ಜಿಲ್ಲೆಯ ಚಲನಚಿತ್ರ ಮಂದಿರಗಳಲ್ಲಿ ತುಳು ಚಲನಚಿತ್ರಗಳಿಗೆ ಪ್ರಥಮ ಆದ್ಯತೆ ನೀಡುವಂತೆ ಒತ್ತಾಯಿಸಿ ತುರವೆ ಒತ್ತಾಯ

Spread the love

ಜಿಲ್ಲೆಯ ಚಲನಚಿತ್ರ ಮಂದಿರಗಳಲ್ಲಿ ತುಳು ಚಲನಚಿತ್ರಗಳಿಗೆ ಪ್ರಥಮ ಆದ್ಯತೆ ನೀಡುವಂತೆ ಒತ್ತಾಯಿಸಿ ತುರವೆ ಒತ್ತಾಯ

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಚಲನಚಿತ್ರ ಮಂದಿರಗಳಲ್ಲಿ “ಮದಿಪು” ಚಿತ್ರ ಸೇರಿದಂತೆ ತುಳು ಚಲನಚಿತ್ರಗಳಿಗೆ ಪ್ರಥಮ ಆದ್ಯತೆ ನೀಡುವಂತೆ ಒತ್ತಾಯಿಸಿ ತುಳನಾಡ ರಕ್ಷಣಾ ವೇದಿಕೆಯ ಸ್ಥಾಪಾಕಾಧ್ಯಕ್ಷ ಯೋಗೀಶ್ ಶೆಟ್ಟಿ  ಜಪ್ಪುರವರ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯಿತು

ಈ ವೇಳೆ ಮಾತನಾಡಿದ ತುಳನಾಡ ರಕ್ಷಣಾ ವೇದಿಕೆಯ ಸ್ಥಾಪಾಕಾಧ್ಯಕ್ಷ ಯೋಗೀಶ್ ಶೆಟ್ಟಿ  ತುಳು ಸಿನಿಮಾ ರಂಗ ವಿಶ್ವಕ್ಕೆ ಆಶ್ಚರ್ಯವಾಗುವ ರೀತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಚಿತ್ರಗಳನ್ನು ನಿರ್ಮಿಸಿ ಜನಪ್ರಿಯತೆ ಗಳಿಸಿಕೊಂಡಿದೆ. ವಿಭಿನ್ನ ಕಥಾಹಂದರ, ಹಾಸ್ಯ ಹಾಗೂ ಉತ್ತಮ ನಿರ್ದೇಶನದಿಂದಾಗಿ ಅನ್ಯ ಪ್ರಾದೇಶಿಕ ಚಿತ್ರಗಳಿಗೆ ತುಳು ಸಿನಿಮಾಗಳು ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದೆ. ಆದರೆ ಬೇಸರದ ವಿಷಯವೇನೆಂದರೆ ತುಳು ಚಿತ್ರರಂಗದ ಪ್ರಮುಖ ಮಾರುಕಟ್ಟೆಯಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ತುಳು ಸಿನಿಮಾ ಪ್ರದರ್ಶನಕ್ಕೆ ಇಲ್ಲಿನ ಚಿತ್ರಮಂದಿರದ ಮಾಲಕರು ಮಲತಾಯಿ ಧೋರಣೆ ತೋರಿಸುತ್ತಿರುವುದು, ಇತರ ಭಾಷಾ ಚಿತ್ರಗಳಿಗೆ ಮೊದಲ ಆದ್ಯತೆ ನೀಡಿ ತುಳು ಸಿನಿಮಾವನ್ನು ಕಡೆಗಳಿಸುತ್ತಿರುವುದು ಆತಂಕದ ಬೆಳವಣಿಗೆ. ಪರಭಾಷಾ ಚಿತ್ರಗಳನ್ನು ಪ್ರದರ್ಶಿಸುವ ಇವರು ತುಳುನಾಡಿನ ಜನರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಾರೆ.  ಚಿತ್ರಮಂದಿರದ ಮಾಲಕರು ಪರಭಾಷ ಚಿತ್ರಗಳಿಗೆ ಕಡಿಮೆ ಬಾಡಿಗೆ ತೆಗೆದುಕೊಂಡು ತುಳು ಸಿನಿಮಾಗಳಿಗೆ ಹೆಚ್ಚಿನ ಬಾಡಿಗೆಗೆ ಬೇಡಿಕೆ ಇಡುತ್ತಾರ . ತುಳು ಸಿನಿಮಾ ಮಾರುಕಟ್ಟೆ ಈಗಷ್ಟೆ ಬೆಳೆಯುತ್ತಿದೆ. ಆದುದರಿಂದ ತುಳು ಸಿನಿಮಾದ ನಿರ್ಮಾಪಕರಿಗೆ ಚಿತ್ರಮಂದಿರದ ಮಾಲಕರೇ ಹೆಚ್ಚುವರಿ ಬಾಡಿಗೆ ವಸೂಲಿ ಮಾಡುವ ಮೂಲಕ ಅನ್ಯಾಯ ಎಸಗುತ್ತಿದ್ದಾರೆ. ಮೊನ್ನೆಯಷ್ಟೇ ಬಿಡುಗಡೆಯಾದ ತುಳು ಸಿನಿಮಾ “ಮದಿಪು” ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾದ ಚಿತ್ರ. ತುಳುನಾಡಿನ ಕಲೆ, ಸಂಸ್ಕøತಿ, ಧಾರ್ಮಿಕ ವಿಧಿವಿಧಾನಗಳ ಹಿನ್ನೆಲೆ ಇಟ್ಟುಕೊಂಡು ಹಿಂದು  ಮುಸ್ಲಿಂ ಭಾವೈಕ್ಯ ಸಾರುವ ಚಿತ್ರ, ಆದರೆ ಈ ಸಿನಿಮಾಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕೆಲ ಚಿತ್ರಮಂದಿರದ  ಮಾಲಕರು ಪ್ರದರ್ಶನಕ್ಕೆ ಅವಕಾಶ ನೀಡದೆ ತುಳುನಾಡಿಗೆ ದ್ರೋಹ ಬಗೆಯುತ್ತಿದ್ದಾರೆ.

