ಕುಂದಾಪುರ: ಸಾರ್ವಜನಿಕ ರಸ್ತೆಯಲ್ಲಿ ಸ್ಕೂಟರ್ ವ್ಹೀಲಿಂಗ್ – ಯುವಕನ ಬಂಧನ
ಕುಂದಾಪುರ: ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಸ್ಕೂಟರ್ ವ್ಹೀಲಿಂಗ್ ನಡೆಸಿದ ಸವಾರನ ವಿರುದ್ಧ ಕುಂದಾಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಬಂಧಿತ ಯುವಕನನ್ನು ಪೌಜಾನ್ ಅಹ್ಮದ್ ಎಂದು ಗುರುತಿಸಲಾಗಿದ್ದು ಆತನ ಬೈಂದೂರಿನ ಮನೆಕಳ್ಳತನ ಯತ್ನ ಪ್ರಕರಣದಲ್ಲಿ ಕೂಡ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 26 ರಂದು ಸಂಜೆ, ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ-2 ಶ್ರೀಮತಿ ಸುಧಾ ಪ್ರಭು ಅವರಿಗೆ ಜಿಲ್ಲಾ ನಿಸ್ತಂತು ಕೊಠಡಿಯಿಂದ ಮಾಹಿತಿ ಲಭಿಸಿತು. ಅದರ ಪ್ರಕಾರ, ಮಾರ್ಚ್ 20 ರಂದು ಬೆಳಿಗ್ಗೆ 06.00ರಿಂದ 08.00 ಗಂಟೆಯ ನಡುವೆ ಸ್ಕೂಟರ್ ನಂಬ್ರ KA47A6941 ಸವಾರನು ವ್ಹೀಲಿಂಗ್ ಮಾಡುತ್ತಾ ಸಂಚರಿಸುತ್ತಿದ್ದ ಬಗ್ಗೆ ಮಾಹಿತಿ ನೀಡಲಾಗಿತ್ತು.
ಈ ಕುರಿತು ಲಭಿಸಿದ ವಿಡಿಯೋ ದೃಶ್ಯಾವಳಿಯನ್ನು ಪರಿಶೀಲಿಸಿದ ವೇಳೆ, ರಾಷ್ಟ್ರೀಯ ಹೆದ್ದಾರಿ 66ರ ಬೈಂದೂರು–ಉಡುಪಿ ಏಕಮುಖ ರಸ್ತೆಯಲ್ಲಿ, ಹೆಮ್ಮಾಡಿ ಕಡೆಯಿಂದ ಕುಂದಾಪುರದತ್ತ ಸಾಗುವ ಮಾರ್ಗ ಮಧ್ಯೆ ನೀಲಿ ಬಣ್ಣದ ಬಾಡಿಗೆ ಸ್ಕೂಟರ್ನಲ್ಲಿ ಸವಾರನೊಬ್ಬನು ಕಪ್ಪು ಬಣ್ಣದ ತುಂಬು ತೋಳಿನ ಟಿ-ಶರ್ಟ್ ಹಾಗೂ ಬೂದು ಬಣ್ಣದ ಪ್ಯಾಂಟ್ ಧರಿಸಿಕೊಂಡು, ಹೆಲ್ಮೆಟ್ ಧರಿಸದೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸುತ್ತಿರುವುದು ಕಂಡುಬಂದಿದೆ.
ಸಾರ್ವಜನಿಕ ರಸ್ತೆಯಲ್ಲಿ ದುಡುಕಿನಿಂದ ಹಾಗೂ ಅಪಾಯಕಾರಿ ರೀತಿಯಲ್ಲಿ, ಮಾನವ ಜೀವ ಮತ್ತು ಇತರರ ಆಸ್ತಿಗೆ ಅಪಾಯ ಉಂಟು ಮಾಡುವಂತೆ ಅತಿವೇಗ ಹಾಗೂ ಅಜಾಗರೂಕತೆಯಿಂದ ವಿವಿಧ ಭಂಗಿಗಳಲ್ಲಿ ಸ್ಕೂಟರ್ ವ್ಹೀಲಿಂಗ್ ಮಾಡುತ್ತಾ ಸಂಚರಿಸಿರುವುದು ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿದೆ.
ಈ ಸಂಬಂಧ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 30/2026ರಡಿ ಕಲಂ 281, 125 ಬಿಎನ್ಎಸ್ ಹಾಗೂ 184, 129 ಓದುತ್ತ 194D ಐಎಂವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಯುವಕನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
