ಮಣಿಪಾಲ|ಅವಧಿ ಮೀರಿ ಹೋಟೆಲ್ ಕಾರ್ಯಾಚರಣೆ: ಇಬ್ಬರ ವಿರುದ್ಧ ಪ್ರಕರಣ ದಾಖಲು
ಮಣಿಪಾಲ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಧಿ ಮೀರಿ ಹೋಟೆಲ್ ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಆರೋಪದಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಣಿಪಾಲ ಪೊಲೀಸ್ ಠಾಣೆಯ ಪಿಎಸ್ಐ ಶಂಭುಲಿಂಗಯ್ಯ ಎಂ.ಇ ಅವರು ಮೇ 13, 2026ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಮೇ 14ರಂದು ಮುಂಜಾನೆ ಸುಮಾರು 1.15 ಗಂಟೆಗೆ ಶಿವಳ್ಳಿ ಗ್ರಾಮದ ಪೆರಂಪಳ್ಳಿ ಭಾಗದಲ್ಲಿ ಗಸ್ತು ತಿರುಗುತ್ತಿದ್ದಾಗ ಮಾಹಿತಿ ಲಭಿಸಿತ್ತು.
ಮಣಿಪಾಲದ ಡಿ.ಸಿ. ಕಚೇರಿ ರಸ್ತೆಯಲ್ಲಿರುವ “ಹಾಟ್ ಎನ್ ಸ್ಪೈಸಿ” ಹೋಟೆಲ್ನಲ್ಲಿ ಅವಧಿ ಮೀರಿ ಗ್ರಾಹಕರಿಗೆ ಪಾರ್ಸೆಲ್ ನೀಡಲಾಗುತ್ತಿದ್ದು, ಉಡುಪಿಯ ವಿವಿಧ ಭಾಗಗಳಿಂದ ಸಾರ್ವಜನಿಕರು ಅಲ್ಲಿ ಜಮಾಯಿಸುತ್ತಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಬಾತ್ಮೀದಾರರು ಮಾಹಿತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಹೋಟೆಲ್ ಮುಚ್ಚಿಸಿದ್ದಾರೆ. ಹೋಟೆಲ್ ವ್ಯವಸ್ಥಾಪಕರಿಗೆ ಈಗಾಗಲೇ ಹಲವು ಬಾರಿ ಮೌಖಿಕವಾಗಿ ನಿಗದಿತ ಸಮಯಕ್ಕೆ ಹೋಟೆಲ್ ಬಂದ್ ಮಾಡಲು ಸೂಚನೆ ನೀಡಲಾಗಿದ್ದರೂ, ಯಾವುದೇ ಪರವಾನಿಗೆ ಪಡೆಯದೆ ಅವಧಿ ಮೀರಿ ಹೋಟೆಲ್ ಕಾರ್ಯಾಚರಣೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟುಮಾಡಿ ಸಾರ್ವಜನಿಕ ಉಪದ್ರವಕ್ಕೆ ಕಾರಣರಾದ ಆರೋಪದಡಿ ಉದ್ಯಾವರ ಗ್ರಾಮದ ಫರ್ಹಾನ್ (24) ಹಾಗೂ ಶಿವಳ್ಳಿ ಗ್ರಾಮದ ಜೋಯಲ್ ಜೊಷುವ (26) ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
