ಪುತ್ತಿಗೆ ಪರ್ಯಾಯಕ್ಕೆ ಸಾಕ್ಷಿಯಾಗಲಿದ್ದಾರೆ ವಿಶ್ವದ ಗಣ್ಯರು

Spread the love

ಪುತ್ತಿಗೆ ಪರ್ಯಾಯಕ್ಕೆ ಸಾಕ್ಷಿಯಾಗಲಿದ್ದಾರೆ ವಿಶ್ವದ ಗಣ್ಯರು

ಉಡುಪಿ: ಭಾರತೀಯ ಪರಂಪರೆ, ಮಾಧ್ವ ತತ್ವವನ್ನು ಜಗತ್ತಿಗೆ ಸಾರಿದ ಹಾಗೂ ಗೀತಾಸಾರವನ್ನು ವಿಶ್ವಕ್ಕೆ ಪಸರಿಸಲು ಕಾರಣವಾಗಿರುವ  ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಪರ್ಯಾಯ ಪೀಠಾರೋಹಣ ಕಾರ್ಯಕ್ರಮ ಈಗಾಗಲೇ ವಿಶ್ವಪರ್ಯಾಯವೆಂದು ಘೋಷಣೆಯಾಗಿದ್ದು ಜನವರಿ 18 ರಂದು ನಡೆಯಲಿರುವ ಪರ್ಯಾಯಕ್ಕೆ ವಿದೇಶಿ ಗಣ್ಯರು ಕೂಡ ಸಾಕ್ಷಿಯಾಗಲಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಆಸ್ಟ್ರೇಲಿಯಾದ ಲ್ಯೂಕ್ ಡನೆಲನ್
ಆಸ್ಟ್ರೇಲಿಯಾದ ವಿಕ್ಟೋರಿಯಾದ ಮಾಜಿ ಸಚಿವರಾಗಿರುವ ಲ್ಯೂಕ್ ಡನೆಲನ್ ಅವರು ವಿಕ್ಟೋರಿಯದಲ್ಲಿರುವ ದಕ್ಷಿಣ ಭಾರತದ ಹಿಂದೂ ಸಮುದಾಯಕ್ಕೆ ಅಲ್ಲಿ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಸ್ಥಾಪಿಸಿರುವ ಕೃಷ್ಣ ದೇವಾಲಯ ಹಿಂದುಗಳ ಹಬ್ಬಗಳ ಆಚರಣೆಯಲ್ಲಿ ವಹಿಸುತ್ತಿರುವ ಮಹತ್ವಪೂರ್ಣ ಸೇವೆಯನ್ನು ಅವರು ಶ್ಲಾಘಿಸಿದ್ದು, ಜನವರಿ 18ರಂದು ನಡೆಯುವ ಪರ್ಯಾಯ ಮಹೋತ್ಸವದಲ್ಲಿ ಭಾಗವಹಿಸುವ ದಿನಕ್ಕಾಗಿ ಕಾಯುತ್ತಿದ್ದೇನೆ ಎಂದು ಶ್ರೀಗಳಿಗೆ ಪತ್ರ ಬರೆದಿದ್ದಾರೆ.

ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರಾಂತ್ಯದ ಬಹುಸಾಂಸ್ಕೃತಿಕ ನಗರವಾಗಿರುವ ಮೆಲ್ಬೋರ್ನ್ ನಲ್ಲಿ ಶ್ರೀಕೃಷ್ಣ ಬೃಂದಾವನ ಸ್ಥಾಪಿಸಿರುವ ಶ್ರೀ ಸುಗುಣೇಂದ್ರ ತೀರ್ಥರ ಅಭಿಮಾನಿಯಾಗಿದ್ದಾರೆ ಡನೆಲನ್. ಅವರು ಆಸ್ಟ್ರೇಲಿಯಾದ ಅನಿವಾಸಿ ಭಾರತೀಯರಿಗೆ ವಿಶೇಷ ಪ್ರೋತ್ಸಾಹಕರೂ ಹೌದು.

ಅಮೆರಿಕಾದ ಡಾ. ವಿಲಿಯಮ್ ವೆಂಡ್ಲೆ
ಅಮೆರಿಕಾದ ವರ್ಲ್ಡ್ ರಿಲಿಜಿಯಸ್ ಮತ್ತು ಸ್ಪಿರಿಚುವಾಲಿಟಿ ಉಪಾಧ್ಯಕ್ಷ ಡಾ. ವಿಲಿಯಮ್ ವೆಂಡ್ಲೆ ಯವರು ಆಧುನಿಕ ವಿಜ್ಞಾನ ಮತ್ತು ಇತಿಹಾಸ, ಧರ್ಮಗಳ ನಡುವೆ ಸಮನ್ವಯ ಸಾಧಿಸುವ ಶೇರ್ಡ್ ಸೇಕ್ರೆಡ್ ಸ್ಟೋರಿ ಎಂಬ ಯೋಜನೆಯ ಮುಖ್ಯಸ್ಥರು. ಡಾಂ ವೆಂಡ್ಲಿ ಫೆಟ್ಲರ್ ಎಂಬ ಸಂಸ್ಥೆ ಸೇರುವ ಮೊದಲು 27 ವರ್ಷ ರಿಲಿಜಿಯನ್ಸ್ ಫಾರ್ ಪೀಸ್ ಮಹಾಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ರಿಲಿಜಿಯನ್ಸ್ ಫಾರ್ ಪೀಸ್ ಎಂಬುದು ವಿಶ್ವದ ಬೃಹತ್ತಾದ ಒಂದು ಬಹುಧರ್ಮೀಯ ಸಂಘಟನೆಯಾಗಿದೆ. ಇದು ವಿಶ್ವದ 100ಕ್ಕೂ ಅಧಿಕ ದೇಶಗಳಲ್ಲಿ ಕಾರ್ಯವೆಸಗುತ್ತಿದೆ.

