ಆ. 24 ರಂದು ಕರಡು ಮತದಾರರ ಪಟ್ಟಿ ಪ್ರಕಟ, 63,331 ಮತದಾರರು ಕರಡುಪಟ್ಟಿಯಿಂದ ಹೊರಗೆ : ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ
ಉಡುಪಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ 2026 ರ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 24 ರಂದು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಹೇಳಿದರು.
ಅವರು ಬುಧವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ 2026 ರ ಸಂಬಂಧ ಕರಡು ಮತದಾರರ ಪಟ್ಟಿ ಪ್ರಕಟಣೆ ಮತ್ತು ಕರಡು ಪ್ರಕಟಣೆಯ ನಂತರದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ, ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪರಿಷ್ಕೃತ SIR-2026 ವೇಳಾಪಟ್ಟಿಯಂತೆ ಆಗಸ್ಟ್ 17 ಕ್ಕೆ ಎನ್ಯುಮರೇಷನ್ (Enumeration) ನಮೂನೆಗಳನ್ನು ಮನೆಮನೆಗೆ ತೆರಳಿ ಸಂಗ್ರಹಿಸುವ ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಆ. 24 ರಂದು ಬೆಳಿಗ್ಗೆ 11:00 ಗಂಟೆಗೆ ಕರಡು ಮತದಾರರ ಪಟ್ಟಿ ಪ್ರಕಟಣೆ ಮಾಡಲಾಗುವುದು ಹಾಗೂ ಪ್ರಕಟಗೊಂಡ ನಂತರ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಒಂದು ಮುದ್ರಿತ ಪ್ರತಿ ಹಾಗೂ ಒಂದು ಸಾಫ್ಟ್ ಕಾಪಿ ಪಟ್ಟಿಯನ್ನು ನೀಡಲಾಗುವುದು ಎಂದರು .
ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಮೊದಲ ಹಂತ ಮುಗಿದಿದ್ದು, ಜಿಲ್ಲೆಯ ಒಟ್ಟು 10,63,876 ಮತದಾರರ ಪೈಕಿ 10,00,545 ಮತದಾರರ ಗಣತಿ ನಮೂನೆಯನ್ನು ಡಿಜಿಟಲೈಸ್ ಮಾಡಲಾಗಿದೆ. ಉಳಿದಂತೆ ಎ.ಎಸ್.ಡಿ. ಡಿ ಪಟ್ಟಿಯಲ್ಲಿರುವ ಮೃತಪಟ್ಟ 21,262, ಶಾಶ್ವತವಾಗಿ ಸ್ಥಳಾಂತರಗೊಂಡ 29,361, ಗೈರು ಹಾಜರಾದ 4,145, ದ್ವಿಪ್ರತಿಯಲ್ಲಿ ಕಾರ್ಡ್ ಪಡೆದುಕೊಂಡ 8374 ಹಾಗೂ ಇತರೆ 189 ಮಂದಿ ಮತದಾರರು ಸೇರಿದಂತೆ ಒಟ್ಟು 63331 ಮತದಾರರು ವಿವಿಧ ಕಾರಣಗಳಿಂದ ಮತದಾರರ ಕರಡು ಪಟ್ಟಿಯಿಂದ ಹೊರಗುಳಿಯಲಿದ್ದಾರೆ ಎಂದರು.
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಾದ್ಯಂತ ಒಟ್ಟು 10,63,876 ಮತದಾರರ ಪೈಕಿ 97,697 ಮತದಾರರು (ಶೇ. 9.18) ವಿಚಾರಣಾ ಹಂತಕ್ಕೆ ಒಳಪಡಲಿದ್ದಾರೆ ಹಾಗೂ ERO/AERO ಹಂತದಲ್ಲಿ ಕನಿಷ್ಠ 7 ದಿನಗಳ ಮುಂಚಿತವಾಗಿ ವಿಚಾರಣೆ ನೋಟೀಸ್ ಜಾರಿ ಮಾಡಲಾಗುತ್ತದೆ. BLO ಗಳು ಮನೆ ಮನೆಗೆ ತೆರಳಿ ನೋಟೀಸ್ ತಲುಪಿಸಿ, ಸ್ವೀಕೃತಿ ಪಡೆದು, ಸ್ವೀಕರಿಸಿದವರ ಭಾವಚಿತ್ರದೊಂದಿಗೆ ECINET / BLO ಆ್ಯಪ್ನಲ್ಲಿ ಅಪ್ಲೋಡ್ ಮಾಡಲಿದ್ದಾರೆ. ನಿಗದಿಪಡಿಸಿದ ಸ್ಥಳಗಳಲ್ಲಿ ವಿಚಾರಣೆ ನಡೆಸಿ ಸೂಕ್ತ ದಾಖಲೆಗಳನ್ನು ಪರಿಶೀಲಿಸಿದ ನಂತರ ERO ಗಳು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳಾದ ಭಾರತೀಯ ಜನತಾ ಪಕ್ಷದ ಚಂದ್ರ ಶೇಖರ ಪ್ರಭು, ಜೆ.ಡಿ.ಎಸ್ ನ ಜಯರಾಮ್ ಆಚಾರ್ಯ, ಕಾಂಗ್ರೇಸ್ ನ ಬಿ. ವಿಜಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
