ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್
ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ. ಪಕ್ಷಕ್ಕೆ ಓಟ್ ಹಾಕಿದವರು, ಪಕ್ಷಕ್ಕೆ ದುಡಿದವರು ಮಾತ್ರ ಪಕ್ಷದ ಬಗ್ಗೆ ಮಾತನಾಡಲಿ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಮುಸ್ಲಿಮರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಮಂಗಳೂರಿನಲ್ಲಿ ಮುಸ್ಲಿಮ್ ನಾಯಕರ ಸುದ್ದಿಗೋಷ್ಠಿಗೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಮಂಗಳವಾರ ಮಂಗಳೂರಿನಲ್ಲಿ ಅವರು ಉತ್ತರಿಸಿದರು.
ಸಮಾನ ಮನಸ್ಕ ಮುಸ್ಲಿಮ್ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಬೇರೆ ಬೇರೆ ಹೆಸರು ಇಟ್ಟುಕೊಂಡು, ಸಮಾನಮನಸ್ಕರು ಅಂತ ಹೇಳಿಕೊಂಡು ಬರುವುದು ಬೇಡ. ಕಾಂಗ್ರೆಸ್ ಗೆ ಇವರು ಬುದ್ಧಿವಾದ ಹೇಳುವ ಅವಶ್ಯಕತೆ ಇಲ್ಲ. ಇವರ ಬುದ್ಧಿವಾದ ಪಕ್ಷ ತೆಗೆದುಕೊಳ್ಳುವುದಿಲ್ಲ. ಪಕ್ಷವನ್ನು ವಿರೋಧ ಮಾಡಿದವರು ಇವತ್ತು ಕೂತು ಪಕ್ಷಕ್ಕೆ ನಿರ್ದೇಶನ ಕೊಡುವ ಅಗತ್ಯ ಇಲ್ಲ ಎಂದರು.
ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ಮಾತ್ರ ಅಲ್ಲ, ಎಲ್ಲವೂ ಕೊಟ್ಟಿದೆ. ಝಮೀರ್ ಅಹ್ಮದ್, ನಾವು ಹಾಗೂ ಎಲ್ಲ ಮುಸ್ಲಿಮರು ಒಟ್ಟಿಗೆ ಇದ್ದೇವೆ. ಪಕ್ಷದ ಅಧ್ಯಕ್ಷರು, ಸಿಎಂ ಎಲ್ಲ ಸೇರಿ ಅಲ್ಪಸಂಖ್ಯಾತರಿಗೆ ಅವಕಾಶ ಕೊಡುತ್ತಾರೆ. ರಾಜಕೀಯವಾಗಿ ಇನ್ನಷ್ಟು ಇದನ್ನು ಬಿಗಡಾಯಿಸುವ ಕಾಂಗ್ರೆಸ್ ಗೆ ಮತ ಹಾಕದವರನ್ನು ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದವರು ಹೇಳಿದರು.