10 ವರ್ಷಗಳ ಕಾಲ ನಡೆದ ಅಂತರ್ಯುದ್ಧದ ನಡುವೆ ಸಿಯೆರಾ ಲಿಯೋನ ಅಂತರ್ ಧಾರ್ಮಿಕ ಸಮಿತಿ, ಎಚ್.ಐ.ವಿ. ಏಡ್ಸ್ ನಿಂದ ಅನಾಥರಾದ ಆಫ್ರಿಕಾದ ಮಕ್ಕಳ ನೆರವಿಗೆ ಸ್ಥಾಪಿಸಲಾದ ಹೋಪ್ ಫಾರ್ ಆಫ್ರಿಕನ್ ಚಿಲ್ಡ್ರನ್ ಸಂಸ್ಥೆಯ ಸಹ-ಸಂಸ್ಥಾಪಕರಾಗಿರುವ ಡಾ ವೆಂಡ್ಲಿ, ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳ ವಿಜೇತರು. ಡಾಂ ವೆಂಡ್ಲಿ ಶ್ರೀ ಸುಗುಣೇಂದ್ರ ತೀರ್ಥರನ್ನು ಹಿಂದು ಆಧ್ಯಾತ್ಮಿಕ ಪರಂಪರೆಯ ಸಾಕಾರಮೂರ್ತಿ ಎಂದು ಶ್ಲಾಘಿಸುತ್ತಾರೆ.

ಜಪಾನಿನ ರೆ.ಕೋಶೋ ನಿವಾನೊ
ರೆವರೆಂಡ್ ಕೊಶೊ ನಿವಾನೊರವರು ಜಪಾನಿನ ಜನಸಾಮಾನ್ಯರ ಒಂದು ದೊಡ್ಡ ಚಳವಳಿಯಾಗಿರುವ ರಿಶ್ಯೊ ಕೊಸೀ ಕ್ಯಾಯ ನಿಯೋಜಿತ ಅಧ್ಯಕ್ಷೆಯಾಗಿದ್ದಾರೆ. ಟೊಕಿಯೋದಲ್ಲಿ ನೆಲೆಸಿದ ಇವರು, ಅಧ್ಯಕ್ಷ ನಿಚಿಕೊ ನಿವಾನೊ ಅವರ ಮೊದಲ ಪುತ್ರಿ. ದೇಶಿಯ ಹಾಗೂ ಅಂತಾರಾಷ್ಟ್ರೀಯ ಅಂತರ್ ಧಾರ್ಮಿಕ ಸಂವಾದ ಹಾಗೂ ಶಾಂತಿ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಿವಾನೊ ಅವರು ರಿಲಿಜನ್ಸ್ ಫಾರ್ ಪೀಸ್ ಮತ್ತು ದಿ ಕಿಂಗ್ ಅಬ್ದುಲ್ಲಾ ಬಿನ್ ಅಬ್ದುಲ್ಲ ಜೀಜ್ ಇಂಟರ್ನ್ಯಾಶನಲ್ ಸೆಂಟರ್ ಫಾರ್ ಇಂಟರ್ ರಿಲಿಜಿಯಸ್ ಆಂಡ್ ಇಂಟರ್ ಕಲ್ಜರಲ್ ಡಯಲಾಗ್ ನಂಥ ಹಲವು ಸಂಘಟನೆಗಳಲ್ಲಿ ತೊಡಗಿಸಿಕೊಂಡವರು.

ಜಪಾನ್ನ ರಿಫ್ ಇಂಟರ್ ನ್ಯಾಶನಲ್ನ ಸಹಸಂವಾದಿ ಹಾಗೂ ಕಾರ್ಯನಿರ್ವಾಹಕ ಸಮಿತಿ ಸದಸ್ಯೆಯಾಗಿದ್ದಾರೆ. ಕೆಎಐಸಿಐಐಡಿಯ ನಿರ್ದೇಶಕ ಮಂಡಳಿ ಸದಸ್ಯೆ, ಜಪಾನಿನ ಫೆಡರೇಶನ್ ಆಫ್ ನ್ಯೂರಿಲಿಜಿಯಸ್ ಆರ್ಗನೈಸೇಶನ್ನ ಕಾರ್ಯನಿರ್ವಾಹಕ ನಿರ್ದೇಶಕಿ. ಸೋಫಿಯಾ ವಿಶ್ವವಿದ್ಯಾನಿಲಯದಿಂದ ಅಂತರ್ ಧಾರ್ಮಿಕ ಸಂವಾದ ಹಾಗೂ ಸಹಕಾರ ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಿವಾನೋ ದಿ ಬುದ್ಧ ಇನ್ ಎವೆರಿವನ್ಸ್ ಹಾರ್ಟ್ ಎಂಬ ಕೃತಿಯ ಲೇಖಕಿ.


Spread the love