ಉರ್ವ ಠಾಣೆಯ ಎಎಸ್ಸೈ ಕೊಲೆ ಯತ್ನ ಪ್ರಕರಣ: ಆರೋಪಿಗೆ ಕಠಿಣ ಶಿಕ್ಷೆ, ದಂಡ

Spread the love

ಉರ್ವ ಠಾಣೆಯ ಎಎಸ್ಸೈ ಕೊಲೆಯತ್ನ ಪ್ರಕರಣ: ಆರೋಪಿಗೆ ಕಠಿಣ ಶಿಕ್ಷೆ, ದಂಡ

ಮಂಗಳೂರು: ಉರ್ವ ಪೊಲೀಸ್ ಠಾಣೆಯ ಎಸ್ಸೈ ಐತ್ತಪ್ಪಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-1 ತ್ವರಿತಗತಿ ನ್ಯಾಯಾಲಯವು ಆರೋಪಿ ಸುರತ್ಕಲ್ ಕಾನ ನಿವಾಸಿ ಮುಹಮ್ಮದ್ ನಿಯಾಝ್ (29) ಎಂಬಾತನಿಗೆ 7 ವರ್ಷಗಳ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

2017ರ ಎ.5ರಂದು ಮುಂಜಾವ 3:20ರ ವೇಳೆಗೆ ನಗರದ ಲೇಡಿಹಿಲ್ ವೃತ್ತದ ಬಳಿ ತಾನು ಬೈಕಿನಲ್ಲಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ಹಿಂದಿನಿಂದ ಬೈಕಿನಲ್ಲಿ ಇಬ್ಬರ ಪೈಕಿ ಬೈಕ್ ಚಲಾಯಿಸುತ್ತಿದ್ದ ಶಮೀರ್ ಎಂಬಾತ ನೀವು ಯಾವ ಸ್ಟೇಷನ್‌ರವರು ಎಂದು ತುಳುವಿನಲ್ಲಿ ಕೇಳಿದ. ತಾನು ಉರ್ವ ಠಾಣೆಯವ ಎಂದು ತಾನು ಹೇಳಿದಾಗ ಶಮೀರ್ ತನ್ನ ಜತೆಗೆ ಬೈಕಿನಲ್ಲಿದ್ದ ಮುಹಮ್ಮದ್ ನಿಯಾಝ್ ಬಳಿ ಹೊಡೆಯಲು ಸೂಚಿಸಿದ. ಹಾಗೇ ಇಬ್ಬರೂ ಕೂಡ ತನಗೆ ಕಬ್ಬಿಣದ ರಾಡ್‌ನಿಂದ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದು ಗಾಯಗೊಳಿಸಿ ಕೊಲೆಗೆ ಯತ್ನಿಸಿದ್ದರು. ಸಾರ್ವಜನಿಕರು ಬರುತ್ತಿದ್ದುದನ್ನು ಗಮನಿಸಿದ ಆರೋಪಿಗಳು ಬೈಕಿನಲ್ಲಿ ಪರಾರಿಯಾಗಿದ್ದರು ಎಂದು ಉರ್ವ ಠಾಣೆಯ ಎಎಸ್ಸೈ ಐತಪ್ಪ ದೂರು ನೀಡಿದ್ದರು.

ಅಂದಿನ ತನಿಖಾಧಿಕಾರಿಯಾಗಿದ್ದ ಸಹಾಯಕ ಪೊಲೀಸ್ ಆಯುಕ್ತ ಉದಯ ಎಂ. ನಾಯಕ್ ತನಿಖೆ ನಡೆಸಿ ದೋಷಾ ರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-1 ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ವಾದ-ಪ್ರತಿವಾದವನ್ನು ಆಲಿಸಿದ 2ನೇ ಆರೋಪಿ ಮುಹಮ್ಮದ್ ನಿಯಾಝ್‌ಗೆ ನ್ಯಾಯಾಧೀಶ ಮೋಹನ ಜೆ.ಎಸ್. ಸೋಮವಾರ ತೀರ್ಪು ನೀಡಿದ್ದಾರೆ.

ಭಾರತೀಯ ದಂಡ ಸಂಹಿತೆಯ ಕಲಂ: 332 ಜತೆ 34 ರ ಪ್ರಕಾರ 2 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 10,000 ರೂ. ದಂಡ, ಕಲಂ: 333 ಜತೆ 34 ಪ್ರಕಾರ 3 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 15,000 ರೂ. ದಂಡ, ಕಲಂ: 307ರ ಜತೆ 34ರ ಪ್ರಕಾರ 7 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿದೆ. ದಂಡದ ಒಟ್ಟು ಹಣ 50,000 ರೂ.ನಲ್ಲಿ 45,000 ರೂ.ವನ್ನು ಗಾಯಾಳು ಎಎಸ್ಸೈಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಈ ಪ್ರಕರಣದ 1ನೇ ಆರೋಪಿ ಶಮೀರ್ ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಪ್ರಕರಣದ ವಿಚಾರಣೆ ಬಾಕಿ ಇದೆ. ಸರಕಾರಿ ಅಭಿಯೋಜಕರಾದ ಹರಿಶ್ಚಂದ್ರ ಉದ್ಯಾವರ್ ಮತ್ತು ಕೆ.ಬದರಿನಾಥ ನಾಯರಿ ವಾದಿಸಿದ್ದರು.


Spread the love
Subscribe
Notify of

0 Comments
Inline Feedbacks
View all comments