ಸರಕಾರಿ ತಾಯಿ ಮಕ್ಕಳ ಆಸ್ಪತ್ರೆ ವಿಚಾರದಲ್ಲಿ ಶಾಸಕ ಭಟ್ ಅವರಿಂದ ದ್ವಿಮುಖ ನೀತಿ; ಕಾಂಗ್ರೆಸ್

Spread the love

ಸರಕಾರಿ ತಾಯಿ ಮಕ್ಕಳ ಆಸ್ಪತ್ರೆ ವಿಚಾರದಲ್ಲಿ ಶಾಸಕ ಭಟ್ ಅವರಿಂದ ದ್ವಿಮುಖ ನೀತಿ; ಕಾಂಗ್ರೆಸ್

ಉಡುಪಿ: ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ರವರ ಅವಧಿ ಅಭಿವೃದ್ಧಿ ಶೂನ್ಯ ಹಾಗೂ ಸಾಧನೆ ಶೂನ್ಯ ಎಂದು ನಿರಂತರ ದೂಷಣೆ ಮಾಡುತ್ತಿದ್ದ , ಉಡುಪಿ ನಗರದಲ್ಲಿ ಬಿ.ಆರ್.ಶೆಟ್ಟಿಯವರು ನಿರ್ಮಿಸಿದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ಮಾಣದ ವೇಳೆ ವಿರೋಧ ಮಾಡಿದ್ದ ಶಾಸಕ ರಘಪತಿ ಭಟ್ರವರು ಈಗ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಅವರ ದ್ವಿಮುಖ ನೀತಿಯನ್ನು ತೋರಿಸುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಹೇಳಿದೆ.

ಉಡುಪಿ ನಗರದಲ್ಲಿ ಬಿ.ಆರ್.ಶೆಟ್ಟಿಯವರು ನಿರ್ಮಿಸಿದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಆರೋಗ್ಯ ಮಂತ್ರಿಗಳಾದ ರಮೇಶ್ ಕುಮಾರ್, ಪ್ರಮೋದ್ ಮಧ್ವರಾಜ್ರವರ ಪ್ರಯತ್ನದಿಂದ ಉಡುಪಿ ಜನತೆಗೆ ಉಚಿತವಾದ ಅತ್ಯಾಧುನಿಕ ಆರೋಗ್ಯ ಸೇವೆಯನ್ನು ನೀಡಲು ಸರಕಾರಿ ಜಮೀನಿನಲ್ಲಿ 70 ಹಾಸಿಗೆ ಇದ್ದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು 200 ಬೆಡ್ಗಳ ಸುಸಜ್ಜಿತವಾದ ಆಸ್ಪತ್ರೆಯನ್ನಾಗಿ ಬಿ.ಆರ್. ಶೆಟ್ಟಿಯವರು ನಿರ್ಮಿಸಿಕೊಟ್ಟಿದ್ದಾರೆ. ಸಾರ್ವಜನಿಕರಿಗೆ ಉಚಿತವಾಗಿ ಹೆಚ್ಚಿನ ಸೌಲಭ್ಯ ದೊರಕಬೇಕೆಂಬ ನಿಟ್ಟಿನಲ್ಲಿ ಅಂದು ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ರವರು ಸರಕಾರದ ಒಡಂಬಡಿಕೆಯೊಂದಿಗೆ ಸರಕಾರಿ ಆಸ್ಪತ್ರೆಯನ್ನು ಬಿ. ಆರ್. ಶೆಟ್ಟಿಯವರಿಗೆ ನಿರ್ಮಾಣ ಮಾಡಲು ಕೊಟ್ಟಾಗ ಈ ಒಡಂಬಡಿಕೆ ಪ್ರಕ್ರಿಯೆಯ ವಿರುದ್ಧ ಶಾಸಕ ರಘುಪತಿ ಭಟ್ರವರು ಜನರನ್ನು ಸಂಘಟಿಸಿ ವಿರೋಧಿಸಿದ್ದರು. ಆದರೆ ಇಂದು ಅದೇ ಆಸ್ಪತ್ರೆಯನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಶ್ಲಾಘನೀಯ. ಅಂದು ಸರಕಾರದ ನಡೆಯನ್ನು ವಿರೋಧಿಸಿದರೂ ಶಾಸಕರಾದ ಮೇಲೆ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಆಸ್ಪತ್ರೆಯ ಆಡಳಿತ ವರ್ಗ ಮತ್ತು ವೈದ್ಯರೊಂದಿಗೆ ಸಮಾಲೋಚಿಸಿ ಸೇವಾ ಸೌಲಭ್ಯಗಳನ್ನು ವೀಕ್ಷಿಸಿರುವುದು ಅವರಲ್ಲಿ ಆಗಿರುವ ಒಳ್ಳೆಯ ಬೆಳವಣಿಗೆ.

ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ರವರ ಅವಧಿ ಅಭಿವೃದ್ಧಿ ಶೂನ್ಯ ಹಾಗೂ ಸಾಧನೆ ಶೂನ್ಯ ಎಂದು ನಿರಂತರ ದೂಷಣೆ ಮಾಡುತ್ತಿದ್ದ ಶಾಸಕ ರಘಪತಿ ಭಟ್ರವರು ಇಂಧು ಪ್ರಮೋದ್ ಮಧ್ವರಾಜರ ಹಲವಾರು ಯೋಜನೆಗಳನ್ನು ಪರಿಶೀಲನಾ ನೆಪದಲ್ಲಿ ಸಂದರ್ಶಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನೇ ತನ್ನ ಸಾಧನೆ ಎಂದು ಬಿಂಬಿಸುವ ಪ್ರಯತ್ನ ಮಾಡಲೂಬಹುದು. ಆಸ್ಪತ್ರೆಯಲ್ಲಿ ಬಡ ಜನತೆಗೆ ಉತ್ತಮ ಚಿಕಿತ್ಸೆ ದೊರೆಯಬೇಕು, ಸರಕಾರದ ನಿಯಂತ್ರಣ ಇರಬೇಕು ಎಂದು ಪ್ರತಿಪಾದಿಸುತ್ತಾ ಬಂದಿದ್ದೇನೆ ಎನ್ನುವ ಭಟ್ರವರ ಹೇಳಿಕೆಯೇ ಅವರ ಹಿಂದಿನ ನಡವಳಿಕೆಯನ್ನೇ ಪ್ರಶ್ನಿಸುವಂತಾಗಿದೆ. ಅಂದು ಪ್ರಮೋದ್ ಮಧ್ವರಾಜ್ರವರು ಆಸ್ಪತ್ರೆಯ ನಿರ್ಮಾಣ ಹಾಗೂ ಬಡ ಜನತೆಗೆ ಉಚಿತ ಚಿಕಿತ್ಸೆ ನೀಡುವ ಬಗ್ಗೆ ಸರಕಾರದ ಒಡಂಬಡಿಕೆಯನ್ನು ಜನತೆಯ ಮುಂದೆ ಇಟ್ಟಿದ್ದರೂ ಅಂದು ಭಟ್ರವರ ವಿರೋಧ ಯಾವ ಉದ್ದೇಶದಿಂದ ಎಂಬುದು ಇನ್ನೂ ನಿಗೂಡ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ದಿನೇಶ್ ಪುತ್ರನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ, ಜಿಲ್ಲಾ ವಕ್ತಾರ ಭಾಸ್ಕರ್ ರಾವ್ ಕಿದಿಯೂರು, ಕಾಂಗ್ರೆಸ್ ಮುಖಂಡರಾದ ನಾಗೇಶ್ ಕುಮಾರ್ ಉದ್ಯಾವರ, ಜಿಲ್ಲಾ ಕಾರ್ಯದರ್ಶಿ ಹರೀಶ್ ಕಿಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕರೆ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love