ಗೋರಕ್ಷಣೆ ಮಾಡುವವರಿಗೆ ಯಾವುದೇ ವ್ಯಕ್ತಿಯ ಪ್ರಮಾಣಪತ್ರ ಬೇಕಾಗಿಲ್ಲ: ರಾಜೇಶ್ ಪಾಂಡೆ

Spread the love

ಗೋರಕ್ಷಣೆ ಮಾಡುವವರಿಗೆ ಯಾವುದೇ ವ್ಯಕ್ತಿಯ ಪ್ರಮಾಣಪತ್ರ ಬೇಕಾಗಿಲ್ಲ: ರಾಜೇಶ್ ಪಾಂಡೆ

ಮಂಗಳೂರು: ಗೋರಕ್ಷಣೆಗಾಗಿ ಬಜರಂಗದಳ ಹಲವಾರು ವರುಷಗಳಿಂದ ಪ್ರಾಮಾಣಿಕ ಹೋರಾಟ ನಡೆಸುತ್ತಿದ್ದು ಇದಕ್ಕೆ ಯಾವುದೇ ವ್ಯಕ್ತಿಯ ಪ್ರಮಾಣ ಪತ್ರದ ಅಗತ್ಯವಿಲ್ಲ ಎಂದು ಬಜರಂಗದಳ ರಾಷ್ಟ್ರೀಯ ಸಂಯೋಜಕ ರಾಜೇಶ್ ಪಾಂಡೆ ಹೇಳಿದರು.

ಅವರು ನಗರದ ಸಂಘ ನಿಕೇತನದಲ್ಲಿ ಶನಿವಾರ ವಿಶ್ವ ಹಿಂದು ಪರಿಷತ್ ಕರ್ನಾಟಕ ದಕ್ಷಿಣ ವತಿಯಿಂದ ಆಯೋಜಿಸಿರುವ ಬಜರಂಗ ದಳದ ಪ್ರಾಂತ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.
1996 ರಲ್ಲಿ ಪ್ರಯಾಗದಲ್ಲಿ ಗೋರಕ್ಷಣೆಯ ಸಂಕಲ್ಪ ಮಾಡಿದ್ದು ಈ ವರೆಗೆ ಸುಮಾರು 40 ಲಕ್ಷಕ್ಕೂ ಅಧಿಕ ದನಗಳನ್ನು ರಕ್ಷಿಸಿದ್ದು, ನಮ್ಮ ಸಂಘಟನೆಯ ಕಾರ್ಯಕರ್ತರುಗಳು ಪ್ರಾಮಾಣಿಕರಾಗಿದ್ದಾರೆ. ಗೋಹತ್ಯೆ ತಡೆಗಾಗಿ ಯಾವುದೇ ರೀತಿಯ ಬಲಿದಾನಕ್ಕೂ ಸಿದ್ದವಾಗಿದ್ದು, ರಾಷ್ಟ್ರ ರಕ್ಷಣೆಗಾಗಿ ಸೈನಿಕರ ಜತೆಗಿದ್ದು ಹೋರಾಟ ನಡೆಸುತ್ತೇವೆ ಎಂದರು. ನಾವು ಪೂಜಿಸುವ ಗೋವನ್ನು ಕೊಲ್ಲಲು ಬಂದರೆ ಸುಮ್ಮನೆ ಬಿಡಲಾರೆವು. ಅದರ ಪರಿಣಾಮ ದಾದ್ರಿಯಲ್ಲಿ ಕಂಡಿದ್ದೀರಿ. ಈ ಘಟನೆಯಿಂದ ಕೆಲವರ ಹೊಟ್ಟೆಯಲ್ಲಿ ತಳಮಳ ನಡೆದು, ಅಸಹಿಷ್ಣುತೆಯ ಬೊಬ್ಬೆ ಹೊಡೆದರು. ಕಾಶ್ಮೀರದಲ್ಲಿ ಹಿಂದು ಪಂಡಿತರ ಮೇಲೆ ದಬ್ಬಾಳಿಕೆ, ಬಂಗಾಳದಲ್ಲಿ ಹಿಂದುಗಳ ಹತ್ಯೆ ನಡೆದಾಗ ಅಸಹಿಷ್ಣುತೆ ಕಂಡಿಲ್ಲ. ಒಂದು ವೇಳೆ ದಾದ್ರಿ, ಸರ್ಜಿಕಲ್ ದಾಳಿಯಿಂದ ಅಸಹಿಷ್ಣುತೆ ಬಂತೆಂದಾದರೆ ಅದನ್ನು ಸ್ವಾಗತಿಸಲು ಸಿದ್ಧ ಎಂದರು.
ಬಜರಂಗದಳಕ್ಕೆ ತನ್ನದೇ ಆದ ಇತಿಹಾಸವಿದ್ದು, ರಾಮಜನ್ಮಭೂಮಿಯ ವಿಮೋಚನೆಗಾಗಿ ಹನುಮಂತನ ರೂಪದಲ್ಲಿ ಜನ್ಮ ತಾಳಿ ಬಾಬರಿ ಮಸೀದಿಯನ್ನು ಧ್ವಂಸ ಮಾಡುವ ಮೂಲಕ ಹಿಂದುಗಳ ರಕ್ಷಣೆಗಾಗಿ ಪಣತೊಟ್ಟಿದೆ. ನಮ್ಮ ಮುಂದೆ ಹಲವಾರು ಸವಾಲುಗಳಿದ್ದು, ಎಲ್ಲವನ್ನೂ ಮೆಟ್ಟಿ ನಿಲ್ಲುತ್ತಿದ್ದೇವೆ. ಇನ್ನೆಂದೂ ದೇಶದಲ್ಲಿ ಲವ್ ಜಿಹಾದ್ ನಡೆಯಲು ಬಿಡುವುದಿಲ್ಲ ಎಂದು ಹೇಳಿದರು.
ಇಂದು ದೇಶದಲ್ಲಿ ದೇಶಪ್ರೇಮಿ ಮತ್ತು ದೇಶದ್ರೋಹಿ ಎಂಬ ಎರಡು ವಿಚಾರಧಾರೆ ಕೆಲಸ ಮಾಡುತ್ತಿದ್ದು, ಹಿಂದಿನ ಕಾಲದಲ್ಲೂ ಸಂತರ ಅವಮಾನ, ಹತ್ಯೆ, ಮಹಿಳೆಯರ ಅಪಹರಣ, ದೇವಸ್ಥಾನಗಳ ಮೇಲೆ ದಾಳಿ ನಡೆಯುತ್ತಿತ್ತು. ಆಗ ದೇವ ದೇವತೆಗಳು ರಕ್ಷಣೆಗಾಗಿ ಬಂದಿದ್ದರೆ, ಇಂದು ಮಲಗಿದ ಹಿಂದುಗಳನ್ನು ಎಬ್ಬಿಸಿ ಹೋರಾಟಕ್ಕೆ ಸಜ್ಜುಗೊಳಿಸುವ ಕೆಲಸ ಬಜರಂಗದಳ ಮಾಡುತ್ತಿದೆ. ದೇಶದ ಗಡಿಯಲ್ಲಿ ಸೈನ್ಯವಿದ್ದಂತೆ, ಆಂತರಿಕ ಅಸುರೀ ಶಕ್ತಿಗಳ ಸರ್ವನಾಶದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಸಲ್ಮಾನ್, ಅಮೀರ್, ಶಾರುಕ್ ಖಾನ್‌ಗೆ ಭಾರತದಲ್ಲಿ ಅಸಹಿಷ್ಣುತೆ ಕಂಡರೆ ಪಾಕ್, ಬಾಂಗ್ಲಾ ಅಥವಾ ಅಫ್ಘಾನಿಸ್ಥಾನಕ್ಕೆ ಬೇಕಾದರೆ ಹೋಗಲಿ. ಇನ್ನು ಪಾಕಿಸ್ತಾನದ ಒಬ್ಬನೇ ಒಬ್ಬ ಕಲಾವಿದ ಭಾರತಕ್ಕೆ ಬರಕೂಡದು. ಯಾರಾದರೂ ಅವರನ್ನು ಸಮರ್ಥಿಸಿದರೆ ಅವರ ಸಿನಿಮಾಗಳನ್ನೂ ಬಹಿಷ್ಕರಿಸಲಾಗುವುದು ಎಂದು ರಾಜೇಶ್ ಪಾಂಡೆ ಹೇಳಿದರು.

