ಜಿಲ್ಲೆಯಲ್ಲಿನ ಸಮಸ್ಯಾತ್ಮಕ ಮತಗಟ್ಟೆಗಳ ವಿವರ ನೀಡಿ- ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ 

Spread the love

ಜಿಲ್ಲೆಯಲ್ಲಿನ ಸಮಸ್ಯಾತ್ಮಕ ಮತಗಟ್ಟೆಗಳ ವಿವರ ನೀಡಿ- ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ 

ಉಡುಪಿ: ಜಿಲ್ಲೆಯಲ್ಲಿ ಕಳೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಅತೀ ಕಡಿಮೆ ಮತದಾನವಾದ, ಮತದಾರರಿಗೆ ಬೆದರಿಕೆ ಉಂಟುಮಾಡುವ (ವಲ್ಲರಬಲ್), ಮತದಾನಕ್ಕೆ ಕೇಂದ್ರಗಳಿಗೆ ಮತದಾರರು ಬರಲು ಹೆದರಿಕೆಯುಳ್ಳ ಮತಗಟ್ಟೆಗಳ ಕುರಿತು 4 ದಿನದಲ್ಲಿ ಸಮಗ್ರ ವರದಿ ನೀಡುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ.

ಅವರು ಮಂಗಳವಾರ, ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲೆಯ ಸೆಕ್ಟರ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತ ಮತ್ತು ಪಾರದರ್ಶಕವಾಗಿ ನಡೆಸಲು ಯಾವುದೇ ಅಡೆತಡೆಗಳಿದ್ದರೆ ಕೂಡಲೇ ತಮ್ಮ ಗಮನಕ್ಕೆ ತರುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಮತದಾರರಿಗೆ ಬೆದರಿಕೆ ಉಂಟು ಮಾಡುವ ವಾತಾವರಣ ನಿರ್ಮಿಸುವ ವ್ಯಕ್ತಿಗಳ ಬಗ್ಗೆ ಮತ್ತು ಕಳೆದ ಬಾರಿ ಅತೀ ಕಡಿಮೆ ಮತದಾನವಾದ ಮತಗಟ್ಟೆಗಳ ಬಳಿ ತೆರಳಿ ಅಲ್ಲಿನ ನೈಜ ಪರಿಸ್ಥಿತಿಯ ವರದಿ ನೀಡುವಂತೆ ಮತ್ತು ಯಾವುದೇ ಮತಗಟ್ಟೆಯಲ್ಲಿ ಒಬ್ಬನೇ ವ್ಯಕ್ತಿಗೆ 75% ಗಿಂತಲೂ ಹೆಚ್ಚು ಮತದಾನವಾಗಿರುವ ಪ್ರದೇಶದಲ್ಲಿ ಮತದಾರರಿಗೆ ಯಾವುದೇ ಭಯ ಅಥವಾ ಹೆಚ್ಚಿನ ಆಮಿಷ ನೀಡಿರುವಂತಹ ಕುರಿತು ಹಾಗೂ ಮತದಾನ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳ ನಡೆದಿದ್ದರೆ ಅವುಗಳ ನೈಜ ವರದಿ ನೀಡಿ, ಸ್ಥಳೀಯ ಬಿ.ಎಲ್.ಓ ಗಳು, ಸೆಕ್ಟರ್ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿ, ಫೆಬ್ರವರಿ 16 ರ ಒಳಗೆ ವರದಿ ನೀಡುವಂತೆ ಸೂಚಿಸಿದರು.

ಚುನಾವಣೆಯ ಕರ್ತವ್ಯದಲ್ಲಿ ಪ್ರತಿಯೊಬ್ಬರೂ ತಮಗೆ ವಹಿಸಲಾದ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡು ಯಾವುದೇ ಲೋಪಗಳಿಗೆ ಆಸ್ಪದ ನೀಡದೆ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಲೋಕಸಭಾ ಚುನಾವಣೆಗಾಗಿ 92 ಜನ ಸೆಕ್ಟರ್ ಅಧಿಕಾರಿಗಳು ಮತ್ತು 132 ಪೊಲೀಸ್ ಸೆಕ್ಟರ್ ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ನೇಮಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಎಎಸ್ಪಿ ಕುಮಾರ ಚಂದ್ರ, ಕುಂದಾಪುರ ಉಪ ವಿಭಾಗಾಧಿಕಾರಿ ಮಧುಕೇಶ್ವರ ಹಾಗೂ ಎಲ್ಲಾ ತಾಲೂಕುಗಳ ತಹಶೀಲ್ದಾರರು ಉಪಸ್ಥಿತರಿದ್ದರು.


Spread the love