Home Mangalorean News Kannada News ಸಿಎ, ಪತ್ರಿಕಾ, ವೈದ್ಯ, ಅಂಚೆ ಕಾರ್ಮಿಕ ದಿನದ ಅಂಗವಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಾಧಕರಿಗೆ...

ಸಿಎ, ಪತ್ರಿಕಾ, ವೈದ್ಯ, ಅಂಚೆ ಕಾರ್ಮಿಕ ದಿನದ ಅಂಗವಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಾಧಕರಿಗೆ ಸನ್ಮಾನ

Spread the love

ಸಿಎ, ಪತ್ರಿಕಾ, ವೈದ್ಯ, ಅಂಚೆ ಕಾರ್ಮಿಕ ದಿನದ ಅಂಗವಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಾಧಕರಿಗೆ ಸನ್ಮಾನ

ಉಡುಪಿ: ರಾಷ್ಟ್ರೀಯ ವೈದ್ಯರ ದಿನ, ರಾಷ್ಟ್ರೀಯ ಲೆಕ್ಕ ಪರಿಶೋಧಕರ ದಿನ, ಪತ್ರಿಕಾ ದಿನಾಚರಣೆ ಹಾಗೂ ರಾಷ್ಟ್ರೀಯ ಅಂಚೆ ಕಾರ್ಮಿಕರ ದಿನದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಬುಧವಾರ ಗೌರವಿಸಲಾಯಿತು.

ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಎಚ್. ಅಶೋಕ್, ಹಿರಿಯ ಲೆಕ್ಕ ಪರಿಶೋಧಕರಾದ ಯು.ಬಿ. ಅಜಿತ್ ಕುಮಾರ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಹಾಗೂ ಅಂಚೆಪೇದೆ ನಾಗರಾಜ್ ಶೆಟ್ಟಿಗಾರ್ ಅವರನ್ನು ಶಾಲು ಹೊದಿಸಿ, ಹೂಮಾಲೆ ಹಾಕಿ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ, ಕಳೆದ ಮೂರು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಪಕ್ಷಾತೀತವಾಗಿ ಹಾಗೂ ದ್ವೇಷದ ಮನೋಭಾವವಿಲ್ಲದೆ ಕಾರ್ಯನಿರ್ವಹಿಸಿರುವ ತೃಪ್ತಿ ಇದೆ ಎಂದು ಹೇಳಿದರು.

ಪತ್ರಕರ್ತರು ವರದಿಗಾರಿಕೆಯ ಜವಾಬ್ದಾರಿಯೊಂದಿಗೆ ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಭರಾಟೆಯ ನಡುವೆಯೂ ದಾಖಲೆಯಾಧಾರಿತ, ಪ್ರಬುದ್ಧ ಹಾಗೂ ನೈಜ ವರದಿಗಾರಿಕೆಯ ಮೂಲಕ ಪತ್ರಿಕೋದ್ಯಮ ತನ್ನ ಮಹತ್ವವನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪತ್ರಿಕಾ ದಿನಾಚರಣೆಯ ಅಂಗವಾಗಿ ತಮ್ಮನ್ನು ಗೌರವಿಸಿದ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಪದಾಧಿಕಾರಿಗಳು ಮತ್ತು ಮುಖಂಡರಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಚಂದ್ರಮೋಹನ್ ಚಿಟ್ಪಾಡಿ, ಸತೀಶ್ ಪುತ್ರನ್, ಗಣೇಶ್ ನೆರ್ಗಿ, ಸತೀಶ್ ಕೊಡವೂರು, ಯುವರಾಜ್ ಪುತ್ತೂರು, ಸಂಧ್ಯಾ ತಿಲಕ್ರಾಜ್, ಮಮತಾ ಶೆಟ್ಟಿ, ಭರತ್ ಕುಮಾರ್, ಸಂಜಯ್ ಆಚಾರ್ಯ, ಲಕ್ಷ್ಮೀಶ್ ಶೆಟ್ಟಿ, ಲ್ಯಾನ್ಸಿ ಡಿ’ಸೋಜಾ, ಯಾದವ್ ಆಚಾರ್ಯ, ಅರ್ಚನಾ ದೇವಾಡಿಗ ಹಾಗೂ ಉದ್ಯಮಿ ಸಚಿನ್ ಸೇರಿದಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version