ಮಂಗಳೂರು: ದ.ಕ. ಜಿಲ್ಲಾ ಕ್ರೀಡಾ ಬಾಲಕ-ಬಾಲಕಿಯರ ವಸತಿಗೃಹಕ್ಕೆ ಲೋಕಾಯುಕ್ತ ದಾಳಿ
ಮಂಗಳೂರು: ನಗರದ ಮಣ್ಣಗುಡ್ಡಯಲ್ಲಿರುವ ದ.ಕ. ಜಿಲ್ಲಾ ಕ್ರೀಡಾ ಬಾಲಕ ಮತ್ತು ಬಾಲಕಿಯರ ವಸತಿಗೃಹಕ್ಕೆ ಮಂಗಳೂರು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕಿ ಡಾ. ಗಾನ ಪಿ. ಕುಮಾರ್ ಹಾಗು ಪೊಲೀಸ್ ನಿರೀಕ್ಷಕಿಯರಾದ ಭಾರತಿ ಜಿ, ರವಿ ಪವಾರ್ ನೇತೃತ್ವದ ತಂಡವು ಶುಕ್ರವಾರ ದಾಳಿ ನಡೆಸಿದ್ದಾರೆ.
ದಾಳಿ ನಡೆಸಿ ಪರಿಶೀಲನೆ ನಡೆಸಿದ ವೇಳೆ ಸಾಕಷ್ಟು ಲೋಪದೋಷಗಳು ಕಂಡುಬಂದಿದೆ. ಮುಖ್ಯವಾಗಿ ವಸತಿಗೃಹದ ಅಡುಗೆ ಕೋಣೆಯಲ್ಲಿ ಶುಚಿತ್ವ ಇರಲಿಲ್ಲ. ಧವಸಧಾನ್ಯಗಳ ಸ್ಟಾಕ್ ಇರಲಿಲ್ಲ. ಅಕ್ಕಿಯಲ್ಲಿ ಹುಳುಗಳು ಕಂಡುಬಂದಿದೆ. ಸ್ಟಾಕ್ ರಿಜಿಸ್ಟರ್ ಕೂಡ ಇರಲಿಲ್ಲ. ಅಡುಗೆಗೆ ಕಡಿಮೆ ಗುಣಮಟ್ಟದ ಹೆಚ್ಚು ಪ್ಯಾಟ್ ಇರುವ ಪಾಮೋಲಿನ್ ಅಡುಗೆ ಎಣ್ಣೆಯನ್ನು ಬಳಸುವುದು ಕಂಡುಬಂದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ವಸತಿ ಗೃಹದಲ್ಲಿ 33 ಮಕ್ಕಳಿದ್ದರು. ಅವರಿಗೆ ಪೌಷ್ಟಿಕಯುಕ್ತ ಆಹಾರ ನೀಡಿಲ್ಲ. ಊಟದ ಹಾಲ್ನಲ್ಲಿ ಹೆಚ್ಚಿನ ಸ್ಥಳವಕಾಶ ಇಲ್ಲದಿದ್ದರೂ ಕೂಡ ಎರಡು ವಸತಿ ಗೃಹದಲ್ಲಿನ ಬಾಲಕ ಮತ್ತು ಬಾಲಕಿಯರಿಗೆ ಒಂದೇ ಕಡೆಯಲ್ಲಿ ಊಟದ ವ್ಯವಸ್ಥೆ ಕಲ್ಪಿಸುವುದು ಕಂಡುಬಂದಿದೆ. ಸ್ಕಾಲರ್ಶಿಪ್ ಪಡೆದು ವಿದ್ಯಾಭ್ಯಾಸ ಮಾಡುವ ಹೆಚ್ಚಿನ ಮಕ್ಕಳು ಅಥ್ಲೆಟಿಕ್ಸ್ನವರಾಗಿದ್ದು, ಸರಕಾರದಿಂದ ಅನುದಾನ ಬರುತಿದ್ದರು ಕೂಡ ಸರಿಯಾದ ಆಹಾರದ ವ್ಯವಸ್ಥೆ ಮಾಡಿರುವುದಿಲ್ಲ ಎಂದು ತಿಳಿಸಿದ್ದಾರೆ.
