ಮಂಗಳೂರು ಒಳಚರಂಡಿ ವ್ಯವಸ್ಥೆ ಮೇಲ್ದರ್ಜೆಗೆ 350 ಕೋಟಿ ರೂ.; ಸಚಿವ ಸಂಪುಟ ಸಭೆಯಲ್ಲಿ ಮಂಜೂರಾತಿ ನಿರೀಕ್ಷೆ: ಯತೀಂದ್ರ ಸಿದ್ಧರಾಮಯ್ಯ

Spread the love

ಮಂಗಳೂರು ಒಳಚರಂಡಿ ವ್ಯವಸ್ಥೆ ಮೇಲ್ದರ್ಜೆಗೆ 350 ಕೋಟಿ ರೂ.; ಸಚಿವ ಸಂಪುಟ ಸಭೆಯಲ್ಲಿ ಮಂಜೂರಾತಿ ನಿರೀಕ್ಷೆ: ಯತೀಂದ್ರ ಸಿದ್ಧರಾಮಯ್ಯ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಶೋಚನೀಯ ಪರಿಸ್ಥಿತಿಯಲ್ಲಿದ್ದು ಅದನ್ನು ಮೇಲ್ದರ್ಜೆಗೇರಿಸಲು 1250 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಪ್ರಥಮ ಹಂತದ ಕಾಮಗಾರಿಗೆ 350 ಕೋಟಿ ರೂ. ಇಲಾಖೆಯಿಂದ ಅನುಮೋದನೆ ನೀಡಲಾಗಿದೆ. ಸೆ.18ರ ಸಚಿವ ಸಂಪುಟ ಸಭೆಯಲ್ಲಿ ಅನುದಾನ ಬಿಡುಗಡೆಗೆ ಸರಕಾರದಿಂದ ಮಂಜೂರಾತಿ ಸಿಗುವ ನಿರೀಕ್ಷೆ ಇದೆ ಎಂದು ರಾಜ್ಯದ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಗುರುವಾರ ನಡೆದ ಮನಪಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು ನಗರದ ಒಳಚರಂಡಿ ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಆರಂಭಿಕ 350 ಕೋಟಿ ರೂ.ಗಳ ಕಾಮಗಾರಿಗೆ ಸ್ಥಳದಲ್ಲಿಯೇ ಮಂಜೂರಾತಿ ನೀಡಿದರು. ಸಚಿವ ಸಂಪುಟ ಸಭೆಯಲ್ಲಿ ಈ ಕಡತ ಮಂಡಿಸಲಾಗುವುದು. ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದಲ್ಲಿ ಹಣ ಬಿಡುಗಡೆಯಾಗಿ ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.

ಇದೇ ವೇಳೆ ಜಲಸಿರಿ ಯೋಜನೆಯಡಿ 24*7 ನೀರು ಪೂರೈಕೆಗೆ ಸಂಬಂಧಿಸಿ ಮಂಗಳೂರಿನ 60 ಕೋಟಿರೂ. ಹಾಗೂ ಪುತ್ತೂರು, ಕುಂದಾಪುರಕ್ಕೆ ಒಟ್ಟು 160 ಕೋಟಿ ರೂ.ಗಳ ಬೇಡಿಕೆಯನ್ನು ಸಚಿವ ಸಂಪುಟಕ್ಕೆ ಸಲ್ಲಿಸಲಾಗಿದೆ. ಹಣ ಹೊಂದಿಸಲು ನಿಬಂಧನೆಗಳನ್ನು ಸಡಿಲಿಕೆ ಮಾಡಲು ಪ್ರಸ್ತಾವನೆ ಮಾಡಲಾಗಿದ್ದು, ಸಂಪುಟ ಸಭೆಯಲ್ಲಿ ಅದು ಕೂಡಾ ಮಂಜೂರಾತಿ ಆಗುವ ನಿರೀಕ್ಷೆ ಇದೆ ಎಂದು ಸಚಿವ ಯತೀಂದ್ರ ಸಿದ್ಧರಾಮಯ್ಯ ಹೇಳಿದರು.

ಕರ್ನಾಟಕ ರಾಜ್ಯ ಸಾಫ್ಟ್‌ವೇರ್‌ನಲ್ಲಿ ಮುಂದಿದೆ. ಅದರಲ್ಲೂ ಸ್ಮಾರ್ಟ್ ಸಿಟಿ ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಇನ್ನೂ ಸಂಪೂರ್ಣವಾಗಿ ಡಿಜಿಟೈಸೇಶನ್ ಆಗದಿರುವುದು ಶೇಮ್. ಈ ಬಗ್ಗೆ ಪಾಲಿಕೆ ಆಡಳಿತ ದಿಟ್ಟ ಕ್ರಮ ವಹಿಸಬೇಕು. ಪಾಲಿಕೆ ಸಂಪೂರ್ಣ ಡಿಜಿಟೈಸೇಶನ್ ಗೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಿದ ಸಚಿವ ಯತೀಂದ್ರ ಅವರು, ಸಾರ್ವಜನಿಕರ ಅಹವಾಲುಗಳನ್ನು ಸರ್ಮಪವಾಗಿ ಆಲಿಸಬೇಕು. ಹಾಗೆಯ ಪಾಲಿಕೆಯಿಂದ ಆದ ಕಾಮಗಾರಿಗಳು ಸಾರ್ವಜನಿಕರಿಗೆ ತಿಳಿಯುವಂತಾಗಬೇಕು ಎಂದು ನಿರ್ದೇಶಿಸಿದರು.

