ಅಮೃತ ಭಾರತ ರೈಲು ನಿಲ್ದಾಣ ಅಭಿವೃದ್ಧಿಗೆ ಉಡುಪಿ ಆಯ್ಕೆ: ಶೋಭಾ ಕರಂದ್ಲಾಜೆ

Spread the love

ಅಮೃತ ಭಾರತ ರೈಲು ನಿಲ್ದಾಣ ಅಭಿವೃದ್ಧಿಗೆ ಉಡುಪಿ ಆಯ್ಕೆ: ಶೋಭಾ ಕರಂದ್ಲಾಜೆ
 

ಉಡುಪಿ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ ಪ್ರಾರಂಭಿಸಿದ ಅಮೃತ ಭಾರತ ರೈಲು ನಿಲ್ದಾಣಗಳ ಅಭಿವೃದ್ಧಿ ಯೋಜನೆಯಡಿ ಉಡುಪಿ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವೆ ಹಾಗೂ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಉಡುಪಿಯ ಕೊಂಕಣ ರೈಲ್ವೆ ನಿಲ್ದಾಣವನ್ನು ಈ ಯೋಜನೆಯಡಿ ಆಯ್ಕೆ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ಭಾರತೀಯ ರೈಲ್ವೆ ನರೇಂದ್ರ ಮೋದಿ ಹಾಗೂ ಅಶ್ವಿನಿ ವೈಷ್ಣವ್ ನೇತೃತ್ವದಲ್ಲಿ ಅಭೂತಪೂರ್ವ ಪ್ರಗತಿಯತ್ತ ದಾಪುಗಾಲಿ ಕ್ಕುತ್ತಿರುವ ಈ ಸುಸಂದರ್ಭದಲ್ಲಿ ಅಮೃತ್ ಭಾರತ್ ಯೊಜನೆಯ ಮೂಲಕ ಉಡುಪಿ ರೈಲು ನಿಲ್ದಾಣವನ್ನು ಸಂಪೂರ್ಣ ಆಧುನೀಕರಿಸಿ ವಿಶ್ವದರ್ಜೆಯ ಪ್ರಯಾಣಿಕ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗಲಿದೆ.

ತನ್ಮೂಲಕ ಶೈಕ್ಷಣಿಕ ಕೇಂದ್ರ ಮಣಿಪಾಲ, ಧಾರ್ಮಿಕ ಕೇಂದ್ರ ಉಡುಪಿ ಹಾಗೂ ಬಂದರು ನಗರಿ ಮಲ್ಪೆಗೆ ಸಂಬಂಧಿಸಿದ ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗಲಿದೆ. ಅಮೃತ್ ಭಾರತ್ ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸಲು ರೈಲ್ವೆ ಇಲಾಖೆಗೆ ಸೂಚಿಸಲಾಗುವುದು ಎಂದು ಶೋಭಾ ಕರಂದ್ಲಾಜೆ ಹೇಳಿಕಯಲ್ಲಿ ತಿಳಿಸಿದ್ದಾರೆ.

ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಉಡುಪಿಯ ರೈಲ್ವೆ ನಿಲ್ದಾಣ ಆಯ್ಕೆ ಮಾಡಿರುವುದಕ್ಕೆ ಪ್ರಧಾನಿ ಹಾಗೂ ಕೇಂದ್ರ ರೈಲ್ವೇ ಸಚಿವರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.


Spread the love