ಮೋದಿ ಮೌನದ ಹಿಂದೆ ‘ಎಪ್ಸ್ಟೀನ್ ಫೈಲ್ ನಂಟಿದೆಯೇ?: ಹರೀಶ್ ಕುಮಾರ್ ಗಂಭೀರ ಪ್ರಶ್ನೆ
ಮಂಗಳೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿರುವ ‘ಜೆಫ್ರಿ ಎಪ್ಸ್ಟೀನ್’ ಪ್ರಕರಣದ ಕಡತಗಳಿಗೂ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೌನಕ್ಕೂ ನಂಟಿದೆಯೇ? ಎಂಬ ಅನುಮಾನವನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ತೀವ್ರವಾಗಿ ಟೀಕಿಸಿದರು.
ವಿಶ್ವದ ಅನೇಕ ಪ್ರಭಾವಿ ನಾಯಕರ ಹೆಸರು ಎಪ್ಸ್ಟೀನ್ ಪ್ರಕರಣದಲ್ಲಿ ಕೇಳಿಬರುತ್ತಿದೆ. “ಈ ಕಡತಗಳಲ್ಲಿ ಪ್ರಧಾನಿ ಮೋದಿ ಅವರು ಇನ್ವಾಲ್ಸ್ ಆಗಿದ್ದಾರೆ ಎನ್ನುವ ಊಹಾಪೋಹಗಳು ಎದ್ದಿವೆ. ಇದೇ ಕಾರಣಕ್ಕೆ ಅವರು ಅಮೆರಿಕದ ಒತ್ತಡಕ್ಕೆ ಮಣಿದು ಕಾಂಪ್ರಮೈಸ್ ಆಗಿದ್ದಾರಾ? ಎನ್ನುವ ಸಂದೇಹ ಜನರಲ್ಲಿ ಮೂಡುತ್ತಿದೆ. ದೇಶದ ಮೇಲೆ ಪರಿಣಾಮ ಬೀರುವ ಇಂತಹ ಗಂಭೀರ ವಿಚಾರಗಳ ಬಗ್ಗೆ ಮೋದಿ ಅವರು ಒಂದೇ ಒಂದು ಪ್ರೆಸ್ ಮೀಟ್ ಮಾಡುತ್ತಿಲ್ಲವೇಕೆ? ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.
ಭಾರತದ ಆಡಳಿತ ಈಗ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೂಚನೆಯಂತೆ ನಡೆಯುತ್ತಿದೆ ಎಂದು ಆರೋಪಿಸಿದ ಅವರು, “ರಷ್ಯಾದಿಂದ ತೈಲ ಖರೀದಿ ರದ್ದು ಮಾಡಲು ಟ್ರಂಪ್ ನೀಡಿದ ಸೂಚನೆಯನ್ನು ಶಿರಸಾವಹಿಸಿ ಪಾಲಿಸಿದ್ದರಿಂದಲೇ ಈಗ ನಮಗೆ ರಿಯಾಯಿತಿ ದರದ ತೈಲ ಸಿಗುತ್ತಿಲ್ಲ. ಇದರಿಂದ ದೇಶದಲ್ಲಿ ತೈಲ ಬಿಕ್ಕಟ್ಟು ಉಂಟಾಗಿದೆ. ದಾಸ್ತಾನು ಇದೆ ಎಂದು ಸುಳ್ಳು ಹೇಳುವ ಸರ್ಕಾರ, ಪರಿಸ್ಥಿತಿ ನಿಯಂತ್ರಿಸಲು ಎಸ್ಮಾ (ESMA) ಜಾರಿ ಮಾಡಿದ್ದೇಕೆ?” ಎಂದು ಆಕ್ರೋಶ ಹೊರಹಾಕಿದರು.
