ನ. 14: ಸಂತ ವಿನ್ಸೆಂಟ್ ಡಿ ಪಾವ್ಲ್ ಇಗರ್ಜಿ ಕಟಪಾಡಿ ಇದರ ಅಮೃತ ಮಹೋತ್ಸವ

Spread the love

ನ. 14: ಸಂತ ವಿನ್ಸೆಂಟ್ ಡಿ ಪಾವ್ಲ್ ಇಗರ್ಜಿ ಕಟಪಾಡಿ ಇದರ ಅಮೃತ ಮಹೋತ್ಸವ

ಉಡುಪಿ: ಸಂತ ವಿನ್ಸೆಂಟ್ ಡಿ ಪಾವ್ಲ್ ಇಗರ್ಜಿ ಕಟಪಾಡಿ ಇದರ ಅಮೃತ ಮಹೋತ್ಸವ ಕಾರ್ಯಕ್ರಮ ವಿವಿಧ ಗಣ್ಯರು ಹಾಗೂ ಭಕ್ತಾದಿಗಳ ಪಾಲ್ಗೊಳ್ಳುವಿಕೆಯೊಂದಿಗೆ ನವೆಂಬರ್ 14 ರಂದು ನಡೆಯಲಿದೆ ಎಂದು ಚರ್ಚಿನ ಧರ್ಮಗುರುಗಳಾದ ವಂ|ರಾಜೇಶ್ ಪಸನ್ನಾ ಹೇಳಿದರು.

ನವೆಂಬರ್ 14 ರಂದು ಬೆಳಿಗ್ಗೆ 9.30 ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರ ನೇತೃತ್ವದಲ್ಲಿ ಕೃತಜ್ಞಾತಾ ಬಲಿಪೂಜೆ ಜರುಗಲಿದೆ. ಬಳಿಕ 11.30ಕ್ಕೆ ಧರ್ಮಾಧ್ಯಕ್ಷ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಲಿದ್ದು, ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಹೋಲಿ ಕ್ರಾಸ್ ಸಭೆ ದಕ್ಷಿಣ ಭಾರತದ ಪ್ರೊವಿನ್ಸಿಯಲ್ ಸುಪಿರೀಯರ್ ಅ. ವಂ. ರೋಕ್ ಡಿಕೊಸ್ತಾ ಧರ್ಮಪ್ರಾಂತ್ಯದ ಕುಲಪತಿ ವಂ|ಡಾ| ರೋಶನ್ ಡಿಸೋಜಾ, ಉಡುಪಿ ವಲಯ ಪ್ರಧಾನ ಧರ್ಮಗುರು ವಂ. ಚಾರ್ಲ್ಸ್ ಮಿನೇಜಸ್, ಹೋಲಿ ಕ್ರೊಸ್ ಸ್ಟೂಡಂಟ್ ಹೋಮ್ ಕಟಪಾಡಿ ಇದರ ನಿರ್ದೇಶಕರಾದ ವಂ. ರೋನ್ಸನ್ ಆರ್ ಡಿಸೋಜಾ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾ ಶೆಟ್ಟಿ, ಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಮೀಳಾ ಜತ್ತನ್ನ, ಚರ್ಚ್ ಸ್ಮರಣ ಸಂಚಿಕೆ ಸಂಪಾದಕರಾದ ಕ್ಯಾಥರಿನ್ ರೊಡ್ರಿಗಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಅಂದು ಸಂಜೆ 6 ಗಂಟೆಗೆ ಬಹುಮಾನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ವಲಯ ಪ್ರಧಾನ ಧರ್ಮಗುರು ವಂ. ಚಾರ್ಲ್ಸ್ ಮಿನೇಜಸ್ ವಹಿಸಲಿದ್ದು, ಹೋಲಿ ಕ್ರಾಸ್ ಸಭೆ ದಕ್ಷಿಣ ಭಾರತದ ಪ್ರೊವಿನ್ಸಿಯಲ್ ಸುಪಿರೀಯರ್ ಅ. ವಂ. ರೋಕ್ ಡಿಕೊಸ್ತಾ, , ಹೋಲಿ ಕ್ರೊಸ್ ಸ್ಟೂಡಂಟ್ ಹೋಮ್ ಕಟಪಾಡಿ ಇದರ ನಿರ್ದೇಶಕರಾದ ವಂ. ರೋನ್ಸನ್ ಆರ್ ಡಿಸೋಜಾ, ಕಟಪಾಡಿ ಕೊಂಕಣ್ಸ್ ಯುಎಇ ಇದರ ಸ್ಥಾಪಕ ಕಾರ್ಯದರ್ಶಿ ಆಗ್ನೆಲ್ ರೊಡ್ರಿಗಸ್, ಬರಹಗಾರ ವಿಜಯ್ ಕುಮಾರ್ ಶೆಟ್ಟಿ ಮುಂಬೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಅಮೃತಮಹೋತ್ಸವದಲ್ಲಿ ಸರ್ವಧರ್ಮಿಯರ ಸಹಭಾಗಿತ್ವ ಇದ್ದು ನವೆಂಬರ್ 10 ರಂದು ಹಸಿರು ಹೊರೆಕಾಣಿಕೆ ಮೆರವಣಿಗೆ ಹಾಗೂ ನವೆಂಬರ್ 11 ರಂದು ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.

