ಮಂಗಳೂರು| ಆರು ಮಂದಿ ಅಂತರ್ರಾಜ್ಯ ಸೈಬರ್ ವಂಚಕರ ಬಂಧನ
ಮಂಗಳೂರು: ಸ್ನೇಹಿತನ ಬ್ಯಾಂಕ್ ಖಾತೆಯನ್ನು ಪಡೆದು ಸೈಬರ್ ವಂಚನೆ ಪ್ರಕರಣಕ್ಕೆ ಬಳಸಿ ಬಳಿಕ ಮೋಸ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸೆನ್ ಠಾಣೆಯ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಆಂಧ್ರಪ್ರದೇಶದ ನೆಲ್ಲೂರಿನ ಶೇಖ್ ಕರೀಮುಲ್ಲಾ ಯಾನೆ ರಸೂಲ್ (27) ಮತ್ತು ಉತ್ಪಲ ಸಂತೋಷ್ ಕೃಷ್ಣ (35), ಕರ್ನೂಲಿನ ಬುಡಿದಿನ್ನೆ ವಂಶಿ ಯಾನೆ ಗುರು (21), ತೆಲಂಗಾಣದ ಪಂಡಿತಿ ಕ್ರಾಂತಿ ಕುಮಾರ್ (36), ಬುಡೆ ಶ್ರೀನಿವಾಸ (38) ಮತ್ತು ಮುಲ್ಕಿಯ ಇಬ್ರಾಹೀಂ (35) ಎಂದು ಗುರುತಿಸಲಾಗಿದೆ.
ಬ್ಯಾಂಕ್ ಖಾತೆದಾರರಿಗೆ 4 ರಿಂದ 6% ಕಮಿಷನ್ ನೀಡುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಜಾಹಿರಾತು ನೀಡುತ್ತಿದ್ದರು. ಅದನ್ನು ನಂಬಿ ಬಂದವರಿಂದ ಓಟಿಪಿ ಪಡೆದು ವಿದೇಶಕ್ಕೆ ರವಾನಿಸುತ್ತಿದ್ದರು. ಅಲ್ಲಿರುವ ಸೈಬರ್ ಕ್ರೈಂ ಖದೀಮರು ಹಣ ಎಗರಿಸುತ್ತಿದ್ದರು.
ಮಂಗಳೂರಿನ ಮೊಹ್ಮದ್ ಇಕ್ಬಾಲ್ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ . ಆರೋಪಿಗಳಿಂದ 18 ಮೊಬೈಲ್, 12 ಸಿಮ್ ಕಾರ್ಡ್, 1 ಲ್ಯಾಪ್ ಟಾಪ್, 15 ಚೆಕ್ಬುಕ್, 18 ಡೆಬಿಟ್ ಕಾರ್ಡ್ ಮತ್ತು 12 ಬ್ಯಾಂಕ್ ಪಾಸ್ ಬುಕ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
