ಮಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ 2500 ಕೋಟಿ ರೂಪಾಯಿ: ಶಾಸಕ ಜೆ.ಆರ್.ಲೋಬೊ

Spread the love

ಮಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ 2500  ಕೋಟಿ ರೂಪಾಯಿ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಮಂಗಳೂರು ನಗರ ಸಮಗ್ರ ಅಭಿವೃದ್ಧಿಗೆ ಸುಮಾರು 2500 ಕೋಟಿ ರೂಪಾಯಿ ಅನುದಾನ ಮಂಜೂರಾಗುವ ನಿರೀಕ್ಷೆ ಇದೆ ಎಂದು ಶಾಸಕ ಜೆ.ರ್.ಲೋಬೊ ಅವರು ಹೇಳಿದರು.

ಅವರು ಜಪ್ಪಿನಮೊಗರು ರಸ್ತೆ ಕಾಂಕ್ರೀಟಿಕರಣಕ್ಕೆ 1.5 ಕೋಟಿ ರೂಪಾಯಿ ಮಂಜೂರಾಗಿದ್ದು ಅದರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.

ಇದರಲ್ಲಿ ರಾಜಕೀಯ ಇಲ್ಲ. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಗಳೂರು ನಗರವನ್ನು ಮಾದರಿ ನಗರವನ್ನಾಗಿ ಮಾಡುವ ದೃಷ್ಟಿಯಿಂದ ಎಡಿಬಿ ಎರಡನೇ ಹಂತದ ಕಾಮಗಾರಿಗೆ 600  ಕೋಟಿ ರೂಪಾಯಿ ಮಂಜೂರು ಮಾಡಿದ್ದಾರೆ ಎಂದರು.

ನನ್ನ ಕ್ಷೇತ್ರವಲ್ಲದಿದ್ದರೂ ನಾನು ಮುತುವರ್ಜಿ ವಹಿಸಿ ಪಂಜಿಮೊಗರುವಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ಗ್ರಾಮವಾಗಿ ಮಾಡಲು ಸುಮಾರು 1000 ಎಕ್ರೆ ಭೂಮಿಯನ್ನು ಗುರುತಿಸಿದ್ದೇನೆ ಎಂದ ಅವರು ನೇತ್ರಾವತಿ ಸೇತುವೆಯಿಂದ ಕಣ್ಣೂರು ಮಸೀದಿ ವರೆಗೆ ನದಿ ತೀರದಲ್ಲಿ ಚುತುಷ್ಪಥ ರಸ್ತೆಯನ್ನು ನಿರ್ಮಿಸಲು ಉದ್ದೇಶಿಸಿದ್ದು ಬೆಂಗಳೂರಿನಿಂದ ಅಧಿಕಾರಿಗಳ ತಂಡ ಬಂದು ಅಧ್ಯಯನ ನಡೆಸಿದೆ. ಇಲ್ಲಿ ಸುಮಾರು 350 ರಿಂದ 400  ಕೋಟಿ ರೂಪಾಯಿ ಹೂಡಿಕೆ ಆಗಲಿದೆ. ಇದನ್ನು ಖಾಸಗಿ ಮತ್ತು ಸರ್ಕಾರಿ ಒಡೆತನದಲ್ಲಿ ನಿರ್ಮಿಸಲಾಗುವುದು. ಇದು ಮಂಜೂರಾದರೆ ಜಪ್ಪಿನಮೊಗರು ಬೆಳೆಯುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

ಮಂಗಳೂರು ಹಳೆ ಬಂದರು ಮತ್ತು ನವಮಂಗಳೂರು ಬಂದರಿಗೆ ಸಂಪರ್ಕ ಸಾಧಿಸುವ ಯೋಜನೆಯೂ ಇದೆ ಎಂದು ನುಡಿದ ಶಾಸಕ ಜೆ.ಆರ್.ಲೋಬೊ ಅವರು ಜನರ ಸಹಕಾರವಿದ್ದರೆ ಮಾತ್ರ ಇದೆಲ್ಲವನ್ನೂ ಸಾಧಿಸಲು ಸಾಧ್ಯವಿದೆ ಎಂದರು.