ಸಭಾ ಕಾರ್ಯಕ್ರಮದ ಬಳಿಕ ಚರ್ಚಿನ ಮಕ್ಕಳು ಮತ್ತು ಯುವಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ರಂಗತರಂಗ ಕಾಪು ತಂಡದಿಂದ ಅಧ್ಯಕ್ಷೆರ್ ಎಂಬ ತುಳು ನಾಟಕ ಪ್ರದರ್ಶನ ನಡೆಯಲಿದೆ.

1948 ಮೇ 16 ರಂದು ಕಟಪಾಡಿಯಲ್ಲಿ ಚರ್ಚಿನ ಸ್ಥಾಪನೆಯಾಗಿದ್ದು, ವಂ|ರುಜಾರಿಯೋ ಫೆರ್ನಾಂಡಿಸ್ ಅವರು ಪ್ರಥಮ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ವಂ| ರಾಜೇಶ್ ಪಸನ್ನ ಅವರು ಸೇವೆ ನೀಡುತ್ತಿದ್ದಾರೆ. ಈವರೆಗೆ ಚರ್ಚಿನಲ್ಲಿ 16 ಮಂದಿ ಧರ್ಮಗುರುಗಳು ತಮ್ಮ ನಿಸ್ವಾರ್ಥ ಸೇವೆಯನ್ನು ಚರ್ಚಿನ ಅಭಿವೃದ್ಧಿಗಾಗಿ ನೀಡಿರುತ್ತಾರೆ.

ಪ್ರಸ್ತುತ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾಗಿ ಬ್ರಾಯನ್ ಕೊರೆಯಾ, ಕಾರ್ಯದರ್ಶಿಯಾಗಿ ತೆರೆಸಾ ಲೋಬೊ, 20 ಆಯೋಗಗಳ ಸಂಚಾಲಕರಾಗಿ ಲುವಿಸ್ ಡಿಸಿಲ್ವಾ ಸೇವೆಯನ್ನು ನೀಡುತ್ತಿದ್ದಾರೆ.

ಅಮೃತಮಹೋತ್ಸವದ ಸವಿನೆನಪಿಗಾಗಿ ವರ್ಷವಿಡೀ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದು ದಾನಿಗಳ ನೆರವಿನಿಂದ ಹಾಗೂ ಚರ್ಚಿನ ಭಕ್ತಾದಿಗಳ ಸಹಕಾರದಿಂದ ಚರ್ಚ್ ಕಟ್ಟಡದ ಮಾಡು ರಿಪೇರಿ, ನೂತನ ಸ್ವಾಗತ ದ್ವಾರ, ಚರ್ಚ್ ಆವರಣಕ್ಕೆ ಇಂಟರ್ ಲಾಕ್ ವ್ಯವಸ್ಥೆ, ಸಹಿತ ಹಲವಾರು ಕೆಲಸಗಳನ್ನು ಕೈಗೊಂಡು ಪೂರ್ಣಗೊಳಿಸಲಾಗಿದೆ. ಅಮೃತ ಮಹೋತ್ಸವದ ಪ್ರಯುಕ್ತ ಬಡವರಿಗಾಗಿ ಒಂದು ಮನೆಯನ್ನು ನಿರ್ಮಿಸುವ ಯೋಜನೆ ಇದೆ. ಅಮೃತಮಹೋತ್ಸವದ ಅಂಗವಾಗಿ ಚರ್ಚ್, ವಲಯ ಹಾಗೂ ಧರ್ಮಪ್ರಾಂತ್ಯದ ಮಟ್ಟದಲ್ಲಿ ವಿವಿಧ ರೀತಿಯ ಸ್ಪರ್ಧೆಗಳು ಮತ್ತು ಕಾರ್ಯಕ್ರಮಗಳನ್ನು ಕೂಡ ವರ್ಷವಿಡೀ ಆಯೋಜಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾಗಿ ಬ್ರಾಯನ್ ಕೊರೆಯಾ, ಕಾರ್ಯದರ್ಶಿಯಾಗಿ ತೆರೆಸಾ ಲೋಬೊ, 20 ಆಯೋಗಗಳ ಸಂಚಾಲಕರಾಗಿ ಲುವಿಸ್ ಡಿಸಿಲ್ವಾ, ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಕಿರಣ್ ಲೂವಿಸ್ ಉಪಸ್ಥಿತರಿದ್ದರು.


Spread the love