ಹೆಂಡತಿ ತಲೆ ಕಡಿದು ಪೊಲೀಸ್ ಠಾಣೆಗೆ ತಂದು ಶರಣಾದ ಗಂಡ!

Spread the love

ಹೆಂಡತಿ ತಲೆ ಕಡಿದು ಪೊಲೀಸ್ ಠಾಣೆಗೆ ತಂದು ಶರಣಾದ ಗಂಡ!

ಚಿಕ್ಕಮಗಳೂರು : ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಲೆ ಮಾಡಿ, ಆಕೆಯ ತಲೆಯನ್ನು ಪೊಲೀಸ್ ಠಾಣೆಗೆ ತಂದಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.

ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ, ರುಂಡವನ್ನು ಪೊಲೀಸ್ ಠಾಣೆಗೆ ಕೊಂಡೊಯ್ದ ಆರೋಪಿ ಶಿವನಿ ಆರ್.ಎಸ್.ನ ಸತೀಶನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ಅಜ್ಜಂಪುರ ಹೋಬಳಿಯ ಶಿವನಿ ರೈಲ್ವೆ ಸ್ಟೇಷನ್ ಬಳಿ ನಡೆದಿದೆ. ರೂಪ (30) ಕೊಲೆಯಾದ ಹೆಂಡತಿ. ಪತಿ ಸತೀಶ್ ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಪತ್ನಿಯನ್ನ ಕೊಲೆ ಮಾಡಿ ತಲೆಯನ್ನು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

302 ಕಾಲಂನಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸುವುದಾಗಿ ತಿಳಿಸಿದ್ದಾರೆ.

ಅಜ್ಜಂಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಮೃತರ ತಾಯಿಗೆ ಪೊಲೀಸರು ಹಸ್ತಾಂತರಿಸಿದರು. ಮೃತಳ ಅಂತ್ಯಕ್ರಿಯೆ ತಡಗ ಕಾಲೋನಿಯಲ್ಲಿ ನಡೆಸಲಾಯಿತು.

ಪ್ಲಾಸ್ಟಿಕ್ ಚೀಲದೊಳಗೆ ರುಂಡ ಮತ್ತು ಮಚ್ಚು ಹಿಡಿದು ಪೊಲೀಸ್ ಠಾಣೆಗೆ ಹೋದ ಆರೋಪಿ, ‘ನೋಡಿ ಸಾರ್, ಇವಳು ತನ್ನ ಹೆಂಡ್ತಿ, ಮುದ್ದಾಗಿ ಸಾಕಿದ್ದೆ. ಇಬ್ಬರೂ ಚಕ್ಕಂದ ಆಡುತ್ತಿದ್ದರು. ಅವನು ಎಸ್ಕೇಪ್ ಆಗಿಬಿಟ್ಟ. ಅವನ ಮೇಲೆ ಮೂರುನಾಲ್ಕು ಕೇಸ್ ಇದೆ. ನಾವು ರಾಜಿ ಆಗಿ ಒಂದು ತಿಂಗಳಾಯ್ತು. ಗಂಡ-ಮಕ್ಕಳು ಬೇಡ ಅಂತ ಬರೆದು ಕೊಟ್ಟಿದ್ಲು ಪಂಚಾಯಿತಿ ಮಾಡಿ ಹಿರಿಯರು ರಾಜಿ ಮಾಡಿಸಿದ್ರು’ ಎಂದು ಹೇಳಿದ್ದಾರೆ.

‘ನಾನು ಬೆಂಗಳೂರಲ್ಲಿ ನ್ಯಾಷನಲ್ ಖಾಸಗಿ ಬಸ್ ಡ್ರೈವರ್ ಆಗಿದ್ದೆ. ಆ ಮೇಲೆ ಕೋಳಿ ಅಂಗಡಿ ಇಟ್ಕೋಂಡಿದ್ದೆ. ಅಂಗಡೀಲಿ ಕೆಲಸ ಮಾಡು ಅಂತ ಹೇಳಿದ್ರೆ, ಕೆಟ್ಟ ಕೆಲಸ ಬಿಟ್ಟಿರಲಿಲ್ಲ. ಬಾತ್ ರೂಮಿನಲ್ಲಿ ಚಕ್ಕಂದ ಆಡುತ್ತಿದ್ರು. ಮದುವೆಯಾಗಿ 9 ವರ್ಷ ಆಯ್ತು. ಒಂದು ಗಂಡು, ಹೆಣ್ಣು ಮಕ್ಕಳಿದ್ದಾರೆ. ಅವರನ್ನು ತಂದೆ ಹತ್ತಿರ ಬಿಟ್ಟು ಬಂದಿದ್ದೇನೆ….’ ಎಂದು ಕೃತ್ಯ ಎಸಗಿದ ಬಳಿಕ ಯಾವುದೇ ಅಳುಕಿಲ್ಲದೆ, ಪಶ್ಚಾತ್ತಾಪವೂ ಇಲ್ಲದೇ ವಿವರಿಸುವ ವಿಡಿಯೋ ವೈರಲ್ ಆಗಿದೆ.

ಅನಾಥರಾದ ಮಕ್ಕಳು: ತಾಯಿ ರೂಪಾ ಕೊಲೆಯಾದರೆ, ಕೊಲೆ ಮಾಡಿದ ಆರೋಪಿ ತಂದೆ ಸತೀಶ್ ಜೈಲು ಪಾಲಾಗಿದ್ದಾನೆ. ಆದರೆ, ಇವರ ಮಕ್ಕಳಾದ 7 ವರ್ಷದ ಗಣೇಶ್, 4 ವರ್ಷದ ಲಕ್ಷ್ಮೀ ಅನಾಥರಾಗಿದ್ದಾರೆ. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕೊಲೆಯಾದ ತಾಯಿ ಮತ್ತು ಸಿಟ್ಟಿನ ಕೈಗೆ ಬುದ್ದಿ ಕೊಟ್ಟು ಕೊಲೆ ಮಾಡಿ ಜೈಲು ಸೇರಿದ ತಂದೆಯಿಂದಾಗಿ ಮುಗ್ದ ಮಕ್ಕಳು ನೋವು ಅನುಭವಿಸುವಂತಾಗಿದೆ.


Spread the love