ಜಪ್ಪಿನಮೊಗರು ನಗರವನ್ನು ಅಭಿವೃದ್ಧಿ ಪಡಿಸಲು ಮೊದಲ ಕಂತಾಗಿ 1.5 ಕೋಟಿ ರೂಪಾಯಿ ಮಂಜೂರಾಗಿದ್ದು ಜನರು ಆಸಕ್ತಿ ವಹಿಸಿ ಜಾಗ ಬಿಟ್ಟುಕೊಟ್ಟರೆ ಇನ್ನೂ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಿಸಿ ಇದನ್ನು ಮಾದರಿ ನಗರವನ್ನಾಗಿ ಮಾಡುವ ಸಂಕಲ್ಪವಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಕಾರ್ಪೊರೇಟರ್ ಸುರೇಂದ್ರ, ಪ್ರವೀಣಚಂದ್ರ ಆಳ್ವ, ಸದಾನಂದ ಆಳ್ವ, ಮಂಗಳೂರು ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ಡೆನ್ನೀಸ್ ಡಿಸಿಲ್ವಾ, ಅರ್ಬರ್ಟ್ ಡಿಸೋಜಾ,ಅನಿಲ್ ಶೆಟ್ಟಿ, ದಿನೇಶ್ ಅಂಚನ್, ಪ್ರಕಾಶ್ ಶೆಟ್ಟಿ ಮುಂತಾದವರಿದ್ದರು.

ಕಂಕನಾಡಿ ರಸ್ತೆ ರಸ್ತೆ ಅಗಲೀಕರಣಕ್ಕೆ 2 ಕೋಟಿ ರೂಪಾಯಿ : ಶಾಸಕ ಜೆ.ಆರ್.ಲೋಬೊ

ಮಂಗಳೂರು: ಕಂಕನಾಡಿ ರೈಲ್ವೇ ಸ್ಟೇಷನ್ ರಸ್ತೆಯನ್ನು ಅಗಲೀಕರಣಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆ 2 ಕೋಟಿ ರೂಪಾಯಿ ಮಂಜೂರು ಮಾಡಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.

ಅವರು ಕಂಕನಾಡಿ ರೈಲ್ವೇ ಸ್ಟೇಷನ್ ರಸ್ತೆ ಅಗಲೀಕರಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಪಂಪ್ ವೆಲ್ ಪಡೀಲ್ ರಸ್ತೆ ಕಂಕನಾಡಿ ರೈಲ್ವೇ ಸ್ಟೇಷನ್ ಗೆ ಹೋಗುವ ಪ್ರಮುಖ ರಸ್ತೆಯಾಗಿದ್ದು ಇದು ಕಿರಿದಾಗಿದ್ದು ಸಮಸ್ಯೆಯಾಗುತ್ತಿತ್ತು. ಇದನ್ನು ಮನಗಂಡು ತಾವು ಮುತುವರ್ಜಿ ವಹಿಸಿ ಸರ್ಕಾರದ ಜೊತೆ ಮಾತುಕತೆ ನಡೆಸಿ ನೂತನ ರಸ್ತೆಗೆ ಹಣಮಂಜೂರು ಮಾಡಿಸಿದ್ದಾಗಿ ನುಡಿದರು.

ಕಂಕನಾಡಿ ರೈಲ್ವೇ ಸ್ಟೇಶನ್ ರಸ್ತೆಯನ್ನು ಆಧುನೀಕರಣ ಮಾಡಬೇಕೆಂಬುದು ನನ್ನ ಕನಸು ಎಂದ ಅವರು ಈ ರಸ್ತೆಯನ್ನು ಅಗಲೀಕರಣ ಮಾಡಿದರೆ ವಾಹನ ಸಂಚಾರ ಸುಗಮವಾಗಲಿದೆ ಎಂದ ಅವರು ಜನರು ಸಹಕಾರ ನೀಡಬೇಕು. ಜನರ ಸಹಕಾರವಿದ್ದರೆ ಯಾವುದನ್ನೂ ಸಾಧಿಸಬಹುದು ಎಂದರು.

ಇದೇ ಸಂದರ್ಭದಲ್ಲಿ ಶಾಸಕ ಜೆ.ಆರ್.ಲೋಬೊ ಅವರನ್ನು ರಿಕ್ಷಾ ಚಾಲಕರು ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ, ಮಂಗಳೂರು ತಾಲೂಕು ಭೂನ್ಯಾಯ ಮಂಡಳಿ ಸದಸ್ಯರಾದ ಡೆನ್ನೀಸ್ ಡಿಸಿಲ್ವಾ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.


Spread the love