ಉಪ್ಪಿನಂಗಡಿ: ಜಾನುವಾರು ಅಕ್ರಮ ಸಾಗಾಟ ಆರೋಪ: ಇಬ್ಬರ ಬಂಧನ
ಉಪ್ಪಿನಂಗಡಿ: ಅಕ್ರಮವಾಗಿ ಹಾಗೂ ಹಿಂಸಾತ್ಮಕವಾಗಿ ಈಚರ್ ಲಾರಿಯಲ್ಲಿ ಜಾನುವಾರು ಸಾಗಾಟ ಮಾಡುತ್ತಿರು ವುದನ್ನು ಉಪ್ಪಿನಂಗಡಿ ಪೊಲೀಸರು 34 ನೆಕ್ಕಿಲಾಡಿಯ ಆನೆಬೈಲ್ ಎಂಬಲ್ಲಿ ಪತ್ತೆ ಹಚ್ಚಿದ್ದು, ಇಬ್ಬರನ್ನು ಬಂಧಿಸಿ ದ್ದಾರೆ. ಈ ವೇಳೆ ಲಾರಿಯಲ್ಲಿದ್ದ ಓರ್ವ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಲಾರಿ ಚಾಲಕ ಕಡೂರು ನಿವಾಸಿ ಪರ್ದಿನ್ ಖಾನ್, ಲಾರಿಯಲ್ಲಿದ್ದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಜಾವೀದ್ ಪಾಷಾ ಬಂಧಿತರು. ಲಾರಿಯಲ್ಲಿದ್ದ ಇನ್ನೋರ್ವ ಆರೋಪಿ ರೆಹಮಾನ್ ಹೊಸೂರು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ಸುತೇಶ್ ಕೆ.ಪಿ. ಅವರು ಸಿಬ್ಬಂದಿಗಳೊಂದಿಗೆ ಉಪ್ಪಿನಂಗಡಿ, ಮಠ ಹಾಗೂ ನೆಕ್ಕಿಲಾಡಿ ವ್ಯಾಪ್ತಿಯಲ್ಲಿ ಜೂ.17ರ ನಸುಕಿನ ಜಾವ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಹಾಸನ ಕಡೆಯಿಂದ ಬರುತ್ತಿದ್ದ ಈಚರ್ ಲಾರಿಯನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಅದರೊಳಗೆ 16 ಜಾನುವಾರುಗಳನ್ನು ಯಾವುದೇ ದಾಖಲಾತಿಗಳಿಲ್ಲದೆ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಜಾನುವಾರು ಹಾಗೂ ಲಾರಿಯನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಾಸನ ಸಂತೆಯಿಂದ ಜಾನುವಾರುಗಳನ್ನು ಖರೀದಿಸಿ ಕೇರಳ ರಾಜ್ಯದ ಪಾಲಕ್ಕಾಡ್ಗೆ ಸಾಗಿಸುತ್ತಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
