ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿ’ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಡಾ. ಎಚ್. ಪ್ರಭಾಕರ್ ಆಯ್ಕೆ
ಮಂಗಳೂರು: ಮಂಗಳೂರಿನ ಖ್ಯಾತ ಹಾಗೂ ಪ್ರಥಮ ಇಂಟರ್ ವೆನ್ಶನಲ್ ಕಾರ್ಡಿಯಾಲಜಿಸ್ಟ್ (ಹೃದ್ರೋಗ ತಜ್ಞ) ಹಾಗೂ ಈ ಕ್ಷೇತ್ರದ ಮುಂಚೂಣಿಯ ಪ್ರವರ್ತಕರಾಗಿರುವ ಡಾ. ಎಚ್. ಪ್ರಭಾಕರ್ ಅವರು, ಪ್ರತಿಷ್ಠಿತ ‘ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿ’ಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕೊಚ್ಚಿಯಲ್ಲಿ ನಡೆದ ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿ’ ರಾಷ್ಟ್ರೀಯ ಸಮಾವೇಶದಲ್ಲಿ ಅವರು ಆಯ್ಕೆಯಾದರು.
ಇದು ಹೃದ್ರೋಗ ಚಿಕಿತ್ಸಾ ವಿಜ್ಞಾನದ (ಕಾರ್ಡಿಯಾಲಜಿ) ಪ್ರಗತಿಗೆ ಅವರು ನೀಡಿರುವ ಅತ್ಯುತ್ತಮ ಕೊಡುಗೆಗಳು ಹಾಗೂ ವೈದ್ಯಕೀಯ ಸಮುದಾಯಕ್ಕೆ ಅವರು ಸಲ್ಲಿಸಿರುವ ಸಮರ್ಪಿತ ಸೇವೆಗೆ ಸಂದ ಪ್ರತಿಷ್ಠಿತ ಗೌರವವಾಗಿದೆ.
ಕರಾವಳಿ ಕರ್ನಾಟಕ, ಮಲೆನಾಡು ಮತ್ತು ಉತ್ತರ ಕೇರಳಾದ್ಯಂತ ಇಂಟರ್ ವೆನ್ಶನಲ್ ಕಾರ್ಡಿಯಾಲಜಿ ವಿಧಾನವನ್ನು ಪರಿಚಯಿಸುವಲ್ಲಿ ಮತ್ತು ವಿಸ್ತರಿಸುವಲ್ಲಿ ಡಾ. ಎಚ್. ಪ್ರಭಾಕರ್ ಅವರು ಮುಂಚೂಣಿಯ ಪಾತ್ರವನ್ನು ವಹಿಸಿದ್ದಾರೆ. ಈ ಪ್ರದೇಶದಲ್ಲಿ ಕೊರೊನರಿ ಆಂಜಿಯೋಪ್ಲಾಸ್ಟಿ, ಜನ್ಮಜಾತ ಹೃದಯ ಸಂಬಂಧಿತ ದೋಷಗಳಿಗೆ ಸಾಧನದ ಮೂಲಕ ಚಿಕಿತ್ಸೆ , ವಾಲ್ವುಲೋಪ್ಲಾಸ್ಟಿ ಮತ್ತು ಇತರ ಸಂಕೀರ್ಣ ಹೃದಯ ಚಿಕಿತ್ಸಾ ವಿಧಾನಗಳನ್ನು ಪರಿಚಯಿಸಿದ ಹಾಗೂ ಯಶಸ್ವಿಯಾಗಿ ನಿರ್ವಹಿಸಿದ ಮೊಟ್ಟಮೊದಲ ಇಂಟರ್ ವೆನ್ಶನಲ್ ಕಾರ್ಡಿಯಾಲಜಿಸ್ಟ್ಗಳಲ್ಲಿ ಇವರೂ ಒಬ್ಬರು.
ಕಳೆದ 25 ವರ್ಷಗಳಿಂದ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮುಖ್ಯ ಇಂಟರ್ ವೆನ್ಶನಲ್ ಕಾರ್ಡಿಯಾಲಜಿಸ್ಟ್ ಆಗಿ ಹೃದಯರೋಗ ವಿಭಾಗವನ್ನು ಮುನ್ನಡೆಸುತ್ತಿರುವ ಅವರು ಈ ಪ್ರದೇಶದಲ್ಲಿ ಸಾವಿರಾರು ಹೃದಯ ಚಿಕಿತ್ಸಾ ಪ್ರಕ್ರಿಯೆಗಳಲ್ಲಿ ಭಾಗಿಯಾಗಿದ್ದಾರೆ. ಅವರ ಸಮರ್ಪಣಾ ಭಾವ, ಪರಿಣತಿ ಮತ್ತು ಬದ್ಧತೆಯು ಕರ್ನಾಟಕದಾದ್ಯಂತ ರೋಗಿಗಳಿಗೆ ಅತ್ಯಾಧುನಿಕ ಹೃದಯ ಚಿಕಿತ್ಸೆಯ ಲಭ್ಯತೆಯನ್ನು ಹೆಚ್ಚಿಸುವಲ್ಲಿ ಮಹತ್ತರ ಕೊಡುಗೆ ನೀಡಿದೆ. ಅವರಿಗೆ ರಾಜ್ಯ ಮಟ್ಟದ ‘ಆರ್ಯಭಟ ಪ್ರಶಸ್ತಿ’ ಮತ್ತು ‘ರಾಜ್ಯ ಆರೋಗ್ಯ ನಾಯಕತ್ವ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗಿದೆ.
ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಹೃದ್ರೋಗ ಸಮ್ಮೇಳನವನ್ನು ಆಯೋಜಿಸಿದ ಮೊದಲ ಹೃದ್ರೋಗ ತಜ್ಞರು ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ, ಆ ಮೂಲಕ ಮಂಗಳೂರು ನಗರವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಹೃದ್ರೋಗ ನಕ್ಷೆಯಲ್ಲಿ ಇರಿಸಿದ್ದಾರೆ. ಅವರು ಈ ಸ್ಪೇಷ್ಯಾಲಿಟಿಯ ಶೈಕ್ಷಣಿಕ ಪ್ರಗತಿಗೆ ಸಕ್ರಿಯ ಕೊಡುಗೆ ನೀಡಿದ್ದಾರೆ ಮತ್ತು ಮಂಗಳೂರಿನಲ್ಲಿ ಹಲವಾರು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಹೃದ್ರೋಗ ಸಮ್ಮೇಳನಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಅವರ ವೃತ್ತಿಪರ ನಾಯಕತ್ವವು ಕ್ಲಿನಿಕಲ್ ಪ್ರಾಕ್ಟಿಸ್ ಮೀರಿ ವಿಸ್ತರಿಸಿದೆ. ಅವರು ಇಂಡಿಯನ್ ಕಾರ್ಡಿಯಾಲಜಿ ಸೊಸೈಟಿಯ ಕರ್ನಾಟಕ ಚಾಪ್ಟರ್ ನ ಉಪಾಧ್ಯಕ್ಷರಾಗಿ ಮತ್ತು ಮಂಗಳೂರು ಅಸೋಸಿಯೇಷನ್ ಆಫ್ ಫಿಸಿಷನ್ಸ್ ಆಫ್ ಇಂಡಿಯಾ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಕಳೆದ 15 ವರ್ಷಗಳಿಂದ ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ನಾಯಕತ್ವದ ಸ್ಥಾನಗಳ ಮೂಲಕ, ಅವರು ವೃತ್ತಿಪರ ಅಭಿವೃದ್ಧಿ, ವೈದ್ಯಕೀಯ ಶಿಕ್ಷಣ ಮತ್ತು ಹೃದಯ ರಕ್ತನಾಳದ ಆರೈಕೆಯ ಪ್ರಚಾರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ.
‘ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿ’ಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಡಾ. ಎಚ್ . ಪ್ರಭಾಕರ್ ಅವರು ಆಯ್ಕೆಯಾಗಿರುವುದು, ಅವರ 25 ವರ್ಷಗಳ ವೈದ್ಯಕೀಯ ಶ್ರೇಷ್ಠತೆ, ಇಂಟರ್ ವೆನ್ಶನಲ್ ಕಾರ್ಡಿಯಾಲಜಿ (interventional cardiology) ಕ್ಷೇತ್ರದಲ್ಲಿನ ಪ್ರವರ್ತಕ ಕೊಡುಗೆಗಳು, ಶೈಕ್ಷಣಿಕ ನಾಯಕತ್ವ ಹಾಗೂ ವೈದ್ಯಕೀಯ ಸಮುದಾಯಕ್ಕೆ ಅವರು ಸಲ್ಲಿಸಿದ ಅವಿರತ ಸೇವೆಗೆ ಸಂದ ಸೂಕ್ತ ಮನ್ನಣೆಯಾಗಿದೆ. ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿ’ಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಡಾ. ಎಚ್ . ಪ್ರಭಾಕರ್ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಚಾರಿಟೆಬಲ್ ಸಮೂಹ ಸಂಸ್ಥೆಗಳ ನಿರ್ದೇಶಕ ವಂದನೀಯ ಫಾ. ಫೌಸ್ತಿನ್ ಲೂಕಸ್ ಲೋಬೊ ಅವರು ಅಭಿನಂದಿಸಿದ್ದಾರೆ.