ತಾಲೂಕು ಕೇಂದ್ರಗಳಲ್ಲಿ ಮಿನಿ ಚಿತ್ರಮಂದಿರಗಳನ್ನು ಸರ್ಕಾರದ ವತಿಯಿಂದ ಸ್ಥಾಪಿಸಿ ತುಳು ಸಿನಿಮಾಕ್ಕೆ ಉತ್ತೇಜನ ನೀಡಬೇಕೆಂದರು ಹಾಗೂ ಬಹು ದಿನಗಳ ಬೇಡಿಕೆಯಾದ ತುಳು ಚಲನಚಿತ್ರ ವಾಣಿಜ್ಯ ಮಂಡಳಿ ಶೀಘ್ರವಾಗಿ ರಚಿಸಬೇಕಾಗಿದೆ ಎಂದು ತಿಳಿಸಿದರು. ನಮ್ಮ ಒತ್ತಾಯವನ್ನು ಕಡೆಗಣಿಸಿದಲ್ಲಿ ತುಳುನಾಡಿನ ಜನರು ಬೀದಿಗಿಳಿದು ಪ್ರತಿಭಟಿಸುವ ದಿನ ದೂರ ಇಲ್ಲ. ಮುಂದೆ ಆಗುವ ಅನಾಹುತಗಳಿಗೆ ಚಿತ್ರಮಂದಿರದ ಮಾಲಕರು ಮತ್ತು ಸರಕಾರ ನೇರ ಹೊಣೆಗಾರರಾಗುತ್ತಾರೆ. ಎಂದು ಎಚ್ಚರಿಸಿದರು.

ಈ ಪ್ರತಿಭಟನೆ ಸಭೆಯಲ್ಲಿ ಕೇಂದ್ರೀಯ ತುರಾವೆ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಮತ್ತು  ಹರಿಕ್ರಷ್ಣ ಪುನರೂರು, ಅಬ್ದುಲ್ ರಶೀದ್ ಜೆಪ್ಪು, ಜೆ. ಇಬ್ರಾಹಿಂ, ಸಿರಾಜ್ ಅಡ್ಕರೆ, ಇಸ್ಮಾಯಿಲ್ ಶಾಫಿ, ಆನಂದ ಅಮೀನ್ ಅಡ್ಯಾರ್, ಹರೀಶ್ ಶೆಟ್ಟಿ ಶಕ್ತಿನಗರ, ತಾರನಾಥ ಜತ್ತನ್ನ, ನೇಮು ಕೊಟ್ಟಾರಿ,  , ರಾಮ ಎಸ್. ಬಂಗೇರ, ಸುಜಾತ, ಶ್ರೀಕಾಂತ್ ಸಾಲಿಯಾನ್,  ಚಿತ್ರ ನಿರ್ಮಾಪಕ  ಸಂದಿಪ್ ಕಾರ್ಕಳ, ಚಿತ್ರನಟರಾದ ರಾಜೇಶ್ ಸ್ಕ್ರೈಲೋಕ್, ಅಜಯ್ ಆರ್ಯನ್, ಮತ್ತಿತರ ಚಿತ್ರನಟರು, ಕಾರ್ಮಿಕ ಘಟಕ ಮುಖಂಡರು, ಮಹಿಳಾ ಘಟಕ ಮುಖಂಡರುಗಳು ಮತ್ತು ತುಳುನಾಡು ರಕ್ಷಣಾ ವೇದಿಕೆ  ಕಾರ್ಯಕರ್ತರು  ಉಪಸ್ಥಿತರಿದ್ದರು,


Spread the love