ಉಳ್ಳಾಲ ನಗರಕ್ಕೆ ಭೂಗತ ಲೈನ್ ವಿದ್ಯುತ್ ಸಂಪರ್ಕ ವ್ಯವಸ್ಥೆಗೆ 186 ಕೋಟಿ ರೂ. ಮಂಜೂರು: ಯು.ಟಿ. ಖಾದರ್
ಮಂಗಳೂರು: ಉಳ್ಳಾಲ ನಗರ ವ್ಯಾಪ್ತಿಯಲ್ಲಿ ಭೂಗತ ಲೈನ್ ಮೂಲಕ ವಿದ್ಯುತ್ ಸಂಪರ್ಕ ವ್ಯವಸ್ಥೆಗೆ 186 ಕೋಟಿ ರೂ. ಮಂಜೂರಾಗಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭವಾಗಲಿದೆ ಎಂದು ರಾಜ್ಯ ವಿಧಾನಸಭೆಯ ಸ್ಪೀಕರ್ ಹಾಗೂ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ. ಖಾದರ್ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಸೌಂದರ್ಯ ಹೆಚ್ಚಿಸುವುದರ ಜೊತೆಗೆ ಅಭಿವೃದ್ಧಿಯ ದೃಷ್ಟಿಯಿಂದ ಹಾಗೂ ಮನೆಗಳ ಮೇಲೆ ಹಾದು ಹೋಗಿರುವ ಎಚ್ಟಿ ಲೈನ್, ಕಂಪೌಂಡ್ ಒಳಗೆ ವಿದ್ಯುತ್ ಕಂಬಗಳು ಇರುವಂತಹ ನಾನಾ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದ್ದು, ಎರಡು ವರ್ಷದೊಳಗೆ ಪೂರ್ಣಗೊಳ್ಳಲಿದೆ ಎಂದರು. ನಗರವನ್ನು ಮಾದರಿಯಾಗಿ ರೂಪಿಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಮಂಗಳೂರು ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಬಾರದು ಎಂಬ ಉದ್ದೇಶದಿಂದ 32 ಕೆವಿ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು 110 ಕೆವಿ ವ್ಯವಸ್ಥೆಗೆ ಪರಿವರ್ತಿಸಲು 96 ಕೋಟಿ ರೂ. ಮಂಜೂರಾಗಿದೆ. ಮುಂದಿನ 30 ವರ್ಷಗಳಲ್ಲಿ ಎಷ್ಟೇ ಕಾರ್ಖಾನೆಗಳು, ಮನೆಗಳು ಹಾಗೂ ಅಭಿವೃದ್ಧಿ ಯೋಜನೆಗಳು ಬಂದರೂ ವಿದ್ಯುತ್ ಅಭಾವ ಉಂಟಾಗಬಾರದು ಎಂಬ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿದೆ ಎಂದು ನುಡಿದರು.
252 ಕೋಟಿ ರೂ. ವೆಚ್ಚದ ಕೋಟೆಪುರ-ಉಳ್ಳಾಲ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಹೆದ್ದಾರಿಯನ್ನು ಹೊರತುಪಡಿಸಿ ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕಿಸುವ ಇಷ್ಟೊಂದು ದೊಡ್ಡ ಸೇತುವೆ ಬೇರೆಡೆ ನಿರ್ಮಾಣವಾಗಿಲ್ಲ. ಒಂದೂವರೆ ಕಿಲೋಮೀಟರ್ ಉದ್ದದ ಈ ಸೇತುವೆ ನಿರ್ಮಾಣದಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸೇತುವೆಯ ಪಕ್ಕದಲ್ಲಿ ಹೋಟೆಲ್, ರೆಸ್ಟೋರೆಂಟ್ ಹಾಗೂ ಬೋಟ್ ಜಟ್ಟಿಗಳ ನಿರ್ಮಾಣಕ್ಕಾಗಿ 6 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದರು.
