ಕುಂದಾಪುರ: ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷರಾಗಿ 3ನೇ ಬಾರಿಗೆ ಅಶೋಕ್ ಪೂಜಾರಿ ಬೀಜಾಡಿ ಅವಿರೋಧ ಆಯ್ಕೆ
ಕುಂದಾಪುರ: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಮೇ.24 ರವಿವಾರ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿಯವರ ಅಧ್ಯಕ್ಷತೆಯಲ್ಲಿ ಜರುಗಿತು.
ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರವು ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನೊಳಗೊಂಡ ಬಿಲ್ಲವ ಸಮಾಜದ ಮಾತೃ ಸಂಘ ಇದಾಗಿದ್ದು ಮುಂದಿನ 2 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಮೂರನೇ ಬಾರಿಗೆ ಹಿಂದುಳಿದ ವರ್ಗಗಳ ಸಮುದಾಯದ ಸರಳ ಸಜ್ಜನಿಕೆಯ ನಾಯಕ, ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡ ಉತ್ತಮ ಸಂಘಟಕ ಅಶೋಕ್ ಪೂಜಾರಿ ಬೀಜಾಡಿ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭ ಮಾತನಾಡಿದ ಅವರು, ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆ ಮಾಡಿದ್ದು ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಂಘವನ್ನು ಸಕ್ರೀಯವಾಗಿ ಮುನ್ನಡೆಸಲಾಗುತ್ತಿದೆ. ಗ್ರಾಮೀಣ ಹಾಗೂ 2 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಲ್ಲವ ಸಮುದಾಯವನ್ನು ಜೊತೆಯಾಗಿಸಿಕೊಂಡು ಸಮಾಜ ಅಭ್ಯುದಯಕ್ಕೆ ಮುಂದಾಗಿದ್ದೇವೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಗಮನ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಸಹಕಾರ ನೀಡುತ್ತಿದ್ದೇವೆ. ಸಮುದಾಯ ಇನ್ನಷ್ಟು ಬಲಿಷ್ಟರಾಗಲು ರಾಜಕೀಯ ಹಾಗೂ ಸಹಕಾರಿ ಕ್ಷೇತ್ರದಲ್ಲೂ ಬಿಲ್ಲವರು ಮುಂದೆ ಬರಲು ಅಗತ್ಯ ಚಿಂತನೆ ರೂಪಿಸಲಾಗುತ್ತದೆ. ಪಕ್ಷಾತೀತವಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಆರ್ಥಿಕ, ಶಿಕ್ಷಣ, ಸಂಘಟನಾತ್ಮಕವಾಗಿ ಸಮಾಜವನ್ನು ಮೇಲಸ್ತರಕ್ಕೆ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಹೆಮ್ಮಾಡಿಯಲ್ಲಿರುವ ಬಿಲ್ಲವ ಸಮಾಜ ಸೇವಾ ಸಂಘದ ಹೆಸರಿನಲ್ಲಿರುವ ಜಾಗದಲ್ಲಿ ಬಿಲ್ಲವ ಸಮುದಾಯದ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಶಿಕ್ಷಣ ಸಂಸ್ಥೆ ನಿರ್ಮಿಸುವ ದೊಡ್ಡ ಗುರಿಯಿದೆ ಎಂದರು.
ಪದಾಧಿಕಾರಿಗಳು: ಗೌರವ ಅಧ್ಯಕ್ಷರಾಗಿ ನಾರಾಯಣ ಟಿ. ಪೂಜಾರಿ, ಉಪಾಧ್ಯಕ್ಷರುಗಳಾಗಿ ರಾಮ ಪೂಜಾರಿ ಮುಲ್ಲಿಮನೆ, ಮೋಹನ ಪೂಜಾರಿ ಉಪ್ಪುಂದ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಯೋಗೇಶ್ ಪೂಜಾರಿ ಕೋಡಿ, ಜೊತೆ ಕಾರ್ಯದರ್ಶಿಯಾಗಿ ಮಂಜು ಪೂಜಾರಿ ತೆಗ್ಗರ್ಸೆ, ಗೌರವ ಪ್ರಧಾನ ಕೋಶಾಧಿಕಾರಿಯಾಗಿ ವಿನಯ ಪೂಜಾರಿ ಬನ್ನಾಡಿ, ಜೊತೆ ಕೋಶಾಧಿಕಾರಿ ಸಂತೋಷ್ ಪೂಜಾರಿ ಬೀಜಾಡಿ ಅವಿರೊಧವಾಗಿ ಆಯ್ಕೆಯಾದರು.
