ಮಲ್ಪೆ:  ಮೀನುಗಾರರ ಅಪಹರಣ, ದರೋಡೆ ಪ್ರಕರಣ: 7 ಮಂದಿ ಬಂಧನ

Spread the love

ಮಲ್ಪೆ:  ಮೀನುಗಾರರ ಅಪಹರಣ, ದರೋಡೆ ಪ್ರಕರಣ: 7 ಮಂದಿ ಬಂಧನ

ಮಲ್ಪೆ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಬೋಟನ್ನು ಸಮುದ್ರದ ಮಧ್ಯೆ ಮೀನುಗಾರರ ಸಹಿತ 25 ಮಂದಿಯ ತಂಡ ಅಪಹರಿಸಿ ಲಕ್ಷಾಂತರ ರೂ. ಮೌಲ್ಯದ ಮೀನು ಹಾಗೂ ಡಿಸೇಲ್ ಲೂಟಿ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸರು ಭಟ್ಕಳದ 7 ಮಂದಿ ಆರೋಪಿಗಳನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಮಲ್ಪೆ: ದುಷ್ಕರ್ಮಿಗಳ ತಂಡದಿಂದ ಸಮುದ್ರ ಮಧ್ಯೆ ಮೀನುಗಾರರು ಸಹಿತ ಬೋಟು ಅಪಹರಣ

ಬಂಧಿತ ಆರೋಪಿಗಳನ್ನು ಭಟ್ಕಳದ ಸುಬ್ರಹ್ಮಣ್ಯ ಖಾರ್ವಿ (34), ರಾಘವೇಂದ್ರ ಖಾರ್ವಿ (38), ಹರೀಶ್ ನಾರಾಯಣ ಖಾರ್ವಿ (40), ನಾಗೇಶ್ ನಾರಾಯಣ (42), ಬಂದರು ಸಮೀಪದ ಬೆಳ್ಳಿಯ ಗೋಪಾಲ ಮಾದವ್ (38), ಭಟ್ಕಳದ ಸಂತೋಷ ದೇವಯ್ಯ (43) ಹಾಗೂ ಲಕ್ಷ್ಮಣ್ (50) ಎಂದು ಗುರುತಿಸಲಾಗಿದೆ. ತಮಗೆ ಸೇರಿದ ಪರಿಮಿತಿಯೊಳಗೆ ಮೀನುಗಾರಿಕೆ ನಡೆಸಿ ಮೀನು ಹಿಡಿದಿರುವ ಕಾರಣಕ್ಕೆ ಈ ಕೃತ್ಯ ಎಸಗಿದ್ದಾಗಿ ಬಂಧಿತರು ಪ್ರಾಥಮಿಕ ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ.

ಮಲ್ಪೆಯಲ್ಲಿ ಪ್ರಕರಣ ದಾಖಲಾದ ತಕ್ಷಣ ಭಟ್ಕಳಕ್ಕೆ ತೆರಳಿದ್ದ ಮಲ್ಪೆ ಪೊಲೀಸರು, ಅಪಹರಿಸಲ್ಪಟ್ಟ ಬೋಟು ಮತ್ತು ಮೀನುಗಾರರನ್ನು ಪತ್ತೆ ಹಚ್ಚಿದ್ದು, ಇದೀಗ ಏಳು ಮಂದಿ ಆರೋಪಿಗಳನ್ನು ಬಂಧಿಸಿ ಮಲ್ಪೆಗೆ ಕರೆ ತಂದಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಫೆಬ್ರವರಿ 19ರಂದು ಮಲ್ಪೆಯ ಚೇತನ್ ಸಾಲಿಯಾನ್ ಎಂಬವರ ಕೃಷ್ಣನಂದನ ಎಂಬ ಲೈಲಾಂಡ್ ಬೋಟ್ ನಲ್ಲಿ ಆಳಸಮುದ್ರ ಮೀನುಗಾರಿಕೆ ನಡೆಸಲು ನಾಗರಾಜ್ ಹರಿಕಾಂತ, ನಾಗರಾಜ್ ಎಚ್ ಹರಿಕಾಂತ, ಅರುಣ ಹರಿಕಾಂತ ಅಂಕೋಲ, ಅಶೋಕ ಕುಮಟ, ಕಾರ್ತಿಕ್ ಹರಿಕಾಂತ ಮಂಕಿ, ಚಂದ್ರಕಾಂತ ಹರಿಕಾಂತ ಉಪ್ಪುಂದ, ಮತ್ತು ಸುಬ್ರಹ್ಮಣ್ಯ ಖಾರ್ವಿ ಎಂಬವರು ತೆರಳಿದ್ದರು.

ಫೆ. 27 ರಂದು ಮೀನುಗಾರಿಕೆ ಮುಗಿಸಿ ಲಕ್ಷಾಂತ ರೂ ಮೌಲ್ಯದ ಮೀನು ತುಂಬಿಸಿಕೊಂಡು ಮಲ್ಪೆ ಕಡೆಗೆ ಬರುತ್ತಿರುವಾಗ ಬೋಟ್ ನ ಬಲೆ ಫ್ಯಾನ್ ಗೆ ಬಿದ್ದು ಬೋಟ್ ಬಂದ್ ಆಗಿ ನಿಂತಿದೆ ಎನ್ನಲಾಗಿದೆ. ಈ ವೇಳೆ 25 ಜನ ಮಂದಿ ಆಕ್ರಮಣ ಮಾಡಿ ಬೋಟನ್ನು ತೀರಕ್ಕೆ ಎಳೆದುಕೊಂಡು ಹೋಗಿ ಮೀನುಗಾರರನ್ನು ಅಪಹರಿಸಿ ಬೋಟಿನಲ್ಲಿದ್ದ ಸುಮಾರು 8 ಲಕ್ಷ ರೂ ಮೌಲ್ಯದ ಮೀನು ಮತ್ತು ಬೋಟ್ ಗೆ ತುಂಬಿಸಿದ 5,76,700 ಲೀಟರ್ ಡಿಸೇಲ್ ಕಳ್ಳತನ ಮಾಡಿರುವುದಾಗಿ, ಇಷ್ಟೇ ಅಲ್ಲದೇ ಬೋಟ್ ನಲ್ಲಿದ 7 ಜನ ಒತ್ತೆಯಾಳಾಗಿ ಇರಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿ, ಮೀನುಗಾರರನ್ನು ಅಪರಿಚಿತ ಅಪಹರಣಕಾರರು ಬಂಧನದಲ್ಲಿರಿಸಿ ಅವರಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿತ್ತು.


Spread the love