ಆಳ್ವಾಸ್‍ನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

Spread the love

ಆಳ್ವಾಸ್‍ನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

ಕಾರ್ಯಕ್ರಮಕ್ಕೆ ಸಾಕ್ಷಿಯಾದ 35,000 ಪ್ರೇಕ್ಷಕರು| ರಾಷ್ಟ್ರೀಯ ಭಾವೈಕ್ಯತೆಗೆ ಸಾಕ್ಷಿಯಾದವು ಸಂಭ್ರಮದ ಕ್ಷಣಗಳು

ಮೂಡುಬಿದಿರೆ: ವೈವಿಧ್ಯಮಯ ಹೂಗಳಿಂದ ಅಲಂಕೃತಗೊಂಡ ವಿಶಾಲ ಬಯಲು ರಂಗಮಂದಿರ. ಎಲ್ಲರ ಕೈಯಲ್ಲೂ ಮಿಂಚುತ್ತಿದ್ದ ತ್ರಿವರ್ಣ ಧ್ವಜಗಳು. ಸಾವಿರ ಕಂಠಗಳಿಂದ ಹೊರಹೊಮ್ಮುತ್ತಿದ್ದ ದೇಶಭಕ್ತಿಯ ಗೀತೆ. ಈ ಸಂಭ್ರಮವನ್ನು ಕಣ್ತುಂಬಿಸಿಕೊಳ್ಳುತ್ತಿದ್ದ ಸಾವಿರಾರು ಸಾರ್ವಜನಿಕರು….. ಇದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ವೈಭವದ ನೋಟ.

image001alvas-i-day-20160815-001 image002alvas-i-day-20160815-002 image003alvas-i-day-20160815-003 image004alvas-i-day-20160815-004 image005alvas-i-day-20160815-005 image006alvas-i-day-20160815-006

ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂಟಪದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಅತ್ಯಂತ ವಿಶಿಷ್ಟವಾಗಿ ನಡೆದ ಆಚರಣೆಗೆ 35,000 ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಾಕ್ಷಿಯಾದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರಿನ ಧರ್ಮಾಧ್ಯಕ್ಷ ಅಲೋಶಿಯಸ್ ಪೌಲ್ ಡಿ’ ಸೋಜ ಧ್ವಜಾರೋಹಣವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಸಂದೇಶ ನೀಡಿದ ಅವರು, ಯುವಶಕ್ತಿಯನ್ನು ಕಟ್ಟಿ ಬೆಳೆಸುವುದೆಂದರೆ ಅದು ದೇಶವನ್ನು ಕಟ್ಟಿದಂತೆ. ಅಗಾಧವಾದ ಶಕ್ತಿಯನ್ನು ಹೊಂದಿರುವ ಬೃಹತ್ ಯುವಸಮುದಾಯ ಇಲ್ಲಿದೆ. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಅಮೋಘವಾದುದನ್ನು ಸಾಧಿಸಬಹುದು. ದೇಶಕ್ಕೆ ನಮಮ್ಮಿಂದ ಏನಾಗಬೇಕಿದೆ ಎಂಬುದನ್ನು ಅರಿತುಕೊಂಡು ಅದನ್ನು ಪೂರೈಸಲು ಪ್ರಯತ್ನಿಸಬೇಕಾದುದು ಯುವಜನತೆಯ ಜವಾಬ್ದಾರಿ ಎಂದರು.

ಸ್ವಚ್ಛಬಾರತ, ಜಲಸಂರಕ್ಷಣೆ, ರಕ್ತದಾನ, ಭ್ರಷ್ಟಾಚಾರ ನಿರ್ಮೂಲನೆ ದೇಶದ ಅತೀ ಪ್ರಮುಖ ಅವಶ್ಯಕತೆಗಳೆಂದ ಎಂದ ಅವರು ಯುವಜನತೆ ಭವ್ಯ ಭಾರತಕ್ಕಾಗಿ ಬಡತನ ನಿರ್ಮೂಲನೆ, ಸಾಕ್ಷರತೆಯ ಬಗ್ಗೆ ಅದ್ಭುತ ಕನಸುಗಳನ್ನು ಕಟ್ಟಿಕೊಳ್ಳಬೇಕೆಂದು ಅಭಿಪ್ರಾಯ ಪಟ್ಟರು. ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿಗಳಾದ  ವಿವೇಕ್ ಆಳ್ವ, ವಿನಯ್ ಆಳ್ವ ಜಯಶ್ರೀ ಅಮರನಾಥ ಶೆಟ್ಟಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಕಾರ್ಯಕ್ರಮದಲ್ಲಿದ್ದರು.

ಸನ್ಮಾನ ಸಮಾರಂಭ

ಈ ಬಾರಿಯ ಆಳ್ವಾಸ್ ಸ್ವಾತಂತ್ರ್ಯೋತ್ಸವದ ಪ್ರಮುಖ ಆಕರ್ಷಣೆಯೆಂದರೆ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ. 2016ರ ಸಿಇಟಿ ಪರೀಕ್ಷೆಯ ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಗಳಿಸಿದ ಅನಂತ್ ಜಿ., ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ ದಕ್ಷಾ ಜೈನ್ ಹಾಗೂ ಆಶಿಕ್ ನಾರಾಯಣ್ ಮತ್ತು 2015 ನೇ ಸಾಲಿನ ಯುಪಿಎಸ್‍ಸಿ ಪರೀಕ್ಷೆಯಲ್ಲಿ 387ನೇ ರ್ಯಾಂಕ್ ಗಳಿಸಿದ ಆಳ್ವಾಸ್ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಮಿಶಲ್ ಕ್ಯೀನಿ ಡಿ’ ಕಾಸ್ಟ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಸ್ಮರಣಿಕೆಯೊಂದಿಗೆ ಶಾಲನ್ನು ಹೊದಿಸಿ ಸನ್ಮಾನ ಮಾಡಲಾಯಿತು. ಅನಂತ್ ಜಿ. ಗೆ 5ಲಕ್ಷ ರೂ.  ದಕ್ಷಾ ಜೈನ್ ಹಾಗೂ ಆಶಿಕ್ ನಾರಾಯಣ್‍ಗೆ 1 ಲಕ್ಷ ರೂ. ಹಾಗೂ ಮಿಶಲ್ ಡಿ’ಕಾಸ್ಟ ಅವರಿಗೆ 25,000ರೂ. ಗಳ ಗೌರವಧನವನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು.