ಪುನರ್ವಿಂಗಡಣೆಯಿಂದ ಮಂಗಳೂರು ಕ್ಷೇತ್ರಕ್ಕೆ ಸೇರ್ಪಡೆಗೊಂಡ ತುಂಬೆ, ಮೇರಮಜಲು ಸೇರಿದಂತೆ ಇತರ ಗ್ರಾಮಗಳ ಅಭಿವೃದ್ಧಿಗೂ ಶ್ರಮಿಸಲಾಗುತ್ತಿದೆ. ಈಗಾಗಲೇ ಹರೇಕಳ-ತುಂಬೆ ಸಂಪರ್ಕ ಸೇತುವೆ ನಿರ್ಮಿಸಲಾಗಿದೆ. ಅದೇ ಮಾದರಿಯಲ್ಲಿ 62 ಕೋಟಿ ರೂ. ವೆಚ್ಚದ ಸಜಿಪ-ತುಂಬೆ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.
ವಿಧಾನಸಭೆಯ ಕಳೆದ ಅಧಿವೇಶನದಲ್ಲಿ ಶಾಸಕ ಶಿವಲಿಂಗೇ ಗೌಡ ಅವರು ಆಡಿದ ಮಾತಿನ ಕುರಿತು ಸುದ್ದಿಗಾರರು ಗಮನ ಸೆಳೆದಾಗ, “ಆ ರೀತಿ ಮಾತನಾಡಬಾರದಿತ್ತು. ಶಾಸಕರು ಕಾನೂನು ಹಾಗೂ ನಿಯಮಗಳನ್ನು ತಿಳಿದವರಾಗಿರಬೇಕು. ಸದನದಲ್ಲಿ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಕ್ಷೇತ್ರದ ಜನರು ತಮ್ಮ ನಡೆನುಡಿಯನ್ನು ಗಮನಿಸುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು. ಶಾಸಕರು ತಮ್ಮ ಕ್ಷೇತ್ರ ಹಾಗೂ ಜಿಲ್ಲೆಗೆ ಅಗೌರವ ತರುವ ರೀತಿಯಲ್ಲಿ ವರ್ತಿಸಬಾರದು” ಎಂದು ಹೇಳಿದರು.
ಅಧಿವೇಶನದಲ್ಲಿ ಗೊಂದಲ ಉಂಟಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಅಧಿವೇಶನ ನಡೆಸುವುದು ಸರಿಯಲ್ಲ ಎಂದು ಸ್ಪೀಕರ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ವಿಚಾರಕ್ಕೆ ಸ್ಪಷ್ಟನೆ ನೀಡಿದ ಯು.ಟಿ. ಖಾದರ್ ಅವರು, ಮುಖ್ಯಮಂತ್ರಿ ಆ ರೀತಿಯ ಮಾತು ಆಡಿಲ್ಲ. ವಿಪಕ್ಷ ಸದಸ್ಯರು ಭಾಷಣಕ್ಕೆ ಅಡ್ಡಿಪಡಿಸಿದ ವೇಳೆ ‘ಸದಸ್ಯರು ಈ ರೀತಿ ವರ್ತಿಸುವುದು ಸರಿಯಲ್ಲ’ ಎಂದು ಹೇಳಿದ್ದಾರೆ. ಸ್ಪೀಕರ್ ಪೀಠದಲ್ಲಿರುವವರು ಎಲ್ಲವನ್ನೂ ಸಮನ್ವಯದಿಂದ ನಡೆಸಬೇಕಾಗುತ್ತದೆ ಎಂದರು.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಟೋಲ್ಗೇಟ್ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿರುವ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಸ್ಥಳೀಯ ಶಾಸಕರು ಹಾಗೂ ಸಂಸದರು ಚರ್ಚಿಸಿ ಜನರಿಗೆ ಸ್ಪಷ್ಟನೆ ನೀಡಬೇಕು. ಪ್ರತಿಯೊಂದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಕ್ಕೂ ಮೊದಲು ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡುವೆ ಎಂಒಯು ಮಾಡಲಾಗುತ್ತದೆ. ಅದರಲ್ಲಿ ಸಮಗ್ರ ಮಾಹಿತಿ ಇರುತ್ತದೆ. ಶಾಸಕರು ಹಾಗೂ ಸಂಸದರು ಇದನ್ನು ಪಡೆದು ಜನರಿಗೆ ತಿಳಿಸಬೇಕು ಎಂದು ಹೇಳಿದರು.













