ನೀಟ್ ಪರೀಕ್ಷಾ ಕೇಂದ್ರಕ್ಕೆ 2 ನಿಮಿಷ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟ ಶಾಸಕ ಯಶ್ ಪಾಲ್ ಸ್ಪಂದನೆಗೆ ವ್ಯಾಪಕ ಶ್ಲಾಘನೆ
ಉಡುಪಿ: ಭಾನುವಾರ ದೇಶದಾದ್ಯಂತ ನಡೆದ ನೀಟ್ ಪರೀಕ್ಷೆಯ ಹಿನ್ನೆಲೆಯಲ್ಲಿ ಉಡುಪಿಯ ಎಂ. ಜಿ. ಎಂ. ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಕಾರ್ಕಳದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ 2 ನಿಮಿಷ ತಡವಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಪೋಷಕರು ಹಾಗೂ ಕಾಲೇಜಿನ ಮುಖ್ಯಸ್ಥರು ಶಾಸಕ ಯಶ್ ಪಾಲ್ ಸುವರ್ಣ ರನ್ನು ಸಂಪರ್ಕಿಸಿದಾಗ ತಕ್ಷಣ ಸ್ಪಂದಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಿ ಜಿಲ್ಲಾಡಳಿತದ ಮೂಲಕ ವಿಶೇಷ ಅನುಮತಿ ಪಡೆದು ವಿದ್ಯಾರ್ಥಿನಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್ ಪಾಲ್ ಸುವರ್ಣ ರವರ ವಿಶೇಷ ಮುತುವರ್ಜಿಗೆ ವಿದ್ಯಾರ್ಥಿನಿಯ ಪೋಷಕರು ಹಾಗೂ ಕಾಲೇಜಿನ ಮುಖ್ಯಸ್ಥರು ಧನ್ಯವಾದ ಸಲ್ಲಿಸಿದ್ದಾರೆ.

ವಿದ್ಯಾರ್ಥಿನಿ ಅಕ್ಷತಾ
ಮಧ್ಯಾಹ್ನ 2 ಗಂಟೆಗೆ ನೀಟ್ ಪರೀಕ್ಷೆ ಪ್ರಾರಂಭವಾಗುವ ಹಿನ್ನೆಲೆ 1.30 ರವೆರೆಗೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿತ್ತು, ವಿದ್ಯಾರ್ಥಿನಿ ಅಕ್ಷತಾ 1.32ಕ್ಕೆ ಆಗಮಿಸಿದಾಗ ಪ್ರವೇಶ ನಿರಾಕರಿಸಿದಾಗ ಶಾಸಕ ಯಶ್ ಪಾಲ್ ಸುವರ್ಣ ರವರ ಸತತ ಪ್ರಯತ್ನದ ಬಳಿಕ ಮಧ್ಯಾಹ್ನ 2.45 ಕ್ಕೆ ಪ್ರವೇಶ ಒದಗಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು.
ಕಾರ್ಕಳ ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿನಿ ಅಕ್ಷತಾ ಪರೀಕ್ಷಾ ಕೇಂದ್ರಕ್ಕೆ ತನ್ನ ಪೋಷಕರೊಂದಿಗೆ ಆಗಮಿಸುತ್ತಿರುವಾಗ ವಾಹನ ದಾರಿ ಮಧ್ಯೆ ಹಾಳಾಗಿ ಬದಲಿ ವಾಹನದ ಮೂಲಕ ಪರೀಕ್ಷಾ ಕೇಂದ್ರಕ್ಕೆ ತಲುಪುವಾಗ 2 ನಿಮಿಷ ತಡವಾಗಿತ್ತು. ಪರೀಕ್ಷಾ ಕೇಂದ್ರದ ಅಧಿಕಾರಿಗಳು ಪ್ರವೇಶ ನೀಡಲು ನಿರಾಕರಿಸಿದಾಗ ಹತಾಶರಾದ ವಿದ್ಯಾರ್ಥಿನಿಯ ಪೋಷಕರು ಹಾಗೂ ಇತರ ಪೋಷಕರು ಶಾಸಕ ಯಶ್ ಪಾಲ್ ಸುವರ್ಣರಿಗೆ ಮಾಹಿತಿ ನೀಡಿದಾಗ, ವಿದ್ಯಾರ್ಥಿನಿಯ ಭವಿಷ್ಯದ ನಿಟ್ಟಿನಲ್ಲಿ ಶಾಸಕರು ತಕ್ಷಣ ಜಿಲ್ಲಾಧಿಕಾರಿ ಟಿ. ಕೆ. ಸ್ವರೂಪ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ರವರಿಗೆ ವಿದ್ಯಾರ್ಥಿನಿಗೆ ಪ್ರವೇಶ ಒದಗಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವಿಶೇಷ ಸಹಕಾರದಿಂದ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಅವಕಾಶ ಒದಗಿಸಲಾಯಿತು.
ಶಾಸಕ ಯಶ್ ಪಾಲ್ ಸುವರ್ಣ ರವರ ಬಡ ವಿದ್ಯಾರ್ಥಿನಿಯ ಶೈಕ್ಷಣಿಕ ಭವಿಷ್ಯದ ಬಗ್ಗೆ ಈ ತುರ್ತು ಸ್ಪಂದನೆಗೆ ಕುಂಜಿಬೆಟ್ಟುವಿನಲ್ಲಿರುವ ಆಕಾಶ್ ಇನ್ಸ್ಟಿಟ್ಯೂಟ್ ಉಪನ್ಯಾಸಕಿ ಪ್ರಿಯಾಂಕ ಪಾಲನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.