ಸ್ಪೀಕರ್ ಖಾದರ್ ಮೆಚ್ಚಿಸಲು ಶಾಸಕರ ವಿರುದ್ಧ ಪ್ರಸಾದ್ ಕಾಂಚನ್ ಹತಾಶ ಹೇಳಿಕೆ : ದಿನೇಶ್ ಅಮೀನ್
ಕಾಂಗ್ರೆಸ್ ಪಕ್ಷದಲ್ಲಿ ಅಪ್ರಬುದ್ಧ ಹೇಳಿಕೆಯ ಮೂಲಕ ಪ್ರಸಾದ್ ಕಾಂಚನ್ ಇದೀಗ ಕಾಂಗ್ರೆಸ್ ಪಕ್ಷದಲ್ಲೇ ಮೂಲೆಗುಂಪಾಗಿದ್ದು, ಸದಾ ಶಾಸಕ ಯಶ್ಪಾಲ್ ಸುವರ್ಣರನ್ನು ಟೀಕಿಸುವ ಮೂಲಕ ಸ್ಪೀಕರ್ ಖಾದರ್ ರವರನ್ನು ಮೆಚ್ಚಿಸಲು ಪ್ರಯತ್ನ ಮಾಡುತ್ತಿದ್ದು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಶಾಸಕರಿಗೆ ಬಿಟ್ಟಿ ಉಪದೇಶ ನೀಡುವ ಅಗತ್ಯವಿಲ್ಲ ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್ ವ್ಯಂಗ್ಯವಾಡಿದ್ದಾರೆ.
ಸದನದಲ್ಲಿ ಶಾಸಕರು ತನ್ನ ಕ್ಷೇತ್ರದ ಸಮಸ್ಯೆ ಬಗ್ಗೆ ಕೇವಲ 3 ನಿಮಿಷ ಮಾತ್ರ ಮಾತಾಡಿದ್ದು, 30 ಸೆಕೆಂಡ್ ಮಾತಾಡುವಾಗಲೇ ಸ್ಪೀಕರ್ ತಾಳ್ಮೆ ಕಳೆದುಕೊಂಡಿದ್ದಾರೆ. ಹಿಂದೂ ಧಾರ್ಮಿಕತೆಯ ಭಾಗವಾಗಿರುವ ಹರಿಕಥೆಯ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಶಾಸಕರ ಹಕ್ಕನ್ನು ಮೊಟಕುಗೊಳಿಸಿ ಸದನದಲ್ಲಿ ಅಪಮಾನ ಮಾಡಲು ಹೊರಟ ಸ್ಪೀಕರ್ ಖಾದರ್ ವಿರುದ್ಧ ಸಹಜವಾಗಿಯೇ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಡುಪಿ ಪರ್ಯಾಯ ಮಹೋತ್ಸವದ ಬಗ್ಗೆ ಕಾಮಗಾರಿಗೆ ವಿಶೇಷ ಅನುದಾನ ಬೇಡಿಕೆಯ ಬಗ್ಗೆಯೂ ಸ್ಪೀಕರ್ ರವರು ತಾಳ್ಮೆ ಕಳೆದುಕೊಂಡಿದ್ದಾರೆ.
ಪ್ರಸಾದ್ ಕಾಂಚನ್ ಇದೀಗ ತಮ್ಮ ಅಲ್ಪಸಂಖ್ಯಾತ ವೋಟ್ ಬ್ಯಾಂಕಿಗಾಗಿ ಶಾಸಕರ ವಿರುದ್ಧ ಹೇಳಿಕೆ ನೀಡುವ ಮೂಲಕ ಸ್ಪೀಕರ್ ಖಾದರ್ ರನ್ನು ಮೆಚ್ಚಿಸಲು ಹೊರಟಿದ್ದಾರೆ.
ತಮ್ಮದೇ ರಾಜ್ಯ ಸರ್ಕಾರ ಉಡುಪಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಲತಾಯಿ ಧೋರಣೆ ಮಾಡಿ ಅನುದಾನ ಬಿಡುಗಡೆಗೆ ತಾರತಮ್ಯ ಮಾಡುತ್ತಿದ್ದೆ, ಜಿಲ್ಲಾ ಉಸ್ತುವಾರಿ ಸಚಿವರು ಅತಿಥಿ ಸಚಿವರಾಗಿ ಸರಕಾರಿ ದಿನಾಚರಣೆ ಕಾರ್ಯಕ್ರಮಕ್ಕೆ ಸೀಮಿತರಾಗಿದ್ದಾರೆ. ಗೃಹಲಕ್ಮೀ ಯೋಜನೆಯ ಹಣ ಬಿಡುಗಡೆಯ ಬಗ್ಗೆ ಸದನದಲ್ಲಿ ತಪ್ಪು ಮಾಹಿತಿ ನೀಡಿದ್ದ ಉಸ್ತುವಾರಿ ಸಚಿವರನ್ನು ಪ್ರಶ್ನಿಸುವ ಧೈರ್ಯ ಈವರೆಗೂ ತೋರಿಸಿಲ್ಲ.
ಜಿಲ್ಲಾಸ್ಪತ್ರೆ ಕಾಮಗಾರಿ, ರಸ್ತೆ ಗುಂಡಿ ಮುಚ್ಚಲು ಹಣ ನೀಡದ ರಾಜ್ಯ ಸರಕಾರದ ಬಗ್ಗೆ ತುಟಿ ಬಿಚ್ಚಲು ಹೆದರುವ ಪ್ರಸಾದ್ ಕಾಂಚನ್ ಚುನಾವಣೆ ಸಂದರ್ಭದಲ್ಲಿ ಮಸೀದಿಗೆ ತೆರಳಿ ಮತಯಾಚಿಸಿದ ಋಣಕ್ಕಾಗಿ ಇದೀಗ ಹಿಂದುತ್ವದ ವಿಚಾರದಲ್ಲಿ ದಿಟ್ಟತನ ತೋರುವ ಶಾಸಕರ ವಿರುದ್ಧ ಅಸಂಬದ್ಧ ಟೀಕೆ ಮಾಡುತ್ತಾ ಸ್ಪೀಕರ್ ಪಕ್ಷಪಾತಿ ಧೋರಣೆಯನ್ನು ಮುಚ್ಚಿಸಲು ಮುಂದಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
