ಏ 27: ಆಸ್ಟ್ರೊ ಮೋಹನ್ ಅವರ ಪೇಜಾವರ ಸ್ವಾಮೀಜಿ ಕುರಿತ “ಯತಿಗಳೊಂದಿಗೆ ಒಂದು ದಿನ ” ಚಿತ್ರಗಳ ಸಂಪುಟ ಬಿಡುಗಡೆ

Spread the love

ಏ 27: ಆಸ್ಟ್ರೊ ಮೋಹನ್ ಅವರ ಪೇಜಾವರ ಸ್ವಾಮೀಜಿ ಕುರಿತ “ಯತಿಗಳೊಂದಿಗೆ ಒಂದು ದಿನ ” ಚಿತ್ರಗಳ ಸಂಪುಟ ಬಿಡುಗಡೆ

ಉಡುಪಿ: ಉದಯವಾಣಿ ಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೊ ಮೋಹನ್ ಅವರ ನೇತೃತ್ವದಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಕುರಿತಾಗಿ “ಯತಿಗಳೊಂದಿಗೆ ಒಂದು ದಿನ ” ಶೀರ್ಷಿಕೆಯಲ್ಲಿ 2002 ಮತ್ತು 2018 ಸಂದರ್ಭದಲ್ಲಿ ನಿರ್ಮಾಣಗೊಂಡ ವಿಶಿಷ್ಟ ಚಿತ್ರಗಳ ಸಂಪುಟ “ಎ ಡೇ ವಿತ್ ದಿ ಸೇಂಟ್ ದೆನ್ ಅಂಡ್ ನೌ “ಸಿದ್ಧವಾಗಿದೆ.

ಯತಿಗಳ ನಿತ್ಯ ಜೀವನದ ಕುರಿತಾಗಿ ಅಧ್ಯಯನ ದೃಷ್ಟಿಯಿಂದ ನಿರ್ಮಾಣವಾಗಿರುವ ಈ ಚಿತ್ರ ಸಂಪುಟ ಪ್ರಾಯಶಃ ದೇಶಾಲ್ಲಿಯೇ ಪ್ರಪ್ರಥಮ ಪ್ರಯತ್ನವಾಗಿದೆ. ಎ. 27ರಂದು ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಲೋಕಾರ್ಪಣೆಯಾಗಲಿದೆ.

108 ಪುಟಗಳ ವರ್ಣಮಯ ಸಂಪುಟದಲ್ಲಿ 118 ಚಿತ್ರಗಳನ್ನು ಅಳವಡಿಸಲಾಗಿದೆ. ನಾಲ್ಕು ಅಧ್ಯಾಯಗಳಲ್ಲಿ ಪ್ರಸ್ತುತಪಡಿಸಲಾಗಿದೆ. ತರಂಗ ಪತ್ರಿಕೆಯ ಪುಟ ಕಲಾಕಾರ ಜೇಮ್ಸ್ ವಾಜ್ ಈ ಚಿತ್ರ ಸಂಪುಟದ ಅಂದವನ್ನು ಹೆಚ್ಚಿಸಿದ್ದಾರೆ. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿಯೂ ಟಿಪ್ಪಣಿಗಳನ್ನು ನೀಡಲಾಗಿದೆ. 1 ಅಡಿ ಚೌಕಾಕಾರದ ಈ ಬೃಹತ್ ಗಾತ್ರದ ಕಾಫಿ ಟೇಬಲ್ ಕೇವಲ 1000 ರೂಪಾಯಿಗಳಿಗೆ ಲಭ್ಯವಿದೆ.

ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀ ಪಾದರು , ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಪಾದರು ಆಶೀರ್ವದಿಸಲಿದ್ದಾರೆ. ಕರ್ನಾಟಕ ಕನ್ನಡ ಸಂಸ್ಕೃತ ವಿ. ವಿ. ಯ ವಿಶ್ರಾಂತ ಕುಲಪತಿ ಪ್ರೊ. ಮಲ್ಲೆಪುರಮ್ ಜಿ ವೆಂಕಟೇಶ್ ಚಿತ್ರ ಸಂಪುಟವನ್ನು ಲೋಕಾರ್ಪಣೆ ಮಾಡಲಿದ್ದಾರೆ. ತರಂಗ ವಾರ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ. ಸಂಧ್ಯಾ ಎಸ್ ಪೈ ಅಧ್ಯಕ್ಷತೆ ವಹಿಸಲಿದ್ದಾರೆ. ಮಣಿಪಾಲ ವಿ. ವಿ. ಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ , ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಹಾಗೂ ಮಣಿಪಾಲ ಮೀಡಿಯಾ ನೆಟವರ್ಕ್ ಲಿ. ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನೋದ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಆಸ್ಟ್ರೊ ಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love