ಮಹಾಲಕ್ಷ್ಮೀ ಬ್ಯಾಂಕ್ ಸಾಲ ಮರುಪಾವತಿ ಪ್ರಕರಣ: ಇಬ್ಬರಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಉಡುಪಿ: ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ನಿಂದ ಪಡೆದ ಸಾಲವನ್ನು ಮರುಪಾವತಿಸದೆ, ಬ್ಯಾಂಕ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದ ಇಬ್ಬರು ಸಾಲಗಾರರಿಗೆ ಚೆಕ್ ಅಮಾನ್ಯ (Cheque Bounce) ಪ್ರಕರಣದಲ್ಲಿ ಉಡುಪಿ ಜಿಲ್ಲಾ ಪ್ರಥಮ ದರ್ಜೆ ಹಿರಿಯ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಚೆಕ್ ಅಮಾನ್ಯ ಪ್ರಕರಣ ಸಂಖ್ಯೆ ಸಿ.ಸಿ. 0000804/2025ರಲ್ಲಿ ಆರೋಪಿ ದೀಪಕ್ ಡಿ. ಶೆಣೈ ಅವರಿಗೆ ₹3,00,000 ಮೊತ್ತವನ್ನು ಬ್ಯಾಂಕ್ಗೆ ಮರುಪಾವತಿಸುವಂತೆ ಹಾಗೂ ₹5,000 ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ದೀಪಕ್ ಡಿ. ಶೆಣೈ ಅವರು 2021ರ ಮಾರ್ಚ್ 12ರಂದು ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ನ ಮಲ್ಪೆ ಶಾಖೆಯಿಂದ ₹2 ಲಕ್ಷ ಜಾಮೀನು ಸಾಲ ಪಡೆದಿದ್ದು, ಸಾಲವನ್ನು ಮರುಪಾವತಿಸಿರಲಿಲ್ಲ. ಈ ಸಂಬಂಧ ಸಹಕಾರ ಸಂಘಗಳ ಅಪರ/ಜಂಟಿ ನಿಬಂಧಕರ ನ್ಯಾಯಾಲಯದಲ್ಲೂ ಬ್ಯಾಂಕ್ ಪರ ಡಿಕ್ರಿ ಹೊರಬಿದ್ದಿತ್ತು. ಸಾಲ ಮರುಪಾವತಿಗಾಗಿ ನೀಡಿದ್ದ ಚೆಕ್ ಸಹ ಅಮಾನ್ಯಗೊಂಡಿತ್ತು.
ಇದೇ ರೀತಿಯಲ್ಲಿ, ಚೆಕ್ ಅಮಾನ್ಯ ಪ್ರಕರಣ ಸಂಖ್ಯೆ ಸಿ.ಸಿ. 0000803/2025ರಲ್ಲಿ ಆರೋಪಿ ಪ್ರಸಾದ್ ಕುಲಾಲ್ ಅವರಿಗೆ ₹3,25,000 ಬ್ಯಾಂಕ್ಗೆ ಮರುಪಾವತಿಸುವಂತೆ ಹಾಗೂ ₹5,000 ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಸಾದ್ ಕುಲಾಲ್ ಅವರು 2021ರ ಅಕ್ಟೋಬರ್ 13ರಂದು ಮಲ್ಪೆ ಶಾಖೆಯಿಂದ ₹2 ಲಕ್ಷ ಜಾಮೀನು ಸಾಲ ಪಡೆದು, ಅದನ್ನು ಮರುಪಾವತಿಸದೆ ಬಾಕಿ ಉಳಿಸಿಕೊಂಡಿದ್ದರು. ಈ ಸಂಬಂಧ ಸಹಕಾರ ಸಂಘಗಳ ಉಪ ನಿಬಂಧಕರ ನ್ಯಾಯಾಲಯದಲ್ಲೂ ಬ್ಯಾಂಕ್ ಪರ ಡಿಕ್ರಿ ಹೊರಬಿದ್ದಿದ್ದು, ಸಾಲ ಮರುಪಾವತಿಗೆ ನೀಡಿದ್ದ ಚೆಕ್ ಕೂಡ ಅಮಾನ್ಯಗೊಂಡಿತ್ತು.
ಬ್ಯಾಂಕ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಇಬ್ಬರು ಆರೋಪಿಗಳು ಸಾಲ ಮರುಪಾವತಿಸದೇ ವಂಚನೆ ಎಸಗಿರುವುದಲ್ಲದೆ, ಇತರ ಸಾಲಗಾರರಿಗೆ ತಪ್ಪು ಮಾಹಿತಿ ನೀಡಿ ಸಾಲ ಮರುಪಾವತಿಸದಂತೆ ಪ್ರಚೋದಿಸಿರುವುದಾಗಿ ಹಾಗೂ ಬ್ಯಾಂಕ್ ವಿರುದ್ಧ ಸುಳ್ಳು ಆರೋಪ ಮತ್ತು ಆಪಾದನೆಗಳನ್ನು ಮಾಡಿರುವುದಾಗಿ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.













