ಸಂಜೀವಿನಿ ಸಂಘಗಳಲ್ಲಿನ ಹಣ ದುರುಪಯೋಗ ತನಿಖೆಗೆ ಎಸ್ ಐ ಟಿ ರಚನೆಯಾಗಲಿ : ಕೆ. ವಿಕಾಸ್ ಹೆಗ್ಡೆ
ಉಡುಪಿ: ಸಂಜೀವಿನಿ ಸಂಘಗಳಲ್ಲಿನ ಆರ್ಥಿಕ ಅವ್ಯವಹಾರದ ತನಿಖೆಯನ್ನು ನಡೆಸಲು ಸರ್ಕಾರ ಕೂಡಲೇ ಒಂದು ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ ಅವರ ಮೂಲಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ
ಉಡುಪಿ ಜಿಲ್ಲೆಯ ಸಂಜೀವಿನಿ ಸಂಘಗಳಲ್ಲಿನ ಲಕ್ಷಾಂತರ ರೂಪಾಯಿ ಹಣ ದುರುಪಯೋಗ ಒಂದು ಗಂಭೀರ ಪ್ರಕರಣ. ಈಗ ಮೂರು ಗ್ರಾಮ ಪಂಚಾಯತುಗಳಲ್ಲಿ ಲಕ್ಷಾಂತರ ರೂಪಾಯಿ ಹಣ ದುರುಪಯೋಗವಾಗಿರುವುದು ದೃಢಪಟ್ಟು ಸಂಬಂಧಿತರ ಮೇಲೆ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಆದರೆ ಸಾರ್ವಜನಿಕ ವಲಯದ ಅನುಮಾನವೆಂದರೆ ಉಡುಪಿ ಜೆಲ್ಲೆಯ ಹೆಚ್ಚಿನ ಗ್ರಾಮ ಪಂಚಾಯತುಗಳ ಸಂಜೀವಿನಿ ಸಂಘಗಳಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಆಗಿರುವ ಸಾಧ್ಯತೆಯಿದೆ. ಆದುದರಿಂದ ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಜಿಲ್ಲೆಯ ಎಲ್ಲಾ ಸಂಜೀವಿನಿ ಸಂಘಗಳ ದಾಖಲೆ, ಆರ್ಥಿಕ ವಹಿವಾಟು ಇತ್ಯಾದಿಗಳ ಸಮಗ್ರ ತನಿಖೆಗೆ ಒಂದು ವಿಶೇಷ ತಂಡವನ್ನು ರಚಿಸಬೇಕು.
ಜಿಲ್ಲೆಯ ಗ್ರಾಮ ಪಂಚಾಯತುಗಳಲ್ಲಿನ ಸಂಜೀವಿನಿ ಸಂಘಗಳಲ್ಲಿನ ಹಣಕಾಸಿನ ದುರುಪಯೋಗವಾಗಲು ಜಿಲ್ಲಾ ಪಂಚಾಯತಿನ ಅಧಿಕಾರಿಗಳ ನಿಷ್ಕ್ರಿಯತೆ ಕೂಡ ಕಾರಣ. ಕೇವಲ ಕಚೇರಿಯಲ್ಲಿ ಕುಳಿತು ಪ್ರಚಾರಕ್ಕಾಗಿ ಕೆಲಸ ಮಾಡದೆ ಪ್ರತಿ ಗ್ರಾಮ ಪಂಚಾಯತುಗಳಿಗೆ ಭೇಟಿ ನೀಡಿ ಸಂಜೀವಿನಿ ಸಂಘಗಳ ಕಾರ್ಯಚಟುವಟಿಕೆ, ಆರ್ಥಿಕ ವಹಿವಾಟುಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಆಗಾಗ ಪರಿಶೀಲನೆ ನಡೆಸಬೇಕು. ಆದರೆ ಜಿಲ್ಲೆಯ ಗ್ರಾಮ ಪಂಚಾಯತುಗಳಲ್ಲಿನ ಸಂಜೀವಿನಿ ಸಂಘಗಳಲ್ಲಿನ ಲಕ್ಷಾಂತರ ರೂಪಾಯಿ ಹಣ ದುರುಪಯೋಗ ನೋಡುವಾಗ ಜಿಲ್ಲಾ ಪಂಚಾಯತು ಮಟ್ಟದ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕೂಡ ಭ್ರಷ್ಟಾಚಾರದ ಅನುಮಾನ ಮೂಡುತ್ತಿದ್ದು. ಸಂಜೀವಿನಿ ಸಂಘಗಳಲ್ಲಿನ ಆರ್ಥಿಕ ಅವ್ಯವಹಾರದ ತನಿಖೆಯನ್ನು ನಡೆಸಲು ಸರ್ಕಾರ ಕೂಡಲೇ ಒಂದು ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ ಅವರ ಮೂಲಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.