ಗೋಹತ್ಯೆ, ಲವ್ ಜಿಹಾದ್, ಮತಾಂತರ, ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಬಜರಂಗದಳ, ಮತಾಂತರ ಆದವರನ್ನು ಘರ್ ವಾಪಸಿ ಮೂಲಕ ಹಿಂದು ಧರ್ಮಕ್ಕೆ ತರುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಹಲವರು ಭಾರತ ಮಾತೆಯ ರಕ್ಷಣೆಗಾಗಿ ತ್ಯಾಗ, ಬಲಿದಾನಗಳನ್ನು ಮಾಡಿದ್ದಾರೆ. ಹಿಂದುಗಳೆಂದು ಗರ್ವದಿಂದ ಸಾರುವ ನಾವು ಕೂಡಾ ಯಾವುದೇ ಬಲಿದಾನದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಅವರು ಹೇಳಿದರು.

ಬಜರಂಗದಳ ಪ್ರಾಂತ ಸಂಯೋಜಕ್‌ಶರಣ್ ಪಂಪ್‌ವೆಲ್ ಮಾತನಾಡಿ, ರಾಜ್ಯ ಸರಕಾರ ಟಿಪ್ಪು ಜಯಂತಿಗೆ ಅವಕಾಶ ಕೊಟ್ಟರೆ ಸುಮ್ಮನೆ ಕೂರೂವುದಿಲ್ಲ. ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದರು.

ವಿಹಿಂಪ ಕ್ಷೇತ್ರೀಯ ಸಂಯೋಜಕ ಸೂರ್ಯನಾರಾಯಣ, ಪ್ರಾಂತ ಸಹಕಾರ್ಯದರ್ಶಿ ಕೃಷ್ಣಮೂರ್ತಿ, ಮಂಗಳೂರು ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಕುತ್ತಾರ್, ಆರೆಸ್ಸೆಸ್ ಮಂಗಳೂರು ನಗರ ಸಂಘ ಚಾಲಕ ಸುನಿಲ್ ಆಚಾರ್, ಬಜರಂಗ ದಳ ವಿಭಾಗ ಸಹ ಸಂಚಾಲಕ ಸುನಿಲ್ ಕೆ.ಆರ್., ಬೆಂಗಳೂರು ಮಹಾನಗರ ಸಂಚಾಲಕ ಕೇಶವ ನಾಯ್ಕ ಉಪಸ್ಥಿತರಿದ್ದರು.


Spread the love