ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಸುಲಿಗೆಗೆ ಯತ್ನ ಆರೋಪ: ಪ್ರಕರಣ ದಾಖಲು
ಸುಳ್ಯ: ಐವರ್ನಾಡಿನಲ್ಲಿ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಿ ಕಾರಿಗೆ ಹತ್ತುವಾಗ ಅಪರಿಚಿತ ವ್ಯಕ್ತಿಗಳು ಕಾರಿನ ಚಾಲಕನಿಗೆ ಖಾರದ ಪುಡಿ ಎರಚಿ ಸುಲಿಗೆಗೆ ಯತ್ನಿಸಿದ್ದಾರೆ ಎನ್ನಲಾದ ಘಟನೆ ಶುಕ್ರವಾರ ರಾತ್ರಿ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಮಿಳುನಾಡಿನ ಗುಡಲೂರು ನೀಲಗಿರಿಯ ಅರುಣ್ ಕುಮಾರ್ ಎಂಬವರು ತಮಿಳುನಾಡಿನಿಂದ ಮೈಸೂರು ಆಗಿ ಸುಳ್ಯ ಕಡೆಯಿಂದ ಬೆಳ್ಳಾರೆ ಮಾರ್ಗವಾಗಿ ಮರ್ಧಾಳಕ್ಕೆ ಹೋಗುವಾಗ ರಾತ್ರಿ 12.00 ಗಂಟೆ ಸಮಯಕ್ಕೆ ಐವರ್ನಾಡು ಗ್ರಾಮದ ಪುತ್ತಿಲ ಸಮೀಪ ತಿರುವಿನಲ್ಲಿ ಮೂತ್ರ ವಿಸರ್ಜನೆಗೆ ಕಾರು ನಿಲ್ಲಿಸಿದರು. ಬಳಿಕ ಕಾರು ಚಲಾಯಿಸಲು ಕಾರಿನ ಹತ್ತಿರ ಬಂದಾಗ ದೂರದಿಂದ ವಿಶಲ್ ಹಾಕಿದ ಶಬ್ದ ಕೇಳಿದ್ದು ಈ ವೇಳೆ ಕಾರಿನ ಮೇಲೆ ಕಲ್ಲು ಎಸೆದುದಿದ್ದಾರೆ. ಕಲ್ಲು ಕಾರಿನ ಗ್ಲಾಸಿಗೆ ಬಿದ್ದಿದ್ದು ಕಾರಿನ ಮುಂದಿನ ಗ್ಲಾಸ್ ಬಿರುಕುಬಿಟ್ಟಿದೆ. ಈ ವೇಳೆ ಕಾರನ್ನು ಮುಂದೆ ಚಲಿಸಲು ಪ್ರಯತ್ನಿಸಿದಾಗ ಇಬ್ಬರು ಬೈಕಲ್ಲಿ ಬಂದ ವ್ಯಕ್ತಿಗಳು ಅರುಣ್ ಅವರ ಶರ್ಟ್ ಕಾಲರ್ ಹಿಡಿದೆಳೆದು ಮುಖದ ಮೇಲೆ ಖಾರದ ಪುಡಿ ಎರಚಿದ್ದು ಅರುಣ್ ತಪ್ಪಿಸಿಕೊಂಡು ಮುಂದೆ ಹೋಗಿ ರಸ್ತೆ ಬದಿ ಇದ್ದವರಲ್ಲಿ ಘಟಣೆಯ ಬಗ್ಗೆ ತಿಳಿಸಿದ್ದಾರೆ. ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಅಪರಿಚಿತರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಅರುಣ್ ಕುಮಾರ್ ಅವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
