ಬೆಳ್ತಂಗಡಿ: ಜಮೀನು ಖರೀದಿ ಹೆಸರಿನಲ್ಲಿ ₹1.06 ಕೋಟಿ ವಂಚನೆ: ಪ್ರಕರಣ ದಾಖಲು
ಬೆಳ್ತಂಗಡಿ: ಜಮೀನು ಖರೀದಿ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಂದ ₹1,00,61,250 ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡು, ಕರಾರಿನಲ್ಲಿ ತಿಳಿಸಿರುವಷ್ಟು ಜಮೀನನ್ನು ಅವರ ಹೆಸರಿಗೆ ನೋಂದಾಯಿಸದೆ ವಂಚಿಸಿರುವ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಕೊಟ್ಟಾರ ಚೌಕಿ ನಿವಾಸಿ ಶಶಿಧರ ಅಚ್ಯುತ ತೋಟಂತಿಲ (61) ಅವರು ನೀಡಿದ ದೂರಿನಂತೆ, ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ಎಂಬಲ್ಲಿರುವ ರಂಜನ್ ರಾವ್ ಎರ್ಡೂರು ಅವರ ಮಾಲಕತ್ವದ ಜಮೀನಿನ ಖರೀದಿಗೆ ಸಂಬಂಧಿಸಿದಂತೆ ಪ್ರಕರಣದ ಮತ್ತೋರ್ವ ಆರೋಪಿ ಸೋಮನಾಥ ನಾಯಕ್ ಅವರ ಮುಂದಾಳತ್ವದಲ್ಲಿ 2025ರ ಅಕ್ಟೋಬರ್ 4ರಂದು ₹90 ಲಕ್ಷಕ್ಕೆ ಕರಾರು ಮಾಡಲಾಗಿತ್ತು.
ಜಮೀನು ಖರೀದಿ ಮೊತ್ತವೆಂದು ಆರೋಪಿಗಳು ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹1,00,61,250 ಹಣವನ್ನು ಪಿರ್ಯಾದಿದಾರರಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಆದರೆ, ಕರಾರಿನಲ್ಲಿ ತಿಳಿಸಿರುವಷ್ಟು ಜಮೀನನ್ನು ಪಿರ್ಯಾದಿದಾರರ ಹೆಸರಿಗೆ ನೋಂದಾಯಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 91/2026, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4) ಜೊತೆಗೆ 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.













