ಕುಡುಪು ಗುಂಪು ಹತ್ಯೆ ಪ್ರಕರಣ | ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪ; ಕೊಣಾಜೆ, ಬರ್ಕೆ, ಕಂಕನಾಡಿ ನಗರ ಠಾಣೆಗಳಲ್ಲಿ ಎಫ್ಐಆರ್
ಮಂಗಳೂರು: ನಗರ ಹೊರವಲಯದ ಕುಡುಪು ಸಮೀಪದ ಸಾಮ್ರಾಟ್ ಮೈದಾನದಲ್ಲಿ ರವಿವಾರ ಸಂಜೆ ಕೇರಳದ ವಯನಾಡಿನ ಸುಲ್ತಾನ್ ಬತ್ತೇರಿ ತಾಲೂಕಿನ ಪುಲ್ಪಳ್ಳಿ ಗ್ರಾಮದ ಅಶ್ರಫ್ ಎಂಬವರನ್ನು ಥಳಿಸಿ ಹತ್ಯೆಗೈದ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ ಕೊಣಾಜೆ, ಬರ್ಕೆ, ಕಂಕನಾಡಿ ನಗರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾರಿ ಮುಸ್ಲಿಂ ಆರ್ಮಿ ಎಂಬ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಕುಡುಪು ಕೂಲಿ ಕಾರ್ಮಿಕನ ಹತ್ಯೆಗೆ ಬಳಸಿದ ಬ್ಯಾಟ್ ಸ್ಟಂಪ್ ಬಶಕ್ಕೆ. ಹತ್ಯೆಗೆ ಬಳಸಿದ ಮಾರಕಾಸ್ತ್ರ ಕಾಣೆಯಾಗಿದೆ. ಇದರ ಹಿಂದೆ ಯಾರ ಕೈವಾಡವಿದೆ? ಎಂದು ಪೋಸ್ಟ್ ಮಾಡಿ ಸುಳ್ಳು ವದಂತಿ ಹಬ್ಬಿಸಿದ ಬಗ್ಗೆ ಕೊಣಾಜೆ ಠಾಣೆಯಲ್ಲಿ ಸೆ.192, 353 (1), 353 (2) ಬಿಎನ್ಎಸ್ 2023ರಂತೆ ಪ್ರಕರಣ ದಾಖಲಾಗಿದೆ.
ಬ್ಯಾರಿ ರಾಯಲ್ ನವಾಬ್ ಇನ್ಸ್ಟ್ರಾಗ್ರಾಮ್ ನಲ್ಲಿ ಸುಳ್ಳು ಮಾಹಿತಿ ಹಾಕಿದವರ ಮೇಲೆ ಬರ್ಕೆ ಠಾಣೆಯಲ್ಲಿ 353 (2) ಬಿಎನ್ಎಸ್ 2023ರಂತೆ ಪ್ರಕರಣ ದಾಖಲಾಗಿದೆ.
ಮೈಕಾಲ್ತೊ ಬ್ಯಾರಿ ಗ್ರೂಪ್ ನಲ್ಲಿ ಸುಳ್ಳು ಸುದ್ದಿ ಹಬ್ಬಿದ ಆರೋಪದ ಮೇರೆಗೆ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಝಾಕಿರ್ ಹುಸೇನ್ ಎಂಬಾತನ ವಿರುದ್ಧ 353 (1)(ಬಿ) ಬಿಎನ್ಎಸ್ನಂತೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.