ಸರಕಾರದಿಂದ ಪ್ರತಿ ವರ್ಷ ಸ್ಪೋರ್ಟ್ಸ್ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲು ಅನುದಾನ ನೀಡುತ್ತಿದ್ದರು ಕೂಡ ಅರ್ಧ ವರ್ಷ ಮಕ್ಕಳ ಪೋಷಕರೇ ತಮ್ಮ ಖರ್ಚಿನಲ್ಲಿ ಕ್ರೀಡಾ ಸಾಮಗ್ರಿಗಳನ್ನು ಮಕ್ಕಳಿಗೆ ಖರೀದಿಸಿ ಕೊಡಬೇಕಾಗುತ್ತದೆ. ಸರಕಾರದಿಂದ ಅನುದಾನ ಬರುತ್ತಿದ್ದರು ಕೂಡ ವಿತರಿಸಿರುವ ಶೂ, ಕಂಪನಿಯ ಶೂ ಆಗಿದ್ದರು ಕೂಡ ಕಳಪೆ ಗುಣಮಟ್ಟದಾಗಿದೆ. ಕೆಲವೇ ವಾರದಲ್ಲಿ ಹಾಳಾಗಿರುತ್ತದೆ ಎಂಬುದಾಗಿ ತಿಳಿದುಬಂದಿದೆ. ಕ್ರೀಡಾ ವಸತಿ ನಿಲಯದಲ್ಲಿ ಹೆಚ್ಚಿನ ಕೊಠಡಿಗಳು ಇದ್ದರೂ ಕೂಡ ಒಂದು ಕೊಠಡಿಯಲ್ಲಿ ಐದು ಮಕ್ಕಳಿಗೆ ವಸತಿ ವ್ಯವಸ್ಥೆ ಕಲ್ಪಿಸಿರು ವುದು ಕಂಡು ಬರುತ್ತದೆ ಎಂದು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಕ್ಕಳನ್ನು ವಿವಿಧ ಕ್ರೀಡೆಗಳಿಗೆ ಕರೆದುಕೊಂಡು ಹೋಗಲು ಸರಕಾರದಿಂದ ಅನುದಾನ ಬರುತ್ತಿದ್ದರೂ ಕೂಡ ಮಕ್ಕಳ ಪೋಷಕರೇ ಖರ್ಚನ್ನು ಭರಿಸಬೇಕಾಗುತ್ತದೆ. ಸರಕಾರದಿಂದ ಬರುವ ಅನುದಾನ ದುರುಪಯೋಗವಾಗುವುದು ಕಂಡುಬಂದಿದೆ. ಕ್ರೀಡಾ ವಸತಿ ಗೃಹದ ಮಕ್ಕಳು ತಮ್ಮ ಪೋಷಕರನ್ನು ಸಂಪರ್ಕಿಸಲು ದೂರವಾಣಿಯ ವ್ಯವಸ್ಥೆ ಇರುವುದಿಲ್ಲ. ವಿದ್ಯಾರ್ಥಿಗಳು ಕ್ರೀಡೆಯ ಸಂದರ್ಭ ಬೇರೆ ಬೇರೆ ಕಡೆಗೆ ತೆರಳಿದಾಗ ತರಗತಿಯ ಪಾಠ ಪ್ರವಚನಕ್ಕೆ ತೊಂದರೆಯಾಗುತ್ತಿದ್ದು, ಕಂಪ್ಯೂಟರ್ ಮೂಲಕ ಅಧ್ಯಯನಕ್ಕೆ ಸಂಬಂಧಿಸಿದ ವಿಷಯವನ್ನು ಪಡೆದುಕೊಳ್ಳಲು ಕಂಪ್ಯೂಟರನ್ನು ಒದಗಿಸಿರುವುದಿಲ್ಲ ಎಂಬುದು ತಿಳಿದು ಬಂದಿದೆ. ಕಂಪ್ಯೂಟರ್ಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಒದಗಿಸದ ಕಾರಣ ಹಾಳಾಗಿದೆ. ಮಕ್ಕಳಿಗೆ ಕೌನ್ಸಿಲಿಂಗ್ ಮತ್ತು ಹೆಲ್ತ್ ಚೆಕ್ಅಪ್ ಮಾಡಿರುವುದು ಕೂಡ ದಾಖಲಾತಿಯಿಂದ ಕಂಡುಬಂದಿಲ್ಲ.
ನಗರದ ಮಂಗಳ ಸ್ಟೇಡಿಯಂನಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಉಪ ನಿರ್ದೇಶಕರ ಕಚೇರಿಯ ಸಮೀಪ ಅಂದರೆ 100 ಮಿ. ದೂರದಲ್ಲಿ ಬಾಲಕ ಬಾಲಕಿಯರ ಕ್ರೀಡಾ ವಸತಿ ಗೃಹ ಇದ್ದರೂ ಕೂಡ ಕ್ರೀಡಾ ವಸತಿ ನಿಲಯಕ್ಕೆ ಇಲಾಖೆಯ ಸಹಾಯಕ ನಿರ್ದೇಶಕರು, ಉಪ ನಿರ್ದೇಶಕರು ಭೇಟಿಕೊಟ್ಟು ಪರಿಶೀಲನೆ ಮಾಡಿರುವುದು ಕಂಡುಬಂದಿಲ್ಲ. ಈ ಅಧಿಕಾರಿಗಳು ವಸತಿ ಗೃಹದಲ್ಲಿ ಆಹಾರದ ಕೊರತೆ, ಆಹಾರದ ಸರಬರಾಜಿನಲ್ಲಿ ಅವ್ಯವಹಾರ, ಟೆಂಡರ್ ಬದಲಾವಣೆ ಮಾಡದಿರುವುದು, ಸ್ಟಾಕ್ ಪರಿಶೀಲಿಸದಿರುವುದು ಕಂಡುಬಂದಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಸಮಗ್ರ ವರದಿಯನ್ನು ಲೋಕಾಯುಕ್ತರಿಗೆ ನೀಡಲಾಗುವುದು ಎಂದು ಪ್ರಭಾರ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.