ಜನಸಂಖ್ಯೆ : ಸ್ಥಿರತೆ ಕಾಪಾಡುವುದು ಅಗತ್ಯ- ಡಾ. ಸೆಲ್ವಮಣಿ 

Spread the love

ಜನಸಂಖ್ಯೆ : ಸ್ಥಿರತೆ ಕಾಪಾಡುವುದು ಅಗತ್ಯ- ಡಾ. ಸೆಲ್ವಮಣಿ 

ಮಂಗಳೂರು: ಸಂಪನ್ಮೂಲದ ಉಳಿವಿಗಾಗಿ ಜನಸಂಖ್ಯೆ ಸ್ಪೋಟದಲ್ಲಿ ಸ್ಥಿರತೆ ಕಾಪಾಡುವುದು ಅಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ. ಸೆಲ್ವಮಣಿ ಆರ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೆನ್‍ಲಾಕ್ ಆಸ್ಪತ್ರೆ, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ರಾಷ್ಟ್ರೀಯ ಸೇವಾಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆದ “ವಿಶ್ವ ಜನಸಂಖ್ಯಾ ದಿನಾಚರಣೆ-2019” ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಈ ಜಗತ್ತಿನಲ್ಲಿ ನೀರು, ಅರಣ್ಯ, ಭೂ ಭಾಗ ಪ್ರದೇಶಗಳು ಪೂರ್ವ ಕಾಲದಲ್ಲಿ ಹೇಗಿತ್ತೋ ಈಗಲೂ ಅದೇ ರೀತಿ ಇದೆ. ಆದರೆ ಜನಸಂಖ್ಯೆ ಮಾತ್ರ ತುಂಬಾ ವೇಗವಾಗಿ ಬೆಳೆಯುತ್ತಿದೆ, ಹೀಗೆ ಮುಂದುವರೆದರೆ ಮಾನವನಿಗೆ ಸಂಪನ್ಮೂಲಗಳ ಕೊರತೆ ಉಂಟಾಗುವುದು ಕಂಡಿತ: ಎಂದು ಆತಂಕ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈದ್ಯಕೀಯ ಸೌಲಭ್ಯಗಳು ಜನರಿಗೆ ಸರಿಯಾದ ಸಂಧರ್ಭದಲ್ಲಿ ಲಭಿಸುತ್ತಿರುವುದರಿಂದ ಮರಣದ ಪ್ರಮಾಣ ಸಂಖ್ಯೆ ಕಡಿಮೆ ಆಗಿದೆ, ಆದರೆ ಜನಸಂಖ್ಯೆಯು ನಿಯಂತ್ರಣಕ್ಕೆ ಬಂದಿಲ್ಲ ಜನಸಂಖ್ಯೆ ಸ್ಪೋಟದಲ್ಲಿ ಸ್ಥಿರತೆಯನ್ನು ಕಾಪಾಡಬೇಕು, ಸರಕಾರದಲ್ಲಿನ ಕುಟುಂಬ ಕಲ್ಯಾಣ ಯೋಜನೆಗಳನ್ನು ಪ್ರತಿಯೊಂದು ಕುಟುಂಬವು ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಉದಯ ಕುಮಾರ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಔಪಚಾರಿಕ ಕಾರ್ಯಕ್ರಮ ಆಗದೆ, ಕಾರ್ಯ ರೂಪಕ್ಕೆ ಬರಬೇಕು ಆಗ ಮಾತ್ರ ಇಂತಹಾ ದಿನಾಚರಣೆಗಳ ಆಚರಣೆಗೆ ನಿಜವಾದ ಆರ್ಥ ಬರಲು ಸಾಧ್ಯ ಎಂದರು. ಮುಂದಿನ ಜನಾಂಗಕ್ಕೆ ನಾವು ಏನಾದರೂ ಕೊಡುಗೆ ಕೊಡುವುದಾರೆ ಜನಸಂಖ್ಯಾ ನಿಯಂತ್ರಣಕ್ಕೆ ಸಹಕಾರ ನೀಡಿ ಸಂಪನ್ಮೂಲಗಳನ್ನು ಮಿತವಾಗಿ ಬಳಸಿ, ಉಳಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ. ರಾಮಕೃಷ್ಣ ರಾವ್. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸಿಕಂದರ್ ಪಾಷ, ಡಾ. ದುರ್ಗಾ ಪ್ರಸಾದ್ , ಡಾ. ಸುಜಯ್ ಕುಮಾರ್ ಪ್ರಾಧ್ಯಾಪಕರು, ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ. ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು.


Spread the love