ಅಭಯ ಆಶ್ರಮದ ಬಳಿ ಕೆಲಸಕ್ಕೆ ತೆರಳಿದ್ದ ವ್ಯಕ್ತಿ ನಾಪತ್ತೆ: ಮಾಹಿತಿ ನೀಡುವಂತೆ ಕೊಣಾಜೆ ಪೊಲೀಸರ ಮನವಿ
ಮಂಗಳೂರು: ಮಂಗಳೂರಿನ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅಭಯ ಆಶ್ರಮದ ಸಮೀಪದ ಕ್ಯಾಂಟೀನ್ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ವ್ಯಕ್ತಿಯೊಬ್ಬರು ಕಳೆದ ಜುಲೈ 6ರಿಂದ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಸಾರ್ವಜನಿಕರಿಂದ ಮಾಹಿತಿ ನೀಡುವಂತೆ ಕೊಣಾಜೆ ಪೊಲೀಸರು ಮನವಿ ಮಾಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಜಾರ್ಖಂಡ್ ರಾಜ್ಯದ ನಿವಾಸಿಯಾಗಿರುವ ಬಿಸಲ್ ದತ್ತ್ (35) ಅವರು ಸುಮಾರು ಒಂದೂವರೆ ವರ್ಷದಿಂದ ಕೊಣಾಜೆಯ ಅಭಯ ಆಶ್ರಮದ ಪಕ್ಕದಲ್ಲಿರುವ ರಾಮಣ್ಣ ಅವರ ಕ್ಯಾಂಟೀನ್ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಜುಲೈ 6ರಂದು ಎಂದಿನಂತೆ ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕೆ ತೆರಳಿದ ಅವರು, ಮಧ್ಯಾಹ್ನ 12.30ರ ಸುಮಾರಿಗೆ “ಅಸೈಗೋಳಿಯ ಬ್ಯಾಂಕ್ಗೆ ಹೋಗಿ ಬರುತ್ತೇನೆ” ಎಂದು ಹೇಳಿ ಹೊರಟಿದ್ದು, ಬಳಿಕ ಮೊಬೈಲ್ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾರೆ.
ಕುಟುಂಬದವರು ಸಂಬಂಧಿಕರು, ಸ್ನೇಹಿತರು ಹಾಗೂ ವಿವಿಧ ಸ್ಥಳಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಪತ್ನಿ ಪೂಜಾ ದತ್ತ್ ನೀಡಿದ ದೂರಿನ ಆಧಾರದಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪುರುಷ ಕಾಣೆ ಪ್ರಕರಣ (ಮೊ.ನಂ. 81/2026) ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಕಾಣೆಯಾದ ವ್ಯಕ್ತಿಯ ವಿವರ
ಹೆಸರು: ಬಿಸಲ್ ದತ್ತ್
ತಂದೆ: ಸಮೀರ್ ದತ್ತ್
ವಯಸ್ಸು: 35 ವರ್ಷ
ಎತ್ತರ: 5 ಅಡಿ 6 ಇಂಚು
ಮೈಬಣ್ಣ: ಗೋಧಿ ಬಣ್ಣ
ಚಹರೆ: ಸಾಧಾರಣ ಮೈಕಟ್ಟು
ವಿಶೇಷ ಗುರುತು: ಬಲಗೈ ಮೇಲೆ ಇಂಗ್ಲಿಷ್ ಅಕ್ಷರಗಳಲ್ಲಿ “B” ಮತ್ತು “E” ಹಚ್ಚೆ ಇದೆ.
ಧರಿಸಿದ್ದ ಉಡುಪು: ಕಂದು ಬಣ್ಣದ ಟಿ-ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್
ತಿಳಿದಿರುವ ಭಾಷೆ: ಹಿಂದಿ
ಕಾಣೆಯಾದ ಬಿಸಲ್ ದತ್ತ್ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಮಂಗಳೂರು ನಗರ ಪೊಲೀಸ್ ನಿಯಂತ್ರಣ ಕೊಠಡಿ (0824-2220800) ಅಥವಾ ಕೊಣಾಜೆ ಪೊಲೀಸ್ ಠಾಣೆ (0824-2220536 / 9480802350) ಸಂಖ್ಯೆಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
