ಸಾಮಾಜಿಕ ಜಾಲತಾಣದಲ್ಲಿ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಅವಹೇಳನಕಾರಿ ನಿಂದನೆ; ಆರೋಪಿ ಬಂಧನ
ಕಾರ್ಕಳ: ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಗೃಹ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಅವಹೇಳನಕಾರಿ ಹಾಗೂ ದ್ವೇಷಭಾವನೆ ಉಂಟುಮಾಡುವ ಕಾಮೆಂಟ್ ಮಾಡಿರುವ ಆರೋಪದಡಿ ವ್ಯಕ್ತಿಯೊಬ್ಬನನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.
ಅತ್ತೂರು, ನಿಟ್ಟೆ ನಿವಾಸಿ ಸುರೇಶ್ ಎಂಬವರು ನೀಡಿದ ದೂರಿನಂತೆ, ಜೂನ್ 7ರಂದು ಫೇಸ್ಬುಕ್ ವೀಕ್ಷಿಸುತ್ತಿದ್ದ ವೇಳೆ “NAMMA KARLA” ಹೆಸರಿನ ಖಾತೆಯಲ್ಲಿ ರಾಜ್ಯ ಗೃಹ ಸಚಿವರ ಕುರಿತು ಪ್ರಕಟಿಸಲಾಗಿದ್ದ ಪೋಸ್ಟ್ಗೆ ಸುದೀರ್ ಬಂಗೇರ ಎಂಬಾತ ಅವಹೇಳನಕಾರಿ ಕಾಮೆಂಟ್ ಮಾಡಿರುವುದು ಕಂಡುಬಂದಿದೆ.
ದೂರಿನ ಪ್ರಕಾರ, ಆರೋಪಿಯು ದಲಿತ ಸಮುದಾಯಕ್ಕೆ ಸೇರಿದ ಸಚಿವರ ಜಾತಿಯನ್ನು ಉಲ್ಲೇಖಿಸಿ ನಿಂದನಾತ್ಮಕವಾಗಿ ಕಾಮೆಂಟ್ ಮಾಡಿರುವುದಲ್ಲದೆ, ವಿವಿಧ ಸಮುದಾಯಗಳ ನಡುವೆ ದ್ವೇಷ, ವೈರತ್ವ ಹಾಗೂ ಅವಮಾನ ಭಾವನೆ ಉಂಟುಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಆ ಕಾಮೆಂಟ್ ಹರಿಬಿಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಜಾತಿ ನಿಂದನೆ ನಡೆಸಿ ಜೀವ ಬೆದರಿಕೆಯನ್ನೂ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಯಾದ ಸುದೀರ್ ಬಂಗೇರ (48), ನಲ್ಕೆದಬೆಟ್ಟು, ಕೆರ್ವಾಶೆ, ಕಾರ್ಕಳ ನಿವಾಸಿಯನ್ನು ಬಂಧಿಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಕ್ರಮ ಕೈಗೊಂಡಿದ್ದಾರೆ.