ಸಾರ್ವಜನಿಕರ ಮನಸೂರೆಗೊಂಡ ಆಕರ್ಷಣೆಗಳು

ಬಯಲು ರಂಗಮಂದಿರವನ್ನು ವೈವಿಧ್ಯಮಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ತ್ರಿವರ್ಣ ಬಣ್ಣಗಳ ಟಿ-ಶರ್ಟ್ ಧರಿಸಿದ ವಿದ್ಯಾರ್ಥಿಗಳ ಸಾಲು ವೇದಿಕೆ ಹಾಗೂ ಬಯಲು ರಂಗಮಂದಿರಕ್ಕೆ ತ್ರಿವರ್ಣದ ಚೌಕಟ್ಟನ್ನು ಹಾಕಿದಂತಿತ್ತು. ವೇದಿಕೆಯ ಹಿಂಭಾಗದಲ್ಲಿ ನಿಂತಿದ್ದ ವಿದ್ಯಾರ್ಥಿಗಳು ಹಿಡಿದಿದ್ದ ತ್ರಿವರ್ಣಗಳ ಕೊಡೆಗಳು ಬಯಲು ರಂಗ ಮಂದಿರದ ಮೆರುಗನ್ನು ಹೆಚ್ಚಿಸಿದ್ದವು. ‘ಕೋಟಿ ಕಂಠೋ ಸೆ…..’ ಎಂಬ ಭಾವೈಕ್ಯತಾ ಗೀತೆಗೆ ವಿದ್ಯಾರ್ಥಿಗಳೆಲ್ಲರೂ ರಾಷ್ಟ್ರಧ್ವಜವನ್ನು ಹಾರಾಡಿಸಿದ್ದು ತ್ರಿವರ್ಣದ ಅಲೆಗಳು ಸಾಗಿ ಬಂದತಿಂತ್ತು. ಇದರ ಜೊತೆಗೆ ಆಕಾಶಕ್ಕೆ ತೇಲಿ ಬಿಟ್ಟ ತ್ರಿವರ್ಣ ಬೆಲೂನ್‍ಗಳು ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿದ್ದವು. ವೇದಿಕೆಯ ಮುಂಬಾಗದಲ್ಲಿ ನಿಂತಿದ್ದ ಆರ್ಮಿ, ನೇವಿ ಹಾಗೂ ಏರ್‍ಫೋರ್ಸ್‍ನ ಎನ್‍ಸಿಸಿ ಕೆಡೆಟ್‍ಗಳು ಕಾರ್ಯಕ್ರಮಕ್ಕೆ ಶಿಸ್ತಿನ ಸ್ಪರ್ಶ ನೀಡಿದ್ದರು. ಕಾರ್ಯಕ್ರಮ ವೀಕ್ಷಿಸಲೆಂದೇ ಬಂದಿದ್ದ  ವಿದ್ಯಾರ್ಥಿಗಳು, ಪಾಲಕರು, ಮೂಡುಬಿದಿರೆಯ ಸಾರ್ವಜನಿಕರು ಹಾಗೂ ಆಸಕ್ತರು ಸೇರಿದಂತೆ 35,000 ಪ್ರೇಕ್ಷಕರು ಈ ವೈಭವಯುತ ಆಚರಣೆಯ ಪ್ರೇಕ್ಷಕರಾದರು.

ಸಾಂಸ್ಕøತಿಕ ಸ್ಪರ್ಶ

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದಕ್ಷಿಣ ಕನ್ನಡದ ಖ್ಯಾತ ನೃತ್ಯ ಪ್ರಕಾರ ಹುಲಿವೇಷ, ಉತ್ತರ ಕರ್ನಾಟಕ ಭಾಗದ ಮಲ್ಲಕಂಬ ಹಾಗೂ ರೋಪ್ ಎಕ್ಸರ್ಸೈಜ್óಗಳು ಕಾರ್ಯಕ್ರಮಕ್ಕೆ ಒಂದು ವಿಭಿನ್ನ ಸಾಂಸ್ಕøತಿಕ ಸ್ಪರ್ಶ ನೀಡಿದ್ದವು. ಎಲ್ಲಾ ಕಲಾವಿದರು ಕೇಸರಿ, ಬಿಳಿ, ಹಸಿರಿರುವ ವರ್ಣಾಲಂಕಾರ ಮಾಡಿದ್ದು ಹಾಗೂ ತ್ರಿವರ್ಣಗಳಿರುವ ಬಟ್ಟೆ ಧರಿಸಿದ್ದು ವಿಶೇಷವಾಗಿತ್ತು. ಇವುಗಳಿಗೆ ಹೊನ್ನಾವರದ ಬ್ಯಾಂಡ್ ಮೇಳ ಸಾಥ್ ನೀಡಿತ್ತು.

ಶ್ರೀಗೌರಿ ಎಸ್ ಜೋಶಿ


Spread the love