ಎ. 27: ಪೇಜಾವರ ಶ್ರೀಗಳ ಕುರಿತ ಕಾಫೀ ಟೇಬಲ್ ಬುಕ್ ‘ಎ ಡೇ ವಿತ್ ದ ಸೈಂಟ್ ದೆನ್ ಆ್ಯಂಡ್ ನೌ’ ಲೋಕಾರ್ಪಣೆ

Spread the love

ಎ. 27: ಪೇಜಾವರ ಶ್ರೀಗಳ ಕುರಿತ ಕಾಫೀ ಟೇಬಲ್ ಬುಕ್ ‘ಎ ಡೇ ವಿತ್ ದ ಸೈಂಟ್ ದೆನ್ ಆ್ಯಂಡ್ ನೌ’ ಲೋಕಾರ್ಪಣೆ

ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ನಾಲ್ಕನೇ ಮತ್ತು ಐದನೇ ಪರ್ಯಾಯದ ಒಂದು ದಿನದ ಚಟುವಟಿಕೆಗಳ ಕುರಿತಾಗಿ ಉದಯವಾಣಿ ಪತ್ರಿಕೆಯ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರು ವಿಶೇಷವಾಗಿ ನಿರ್ಮಿಸಿದ ವಿಶೇಷ ಚಿತ್ರಗಳ ಆಧಾರಿತ ಚಿತ್ರಸಂಪುಟ `ಎ ಡೇ ವಿತ್ ದ ಸೈಂಟ್ ದೆನ್ ಆ್ಯಂಡ್ ನೌ’ ಅಪರೂಪದ ಕಾಫಿ ಟೇಬಲ್ ಬುಕ್ ಸಿದ್ಧಗೊಂಡಿದ್ದು ಅದು ಏ. 27ರಂದು ಶ್ರೀಕೃಷ್ಣ ಮಠ ರಾಜಾಂಗಣದಲ್ಲಿ ಅನಾವರಣಗೊಳ್ಳಲಿದೆ ಎಂದು ಭೂತರಾಜ ಪ್ರಕಾಶನ ಪ್ರಕಾಶಕರಾದ ಪ್ರವೀಣಾ ಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿತ್ರ ಸಂಪುಟ 108 ಪುಟಗಳನ್ನು ಹೊಂದಿದೆ. ನಾಲ್ಕು ಅಧ್ಯಾಯಗಳಿವೆ. 118 ಅಪರೂಪದ ಚಿತ್ರಗಳನ್ನು ಇಲ್ಲಿ ಮುದ್ರಿಸಲಾಗಿದೆ. ಓರ್ವ ಸಂತನ ಚಟುವಟಿಕೆಗಳನ್ನು ಹದಿನಾರು ವರ್ಷಗಳ ಅಂತರದಲ್ಲಿ ಕಲಾತ್ಮಕವಾಗಿ ಸೆರೆಹಿಡಿದು ಹೊರತರುತ್ತಿರುವ ಈ ಚಿತ್ರ ಸಂಪುಟ, ಚಿತ್ರ ಸಂಪುಟಗಳ ಸಾಲಿಗೆ ವಿಶೇಷ ಕೊಡುಗೆ ನೀಡಲಿದೆ. ಸಂಗ್ರಹಕಾರರಿಗೆ ಇದು ಅತ್ಯಂತ ಯೋಗ್ಯ ಚಿತ್ರಕೃತಿಯಾಗಲಿದೆ. ಯತಿಗಳ ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕøತಿಕ ಹಾಗೂ ಸಾಮಾಜಿಕ ಮುಖಗಳ ಕುರಿತಾಗಿ ಆಳವಾಗಿ ಅರ್ಥೈಸುವಂತೆ ಚಿತ್ರಗಳನ್ನು ನಿರ್ಮಿಸಲಾಗಿದೆ. ಮೂಡಿಗೆರೆ ಸಮೀಪದ ಮುಂಡಗಾರು ನಕ್ಸಲ್ ಪೀಡಿತ ಗ್ರಾಮಕ್ಕೆ ಪೇಜಾವರ ಮಠದಿಂದ ವ್ಯವಸ್ಥೆಗೊಳಿಸಲಾದ ವಿದ್ಯುತ್ ಸೇವೆ ಹಾಗೂ ಅಂದು ನಡೆದ ಪೇಜಾವರ ಶ್ರೀಗಳ ಚಟುವಟಿಕೆಗಳನ್ನು ಇಲ್ಲಿ ವಿಶೇಷ ಚಿತ್ರಗಳ ಮೂಲಕ ಪ್ರಸ್ತುತಪಡಿಸಲಾಗಿದೆ. ಪೇಜಾವರ ಶ್ರೀಗಳು ಆಶ್ರಮ ಸ್ವೀಕರಿಸಿ 80 ವರ್ಷಗಳಾದ ಸದವಸರದಲ್ಲಿ ಜರಗಿದ ಕಾರ್ಯಕ್ರಮಗಳ ಚಿತ್ರಗಳು ಹಾಗೂ ಪೇಜಾವರ ಶ್ರೀಗಳ ಅತಿ ವಿಭಿನ್ನ ಚಿತ್ರಗಳನ್ನು ಈ ಪುಸ್ತಕದಲ್ಲಿ ಅನಾವರಣಗೊಳಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.