ಪಾಲಿಕೆಯ ಮಾಜಿ ಕಾರ್ಪೊರೇಟರ್ ನವೀನ್ ಡಿಸೋಜಾ ಅವರು ಸಭೆಯಲ್ಲಿ ಪಾಲಿಕೆ ಸೌಲಭ್ಯಗಳು ಸಂಪೂರ್ಣ ಡಿಜಿಟೈಸೇಶನ್‌ಗೆ ಒತ್ತಾಯಿಸಿದ ಸಂದರ್ಭ ಸಚಿವರು ಈ ನಿರ್ದೇಶನ ನೀಡಿದರು.

ಮುಂದಿನ 25 ವರ್ಷಗಳ ಜನಸಂಖ್ಯೆಗೆ ಅನುಗುಣವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಲಭ್ಯತೆಗೆ ಅನುಗುಣವಾಗಿ ಸಂಗ್ರಹ ಸಾಮರ್ಥ್ಯ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ವಹಿಸುವಂತೆಯೂ ಸಚಿವರು ಸಲಹೆ ನೀಡಿದರು.

ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು ಶೇ. 100ರಷ್ಟು ತ್ಯಾಜ್ಯ ನಿರ್ವಹಣೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಕ್ರಮ ಆಗಬೇಕು. ಮುಂದಿನ 25 ವರ್ಷಗಳ ತ್ಯಾಜ್ಯ ಸಂಗ್ರಹಕ್ಕೆ ಪೂರಕವಾಗಿ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವ ಯತೀಂದ್ರ ನಿರ್ದೇಶಿಸಿದರು.

ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ ಅವರು, ಮಂಗಳೂರು ನಗರದ ಜಲಸಿರಿ ಕಾಮಗಾರಿ ವಿಳಂಬ, ಅಲ್ಲಲ್ಲಿ ರಸ್ತೆ ಅಗೆತ ಮಾಡುತ್ತಿರುವುದರಿಂದ ಸಾರ್ವಜನಿಕರಿಕೆ ಆಗುತ್ತಿರುವ ತೊಂದರೆ ಬಗ್ಗೆ ಸಚಿವರ ಗಮನಕ್ಕೆ ತಂದರು.

ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಿ ಈಗಾಗಲೇ 52.45 ಕಿ.ಮೀ. ವ್ಯಾಪ್ತಿಯ ಮುಖ್ಯ ಕೊಳವೆ ಅಳವಡಿಕೆಯಡಿ 7.45 ಕಿ.ಮೀ. ಬಾಕಿ ಇರುವುದಾಗಿ, 1191 ಕಿ.ಮೀ. ವ್ಯಾಪ್ತಿಯ ವಿತರಣಾ ಜಾಲದಡಿ 303 ಕಿ.ಮೀ. ಬಾಕಿ ಹಾಗೂ 96300 ಮನೆಗಳಿಗೆ ನಳ ಸಂಪರ್ಕದಡಿ 57118 ಸಂಪರ್ಕಗಳು ಬಾಕಿ ಇದ್ದು, 2027ರ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದರು.

ಕಳೆದ ಆರು ವರ್ಷಗಳ ಅವಧಿಯಲ್ಲಿ ಮನೆಗಳಿಗೆ ನಳ ಸಂಪರ್ಕದ ಶೇ. 35ರಷ್ಟು ಕಾಮಗಾರಿ ಮಾತ್ರವೇ ಆಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಈಗಾಗಲೇ ನೀಡಲಾಗಿರುವ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸಿ ನೀರು ಪೂರೈಕೆಗೆ ವ್ಯವಸ್ಥೆ ಮಾಡಬೇಕು. ಮುಂದಿನ ಸಭೆಗೆ ಮತ್ತೆ ಈ ವಿಷಯ ಪ್ರಸ್ತಾವ ಆಗಬಾರದು ಎಂದು ಸಚಿವ ಯತೀಂದ್ರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು

ಮಂಗಳೂರು ನಗರದ ಸೆಂಟ್ರಲ್ ಮಾರುಕಟ್ಟೆ ಸೇರಿದಂತೆ ವಿವಿಧ ಕಡೆ ನಿರ್ಮಾಣ ಆಗಿರುವ ಮಾರುಕಟ್ಟೆಗಳು ಮಾಲ್ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಬಹು ಮಹಡಿಗಳ ಮಾರುಕಟ್ಟೆಗೆ ಹಿರಿಯ ನಾಗರಿಕರು, ಸಾರ್ವಜನಿಕರು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಚಿವರ ಗಮನ ಸೆಳೆದರು.

