ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ತ್ವರಿತವಾಗಬೇಕು: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ 

Spread the love

ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ತ್ವರಿತವಾಗಬೇಕು: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ 

ಮಂಗಳೂರು: ಜಿಲ್ಲೆಯ ಬ್ಲೂಫ್ಲಾಗ್ ಬೀಚ್‍ನ ಬಗ್ಗೆ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿಯ ಕೊರತೆ ಇದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಹೇಳಿದರು.

ಅವರು ಸೋಮವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವತಿಯಿಂದ ಮಂಗಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸಭೆಯಲ್ಲಿ ಮಾತನಾಡಿದರು.

ಈಗಾಗಲೇ ಸ್ಮಾರ್ಟ್‍ಸಿಟಿ ಆಗಿ ರೂಪುಗೊಳ್ಳುತ್ತಿರುವ ಮಂಗಳೂರಿನಲ್ಲಿ ಪ್ರವಾಸೋದ್ಯಮವು ಅತ್ಯಂತ ಮುಖ್ಯವಾದ ಭಾಗವಾಗಿದ್ದು, ನಗರದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವಂತಹಲವಾರು ಕೆಲಸ ಕಾರ್ಯಗಳು ನಡೆಯುತ್ತಿದೆ, ಇವುಗಳಲ್ಲಿ ಬೀಚ್ ಪ್ರವಾಸೋದ್ಯಮ ಬಹಳ ಮಹತ್ವಪಾತ್ರ ಹೊಂದಿದೆ ಎಂದರು.

ಮಂಗಳೂರಿನ ತಣ್ಣೀರುಬಾವಿ ಸಮುದ್ರ ಕಿನಾರೆಯೂ ಬ್ಲೂಫ್ಲಾಗ್ ಬೀಚ್ ಆಗಿ ರೂಪುಗೊಂಡಿದೆ, ಆದರೆ ತಣ್ಣೀರು ಬಾವಿ ಬ್ಲೂಫ್ಲಾಗ್ ಬೀಚ್‍ನ ಬಗ್ಗೆ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಇಲ್ಲದಿರುವುದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ, ಆದ್ದರಿಂದ ಬೀಚ್‍ನ ಮುಖ್ಯದ್ವಾರ ಹಾಗೂ ನಗರದಲ್ಲಿ ಜನದಟ್ಟಣೆ ಇರುವಂತಹ ಪ್ರದೇಶಗಳಲ್ಲಿ ಅತ್ಯಾಕರ್ಷಕವಾದ ನಾಮಫಲಕವನ್ನು ಅಳವಡಿಸುವಂತೆ ಹಾಗೂ ಕರಾವಳಿಯ ಪ್ರವಾಸೋದ್ಯಮವನ್ನು ಇನ್ನಷ್ಟು ಜನರಿಗೆ ತಲುಪುವಂತೆ ಮಾಡಲು ಸಾಮಾಜಿಕ ಜಾಲತಾಣಗಳಲ್ಲಿ, ವೆಬ್‍ಸೈಟ್ ಗಳಲ್ಲಿ ಪ್ರವಾಸೋದ್ಯಮ ಸ್ಥಳಗಳ ಕುರಿತು ಮಾಹಿತಿ ಹಾಗೂ ಛಾಯಾಚಿತ್ರಗಳನ್ನು ಒಳಗೊಂಡಂತೆ ಸಂಪೂರ್ಣ ಚಿತ್ರಣವನ್ನು ರೂಪಿಸುವ ಸಲುವಾಗಿ ಸಾಮಾಜಿಕ ಜಾಲತಾಣ, ವೆಬ್‍ಸೈಟ್‍ಗಳಲ್ಲಿ ಪರಿಣತಿ ಹೊಂದಿರುವವರನ್ನು ಸಂಪರ್ಕಿಸಿ ಅವರಿಂದ ಆಕರ್ಷಕವಾಗಿ ವಿನ್ಯಾಸಗೊಳಿಸುವಂತೆ ಸೂಚಿಸಿದರು.

ಪ್ರವಾಸೋದ್ಯಮದ ಬಗೆಗಿನ ಹಲವಾರು ಯೋಜನೆಗಳು ನಿಧಾನ ಗತಿಯಲ್ಲಿ ನಡೆಯುತ್ತಿದೆ. ಆದಷ್ಟು ಬೇಗ ಎಲ್ಲಾ ರೀತಿಯ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗಳು ನಡೆಯÀಬೇಕು. ಇದೀಗ ಪ್ರವಾಸೋದ್ಯಮದ ಸಮಯವಾಗಿದ್ದು ಹಲವಾರು ಪ್ರವಾಸಿಗರು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಅಲ್ಲದೆ ಈಗ ಮಾಲ್ಡೀವ್ಸ್ ಲಕ್ಷದ್ವೀಪದ ವಿಷಯವಾಗಿ ಸ್ಥಳೀಯ ಬೀಚ್‍ಗಳ ಹೆಸರು ಕೂಡ ಕೇಳಿ ಬರುತ್ತಿದ್ದು, ಆದಷ್ಟು ಬೇಗ ಅಭಿವೃದ್ಧಿ ಕಾರ್ಯಗಳು ಮುಗಿಯಬೇಕು ಹಾಗೂ ಪ್ರವಾಸಿಗರನ್ನು ಕರಾವಳಿಯತ್ತ ಸೆಳೆಯುವಂತಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಾಣಿಕ್ಯ ಮತ್ತಿತರರು ಉಪಸ್ಥಿತರಿದ್ದರು.


Spread the love