ಬಿಜೆಪಿಗರ ಗೂಂಡಾಗಿರಿ, ಪೊಲೀಸರ ದೌರ್ಜನ್ಯ ಎದುರಿಸುವ ಶಕ್ತಿ ಕಾಂಗ್ರೆಸಿಗಿದೆ- ಪ್ರಖ್ಯಾತ್ ಶೆಟ್ಟಿ

Spread the love

ಬಿಜೆಪಿಗರ ಗೂಂಡಾಗಿರಿ, ಪೊಲೀಸರ ದೌರ್ಜನ್ಯ ಎದುರಿಸುವ ಶಕ್ತಿ ಕಾಂಗ್ರೆಸಿಗಿದೆ- ಪ್ರಖ್ಯಾತ್ ಶೆಟ್ಟಿ

ಉಡುಪಿ: ಭಾರತ್ ಬಂದ್ ವೇಳೆ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಬಿಜೆಪಿ ಗೂಂಡಾಗಳು ಮತ್ತು ಪೊಲೀಸ್ ಅಧಿಕಾರಿಗಳು ನಡೆಸಿದ ದೌರ್ಜನ್ಯ ಖಂಡನೀಯ. ಈ ಘಟನೆಯಿಂದ ಕಾಂಗ್ರೆಸ್ ಪಕ್ಷ ಧೃತಿಗೆಟ್ಟಿಲ್ಲ ಬಿಜೆಪಿಗರ ಗೂಂಡಾಗಿರಿ ಮತ್ತು ಪೊಲೀಸ್ ಅಧಿಕಾರಿಗಳ ದೌರ್ಜನ್ಯ ಎದುರಿಸಲು ಕಾಂಗ್ರೆಸ್ ಸದಾ ಸಿದ್ದವಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗಿದ್ದು ಎಂದೂ ಕೂಡ ಹಿಂಸೆ ಪ್ರಚೋದನೆ ನೀಡುವ ಕೆಲಸ ಮಾಡಿದ ಉದಾಹರಣೆಗಳಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆ ವಿರುದ್ದ ಭಾರತ್ ಬಂದ್ ಕರೆ ನೀಡಿದ್ದು ಅದರ ಪ್ರಯುಕ್ತ ಜಿಲ್ಲೆಯಲ್ಲಿ ಕೂಡ ನಾಗರಿಕರಿಂದ ಉತ್ತಮವಾದ ಬೆಂಬಲ ವ್ಯಕ್ತವಾಗಿತ್ತು. ಉಡುಪಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಂದ್ ಗೆ ಬೆಂಬಲಿಸುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ ನಾಗರಿಕರು ಸಹಕರಿಸಿ ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ ವೇಳೆ ಬಿಜೆಪಿಗರು ಮಧ್ಯೆ ಬಂದು ಜನರನ್ನು ಕೆರಳಿಸುವ ಕೆಲಸ ಮಾಡಿರುವುದು ಅವರ ಹತಾಶ ಭಾವನೆಯನ್ನು ತೋರಿಸುತ್ತದೆ.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ವೇಳೆ ಬಿಜೆಪಿಗರು ಹಲವು ಬಾರಿ ಬಂದ್ ನಡೆಸಿದ ವೇಳೆ ಯಾವುದೇ ಸಂದರ್ಭದಲ್ಲಿ ಕೂಡ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸದೆ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿತ್ತು. ಆದರೆ ಉದ್ಧೇಶಪೂರ್ವಕವಾಗಿ ಗಲಭೆ ಸೃಷ್ಟಿಸುವ ನಿಟ್ಟಿನಲ್ಲಿ ಬಿಜೆಪಿಗರು ಮಧ್ಯ ಪ್ರವೇಶಿಸಿ ಬಂದ್ ಹಾಳು ಮಾಡುವ ಪ್ರಯತ್ನ ಮಾಡಿದ್ದಲ್ಲದೆ, ಈ ಸಮಯದಲ್ಲಿ ರಕ್ಷಣೆ ನೀಡಬೇಕಾಗಿದ್ದ ಪೋಲಿಸರು ಕೂಡ ಬಿಜೆಪಿ ಪಕ್ಷದ ಏಜೆಂಟರಂತೆ ವರ್ತಿಸಿರುವುದು ಖಂಡನೀಯ.

ಪ್ರತಿಭಟನೆಯ ವೇಳೆ ಶಾಂತಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಉಡುಪಿ ಪೋಲಿಸರು ಸಂಪೂರ್ಣ ವಿಫಲರಾಗಿದ್ದು, ಅವರುಗಳ ದೌರ್ಜನ್ಯವನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ. ಕಾಂಗ್ರೆಸ್ ಪಕ್ಷ ಇಂತಹ ಘಟನೆಯಿಂದ ಧೃತಿಗೆಟ್ಟಿಲ್ಲ ಬದಲಾಗಿ ಮುಂದೆಯೂ ಕೂಡ ಬಿಜೆಪಿಗರ ಗೂಂಡಾಗಿರಿಗೆ ಮತ್ತು ಪೋಲಿಸರ ದೌಜರ್ನಕ್ಕೆ ಸೂಕ್ತ ಉತ್ತರ ನೀಡಲು ಶಕ್ತರಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love