ಚಿತ್ರ ಸಂಪುಟದಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯನ್ನು ಬಳಸಿಕೊಳ್ಳಲಾಗಿದೆ. ಸೂಕ್ತ ಹಾಗೂ ಪುಟ್ಟ ಪುಟ್ಟ ಮಾಹಿತಿಗಳನ್ನೂ ನೀಡಲಾಗಿದೆ. ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ| ಸಂಧ್ಯಾ ಎಸ್. ಪೈ ಮುನ್ನುಡಿ ಬರೆದಿದ್ದಾರೆ. ಕರ್ನಾಟಕ ರಾಜ್ಯಪಾಲ ವಜುಬಾಯಿ ವಾಲಾ, ನಾಗಲ್ಯಾಂಡ್ ರಾಜ್ಯಪಾಲ ಪಿ. ಬಿ. ಆಚಾರ್ಯ, ಸಂಸದ ಲಾಲ್ಕೃಷ್ಣ ಆಡ್ವಾಣಿ, ಕೇಂದ್ರ ಸಚಿವೆ ಸಾಧ್ವಿ ಉಮಾಭಾರತಿ, ಕರ್ನಾಟಕ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ವಿದ್ಯಾವಾಚಸ್ಪತಿ ಡಾ| ಬನ್ನಂಜೆ ಗೋವಿಂದಾಚಾರ್ಯರು ಸಂದೇಶಗಳನ್ನು ನೀಡಿದ್ದಾರೆ ಎಂದು ಪ್ರವೀಣಾ ಅವರು ಮಾಹಿತಿ ನೀಡಿದ್ದಾರೆ.

ಏ. 27ರಂದು ಸಂಜೆ 4 ಗಂಟೆಗೆ ಕರ್ನಾಟಕ ಸಂಸ್ಕತ ವಿ. ವಿ. ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಚಿತ್ರ ಸಂಪುಟ ಅನಾವರಣ ಮಾಡಲಿದ್ದಾರೆ. ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥರು ಹಾಗೂ ಚಿತ್ರಸಂಪುಟದ ಕೇಂದ್ರಬಿಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ. ತರಂಗ ವಾರಪತ್ರಿಕೆ ವ್ಯವಸ್ಥಾಪಕ ಸಂಪಾದಕರಾದ ಡಾ| ಸಂಧ್ಯಾ ಎಸ್. ಪೈ, ಮಣಿಪಾಲ ವಿ. ವಿ. ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಮೂಡುಬಿದಿರೆ ಆಳ್ವಾಸ್ ಎಜ್ಯುಕೇಶನ್ ಟಸ್ಟ್ನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಮಣಿಪಾಲ ಮೀಡಿಯಾ ನೆಟ್ವರ್ಕ್ ಲಿ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೋದ್ ಕುಮಾರ್ ಉಪಸ್ಥಿತರಿರುವರು ಎಂದೂ ಅವರು ತಿಳಿಸಿದ್ದಾರೆ.


Spread the love