ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್‌ ನಿಧನ

Spread the love

ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್‌ ನಿಧನ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎನ್‌. ಧರ್ಮ ಸಿಂಗ್‌ ಅವರು ಗುರುವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇಲ್ಲಿನ ಎಂ.ಎಸ್‌. ರಾಮಯ್ಯ ಆಸ್ಪತ್ರೆಯಲ್ಲಿ ಬೆಳಿಗ್ಗೆ 11.30ಕ್ಕೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ತುರ್ತು ಚಿಕಿತ್ಸೆಗಾಗಿ ಧರ್ಮ ಸಿಂಗ್‌ ಅವರನ್ನು ಆಸ್ಪತ್ರೆಗೆ ಬೆಳಿಗ್ಗೆ 9ಕ್ಕೆ ಕರೆತರಲಾಗಿತ್ತು. 11.30ಕ್ಕೆ ತೀವ್ರ ಹೃದಯಾಘಾತದಿಂದ ನಿಧನರಾದರು ಎಂದು ಎಂ.ಎಸ್. ರಾಮಯ್ಯ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಧರ್ಮ ಸಿಂಗ್‌ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

* 1936ರ ಡಿಸೆಂಬರ್ 25ರಂದು ಗುಲ್ಬರ್ಗಾ ಜಿಲ್ಲೆ ಜೇವರ್ಗಿ ತಾಲ್ಲೂಕು ನೆಲೋಗಿ ಗ್ರಾಮದಲ್ಲಿ ಜನಿಸಿದ್ದ ಧರ್ಮ ಸಿಂಗ್‌ ಅವರು, ಉಸ್ಮಾನಿಯಾ ವಿವಿಯಿಂದ ಎಂ.ಎ, ಎಲ್.ಎಲ್.ಬಿ. ಪದವಿ ಪಡೆದಿದ್ದರು. 2004ರಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು.

ಧರಂಸಿಂಗ್ ರಾಜಕೀಯ ಹಾದಿ

* 1960ರಲ್ಲಿ ಗುಲ್ಬರ್ಗಾದಲ್ಲಿ ಸಹೋದರನ ವಿರುದ್ಧ ಪಾಲಿಕೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.

* 1960ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಅಲ್ಲಿಂದ ಕಾಂಗ್ರೆಸ್‌ಗೆ ನಿಷ್ಠಗಾಗಿ ದುಡಿರು.

* 1978ರಿಂದ 2008ರವರೆಗೂ ಶಾಸಕರಾಗಿದ್ದರು.

* 2004ರಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು.

* 2006-07ರಲ್ಲಿ ವಿಧಾನಸಭೆ ವಿಪಕ್ಷ ನಾಯಕರಾಗಿದ್ದರು.

* 2009-2014 ವರೆಗೆ ಬೀದರ್‌ನಿಂದ ಸಂಸದರಾಗಿ ಆಯ್ಕೆಯಾಗಿದ್ದರು.

* ದೇವರಾಜ್ ಅರಸ್, ಗುಂಡೂರಾವ್ ,ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಗೃಹ, ಲೋಕೋಪಯೋಗಿ, ಅಬಕಾರಿ, ಸಮಾಜ ಕಲ್ಯಾಣ, ಕಂದಾಯ, ನಗರಾಭಿವೃದ್ದಿ ಖಾತೆಗಳ ನಿರ್ವಾಹಣೆ ಮಾಡಿದ್ದರು.

* 1996ರಿಂದ 1999ರ ವರೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು.

* ಸೀತರಾಮ್ ಕೇಸರಿ ಅವರ ಆಪ್ತರಾಗಿದ್ದರು. ವೀರೇಂದ್ರ ಪಾಟೀಲ್ ಅವರ ಬಳಿಕ ಗುಲ್ಬರ್ಗಾದಿಂದ ಸಿಎಂ ಆದ ರಾಜಕಾರಣಿ.

ಹಾವೇರಿ: ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್ ಅವರು ಅಜಾತಶತ್ರು. ಅವರ ನಿಧನದಿಂದ ರಾಜ್ಯ ಹಾಗೂ ಕಾಂಗ್ರೆಸ್‌ಗೆ ಅಪಾರ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹಾವೇರಿ ತಾಲ್ಲೂಕಿನ ದೇವಿಹೊಸೂರಿನಲ್ಲಿ ಸಿದ್ದರಾಮಯ್ಯ ಅವರು 2 ನಿಮಿಷ ಮೌನಾಚರಣೆ ಮಾಡುವ ಮೂಲಕ ಧರ್ಮ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದರು. ಧರ್ಮ ಸಿಂಗ್ ಅವರು ರಾಜ್ಯ ರಾಜಕಾರಣಕ್ಕೆ ಸುಮಾರು 5 ದಶಕ ಕಾಲ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

ಧರ್ಮಸಿಂಗ್ ಅವರ ನಿಧನದ ಹಿನ್ನಲೆಯಲ್ಲಿ ಹಾವೇರಿಯ ಕಾಗಿನೆಲೆಯಲ್ಲಿ ಆಯೋಜಿಸಿದ್ದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮುಖ್ಯಮಂತ್ರಿಯವರು ಬೆಂಗಳೂರಿಗೆ ವಾಪಸಾಗಿದ್ದಾರೆ.

ಮೂರು ದಿನಗಳ ಶೋಕಾಚರಣೆ: ಧರ್ಮ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಿಸಿದೆ. ನಾಳೆ ಕಲಬುರಗಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಪ್ರಧಾನಿ ಮೋದಿ ಸಂತಾಪ: ಧರ್ಮಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹ ಸಂತಾಪ ಸೂಚಿಸಿದ್ದಾರೆ. ‘ಕರ್ನಾಟಕದ ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್ ಅವರ ನಿಧನದಿಂದ ಬೇಸರವಾಗಿದೆ. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬದವರ ಜತೆ ನಾವಿದ್ದೇವೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.


Spread the love