ತುಳುನಾಡಿನ, ತುಳು ಜನರ ಭಾವನೆಗೆ  ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆಲೆ ಕೊಟ್ಟಿದ್ದಾರೆ – ರಮೇಶ್ ಕಾಂಚನ್

Spread the love

ತುಳುನಾಡಿನ, ತುಳು ಜನರ ಭಾವನೆಗೆ  ಮುಖ್ಯಮಂತ್ರಿ   ಡಿ.ಕೆ ಶಿವಕುಮಾರ್ ಬೆಲೆ ಕೊಟ್ಟಿದ್ದಾರೆ – ರಮೇಶ್ ಕಾಂಚನ್ 

ಉಡುಪಿ: ಕರಾವಳಿ ಜನರ 7 ದಶಕಗಳ ಕನಸಾಗಿರುವ ತುಳು ಭಾಷೆಗೆ ಹೆಚ್ಚುವರಿ ಅಧಿಕೃತ ಮಾನ್ಯತೆ ನೀಡುವ ವಿಚಾರಕ್ಕೆ ಮುಖ್ಯಮಂತ್ರಿ  ಡಿ ಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಗಂಭೀರವಾಗಿ ಸ್ಪಂದಿಸಿರುವುದು ತುಳುನಾಡಿನ ಪಾಲಿಗೆ ಮಹತ್ವದ ದಿನವಾಗಿದೆ. ತುಳು ಭಾಷೆ ಮಾತನಾಡುವ ಜನರ ಭಾವನೆಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬೆಲೆ ಕೊಟ್ಟಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಹರ್ಷ ವ್ಯಕ್ತಪಡಿಸಿದ್ದಾರೆ.

ತುಳು ಭಾಷೆಯ ಇತಿಹಾಸ, ಸಾಹಿತ್ಯ, ಸಂಸ್ಕೃತಿ ಹಾಗೂ ವಿಶಿಷ್ಟ ಪರಂಪರೆಯನ್ನು ಗೌರವಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಟ್ಟಿರುವ ಈ ಹೆಜ್ಜೆಗೆ ಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ಅವರಿಗೆ ಸಮಸ್ತ ತುಳುವರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು. ಮಂಗಳೂರಿನಲ್ಲಿ ನಡೆದ ಐತಿಹಾಸಿಕ ಸಚಿವ ಸಂಪುಟ ಸಭೆಯ ಬಳಿಕ ಈ ಘೋಷಣೆಯನ್ನು ಮಾಡಿರುವ ಮುಖ್ಯಮಂತ್ರಿಗಳಿಗೆ ಕರಾವಳಿ ಜಿಲ್ಲೆ, ರಾಜ್ಯದ ಬೇರೆ ಬೇರೆ ಭಾಗ ಮತ್ತು ಪ್ರಪಂಚದ ಬೇರೆ ಬೇರೆ ದೇಶದಲ್ಲಿ ನೆಲೆಸಿರುವ ತುಳುವರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ರಮೇಶ್ ಕಾಂಚನ್ ತಿಳಿಸಿದರು.

ತುಳು ಕೇವಲ ಒಂದು ಭಾಷೆಯಲ್ಲ. ಅದು ಕರಾವಳಿಯ ಜನರ ಬದುಕು, ಸಂಸ್ಕೃತಿ, ಆಚರಣೆ, ಜಾನಪದ, ಯಕ್ಷಗಾನ, ಭೂತಾರಾಧನೆ, ಕಂಬಳ, ಪಾಡ್ದನ ಮತ್ತು ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆಯ ಭಾಷೆಯಾಗಿದೆ. ಆಡಳಿತಾತ್ಮಕವಾಗಿ ಹೆಚ್ಚಿನ ಮಾನ್ಯತೆ ದೊರೆಯುವುದು ತುಳು ಭಾಷೆಯ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಅದರ ವರ್ಗಾವಣೆಗೆ ಮಹತ್ವದ ಹೆಜ್ಜೆಯಾಗುತ್ತದೆ.

ತುಳುವಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ದೊರೆತರೆ, ತುಳು ಭಾಷೆಯ ಬಳಕೆ ಆಡಳಿತಾತ್ಮಕ ವ್ಯವಹಾರಗಳಲ್ಲಿ ಹೆಚ್ಚಾಗುವ ಅವಕಾಶ ಸಿಗಬಹುದು. ಸರ್ಕಾರಿ ಕಚೇರಿಗಳು, ಸ್ಥಳೀಯ ಆಡಳಿತ, ಸಾರ್ವಜನಿಕ ಸೇವೆಗಳು ಮತ್ತು ಜನರೊಂದಿಗೆ ಸರ್ಕಾರದ ಸಂಪರ್ಕದಲ್ಲಿ ತುಳು ಭಾಷೆಯ ಬಳಕೆಗೆ ಹೆಚ್ಚಿನ ಅವಕಾಶ ಸೃಷ್ಟಿಯಾಗಬಹುದು.

ತುಳು ಸಾಹಿತ್ಯ, ಸಂಶೋಧನೆ, ಅನುವಾದ, ಪ್ರಕಟಣೆ, ಶಿಕ್ಷಣ ಮತ್ತು ಡಿಜಿಟಲ್ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆಯುವ ನಿರೀಕ್ಷೆಯಿದೆ. ತುಳು ಲಿಪಿ ಹಾಗೂ ಭಾಷಾ ಪರಂಪರೆಯ ಸಂರಕ್ಷಣೆಗೆ ಹೊಸ ಅವಕಾಶಗಳು ಸೃಷ್ಟಿಯಾಗಬಹುದು. ಯುವ ಪೀಳಿಗೆಯಲ್ಲಿ ತುಳು ಭಾಷೆಯ ಬಗ್ಗೆ ಹೆಮ್ಮೆ ಮತ್ತು ಆಸಕ್ತಿ ಹೆಚ್ಚಿಸಲು ಇಂತಹ ಮಾನ್ಯತೆ ಸಹಕಾರಿಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.

ತುಳು ಭಾಷೆಯ ಬೇಡಿಕೆ ಹಲವು ದಶಕಗಳಿಂದ ಕರಾವಳಿಯಲ್ಲಿ ಕೇಳಿಬರುತ್ತಿದ್ದಕ ಬಹು ವರ್ಷಗಳ ಹೋರಾಟಕ್ಕೆ ಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ. ಕರಾವಳಿಯ ಜನರ ಭಾವನೆಗಳಿಗೆ ಸ್ಪಂದಿಸಿ ತುಳು ಭಾಷೆಯ ಸ್ಥಾನಮಾನ ಕುರಿತು ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ಮತ್ತು ಕ್ರಮಕ್ಕೆ ಅವಕಾಶ ಕಲ್ಪಿಸಿರುವ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ತುಳುನಾಡಿನ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರು ಮಾಧ್ಯಮಗಳ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.


Spread the love
Subscribe
Notify of

0 Comments