು ಮೃತದೇಹಗಳನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ಹಾಗೂ ಉಳಿದ ಎರಡು ಮೃತದೇಹಗಳನ್ನು ಆರ್.ಎನ್.ಎಸ್. ಆಸ್ಪತ್ರೆಗೆ ರವಾನಿಸಲಾಗಿದೆ. ಒಂದೇ ಕುಟುಂಬದ ಎಂಟು ಮಂದಿಯನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ನಾಪತ್ತೆಯಾದ ಮೂವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.


Spread the love

Exit mobile version