ಹಲವು ಮಾರುಕಟ್ಟೆಗಳು ನಿರ್ಮಾಣ ಆಗಿ ಸಾಕಷ್ಟು ವರ್ಷಗಳಾಗದರೂ ಅಪೂರ್ಣ ವ್ಯವಸ್ಥೆಯಿಂದಾಗಿ ಸಾರ್ವಜನಿಕ ಬಳಕೆಗೆ ಸಿಗುತ್ತಿಲ್ಲ. ಮಾತ್ರವಲ್ಲದೆ, ಇದು ಸಾರ್ವಜನಿಕ ಹಾಗೂ ವ್ಯಾಪಾರಸ್ಥರಿಗೆ ಪೂರಕವಾಗಿಲ್ಲ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ, ಮಾಜಿ ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜಾ ಹಾಗೂ ಲ್ಯಾನ್ಸಿಲೋಟ್ ಪಿಂಟೋ ಅವರು ತಿಳಿಸಿದಾಗ, ಸಚಿವ ಯತೀಂದ್ರ ಅವರು ಪ್ರತಿಕ್ರಿಯಿಸಿ ಮುಂದೆ ನಿರ್ಮಾಣವಾಗುವ ಎಲ್ಲಾ ಮಾರುಕಟ್ಟೆಗಳು ಬೀದಿ ಬದಿ ವ್ಯಾಪಾರಿಗಳಿಗೆ, ಸಣ್ಣ ಮತ್ತು ಮದ್ಯಮ ವರ್ಗದ ವ್ಯಾಪಾರಿಗಳಿಗೆ ಪೂರಕವಾಗಿ ಹಾಗೂ ಸಾರ್ವಜನಿಕರ ಸ್ನೇಹಿಯಾಗಿ ನಿರ್ಮಾಣ ಮಾಡಲು ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಶಾಸಕರಾದ ಡಾ. ಭರತ್ ಕುಮಾರ್ ಶೆಟ್ಟಿ, ಕಿಶೋರ್ ಕುಮಾರ್, ಪಿ.ವಿ. ಮೋಹನ್, ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣೀಕರಣ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಳ್ಳಾಲ್, ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಮೊದಲಾದವರು ಉಪಸ್ಥಿತರಿದ್ದರು.

ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ನಲ್ಲಿ 7 ಲಕ್ಷ ಟನ್‌ನಷ್ಟು ಇನ್ನೂ ಪಾರಂಪರಿಕ ತ್ಯಾಜ್ಯ ನಿರ್ವಹಣೆ ಬಾಕಿ ಇರುವ ವಿಷಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಯತೀಂದ್ರ, ರಾಜ್ಯದ ಹಲವು ಪಾಲಿಕೆಗಳಿಗೆ ಭೇಟಿ ನೀಡಿದ್ದು, ಮಂಗಳೂರಿನಲ್ಲಿಯೇ ಪಾರಂಪರಿಕ ತ್ಯಾಜ್ಯ ಇಷ್ಟೊಂದು ಪ್ರಮಾಣದಲ್ಲಿರುವುದು ಗಮನಕ್ಕೆ ಬಂದಿದೆ. ಅದರ ನಿರ್ವಹಣೆ ವೇಗವನ್ನು ಹೆಚ್ಚಿಸಬೇಕು. ಮಂಗಳೂರು ಪಾಲಿಕೆಯಲ್ಲಿಯೂ ದಾವಣಗೆರೆಯಂತೆಯೇ ಶೇ. 100ರಷ್ಟು ತ್ಯಾಜ್ಯ ನಿರ್ವಹಣೆಯನ್ನು ಖಾತರಿಪಡಿಸಬೇಕು. ಈ ನಿಟ್ಟಿನಲ್ಲಿ ಪೌರ ಕಾರ್ಮಿಕರಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಕೆಲಸಕ್ಕೆ ಪ್ರೋತ್ಸಾಹಿಸಬೇಕು. ವಾಹನಗಳು ತ್ಯಾಜ್ಯ ಸಂಗ್ರಹವನ್ನು ಸಮರ್ಪಕವಾಗಿ ನಿರ್ವಹಿಸುವುದನ್ನು ಖಾತರಿಗೊಳಿಸಲು ಜಿಪಿಎಸ್ ಅಳವಡಿಕೆ ಕಡ್ಡಾಯಗೊಳಿಸಬೇಕು ಎಂದು ಸಚಿವ ಯತೀಂದ್ರ ಸಿದ್ಧರಾಮಯ್ಯ ಪಾಲಿಕೆ ಅಧಿಕಾರಿಗಳಿಗೆ ಸಲಹೆ ನೀಡಿದರು.


Spread the love
Subscribe
Notify of

0 Comments