ಕಸಬಾ ಬೆಂಗ್ರೆಯಲ್ಲಿ ನದಿಗೆ ಬಿದ್ದು ಯುವಕ ಮೃತ್ಯು
ಮಂಗಳೂರು: ಕಸಬಾ ಬೆಂಗ್ರೆಯ ಫೆರಿ ಪಾಯಿಂಟ್ ಸಮೀಪ ನದಿಯ ಬಳಿ ಮಕ್ಕಳು ಫುಟ್ಬಾಲ್ ಆಡುತ್ತಿದ್ದ ವೇಳೆ ಚೆಂಡು ನದಿಗೆ ಬಿದ್ದಿದ್ದು, ಅದನ್ನು ತೆಗೆಯಲು ನದಿಗೆ ಇಳಿದ 25 ವರ್ಷದ ಮೊಹಮ್ಮದ್ ಸನಾವುಲ್ಲಾ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುಃಖಕರ ಘಟನೆ ನಡೆದಿದೆ.
ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದ ನದಿಗೆ ಇಳಿದ ಸನಾವುಲ್ಲಾ ನೀರಿನಲ್ಲಿ ಮುಳುಗಿದ್ದಾರೆ. ಈ ವಿಚಾರ ಮಕ್ಕಳಿಂದ ಸ್ಥಳೀಯರಿಗೆ ತಕ್ಷಣ ತಿಳಿದುಬರದ ಹಿನ್ನೆಲೆಯಲ್ಲಿ, ಬಳಿಕ ವಿಷಯ ತಿಳಿದ ಹಲವು ಯುವಕರು ನದಿಗೆ ಧುಮುಕಿ ಸನಾವುಲ್ಲಾ ಅವರನ್ನು ಮೇಲಕ್ಕೆತ್ತಿದ್ದಾರೆ.
ನಂತರ ಅವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಹೈಲ್ಯಾಂಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸನಾವುಲ್ಲಾ ಮೃತಪಟ್ಟಿದ್ದಾರೆ.
