ಪ್ರಾಪರ್ಟಿ ಕಾರ್ಡ್ ಕಡ್ಡಾಯಗೊಳಿಸಿದ್ದರಿಂದ ಸಾರ್ವಜನಿಕರಿಗೆ ಭೂ ನೋಂದಣಿ ಸೇರಿದಂತೆ ಇತರ ವ್ಯವಹಾರಗಳಿಗೆ ತೊಂದರೆ – ಶಾಸಕ ಡಿ ವೇದವ್ಯಾಸ ಕಾಮತ್ 

Spread the love

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಪರ್ಟಿ ಕಾರ್ಡ್ ಕಡ್ಡಾಯಗೊಳಿಸಿದ್ದರಿಂದ ಸಾರ್ವಜನಿಕರಿಗೆ ಭೂ ನೋಂದಣಿ ಸೇರಿದಂತೆ ಇತರ ವ್ಯವಹಾರಗಳಿಗೆ ತೊಂದರೆಯಾಗಿದ್ದು, ಸರಕಾರದ ರೆವೆನ್ಯೂ ಆದಾಯಕ್ಕೂ ಹೊಡೆತ ಬಿದ್ದಿದೆ ಎಂದು ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಮಂಗಳೂರು ಸಬ್ ರಿಜಿಸ್ಟರ್ ತಾಲೂಕು ಮತ್ತು ನಗರದಲ್ಲಿ ಒಟ್ಟು 1,70,000 ಕ್ಕೂ ಅಧಿಕ ಆಸ್ತಿಗಳಿದ್ದು, ಈಗ ದೊರಕಿರುವ ಮಾಹಿತಿ ಪ್ರಕಾರ ಕೇವಲ 25 ರಿಂದ 30 ಸಾವಿರ ಆಸ್ತಿಗಳಿಗೆ ಮಾತ್ರ ಪಾಪರ್ಟಿ ಕಾರ್ಡ್ ವಿತರಿಸಲಾಗಿದೆ. ಯುಪಿಒಆರ್ ಕಚೇರಿಯ ಎಲ್ಲ ವ್ಯವಸ್ಥೆಗಳು ಈಗ ಸದ್ಯ ಅವ್ಯವಸ್ಥೆಯಲ್ಲಿವೆ. ಇಲ್ಲಿ ಯಾರಿಗೂ ಸರಿಯಾದ ಮಾಹಿತಿ ಸಿಗುವುದಿಲ್ಲ. ಕಂಪ್ಯೂಟರ್, ಸ್ಕ್ಯಾನರ್ ಗಳು, ಇತರ ವ್ಯವಸ್ಥೆಗಳು ಕೂಡ ಸಮಪರ್ಪಕವಾಗಿಲ್ಲ. ಬಂದ ನಾಗರಿಕರಿಗೆ ಕುಳಿತುಕೊಳ್ಳಲು ಸ್ಥಳ, ಆಸನ, ಶೌಚಾಲಯ ವ್ಯವಸ್ಥೆಯೂ ಇಲ್ಲ. ಫೆಬ್ರವರಿ 1 ರಿಂದ ಅನ್ವಯವಾಗುವಂತೆ ಮಂಗಳೂರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಅತೀ ಕನಿಷ್ಟ ಮಟ್ಟದಲ್ಲಿ ಆಸ್ತಿಗಳ ಪರಭಾರೆ ದಾಖಲಾಗಿರುತ್ತದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಬರುವ ಆದಾಯ ಸ್ಥಗಿತವಾಗಿದೆ.

ಆದ್ದರಿಂದ ಮನಪಾ ವ್ಯಾಪ್ತಿಯ ಎಲ್ಲ 32 ಗ್ರಾಮಗಳಲ್ಲಿರುವ ಆಸ್ತಿಗಳ ಪೈಕಿ ಶೇಕಡಾ 75 ಕ್ಕಿಂತಲೂ ಅಧಿಕ ಆಸ್ತಿಗಳಿಗೆ ಪ್ರಾಪರ್ಟಿ ಕಾರ್ಡ್ ನೀಡಿದ ನಂತರ ಪ್ರಾಪರ್ಟಿ ಕಾರ್ಡನ್ನು ಕಡ್ಡಾಯಗೊಳಿಸುವುದು ಕಾನೂನು ಪ್ರಕಾರ ಸಮಂಜಸವಾಗಿದೆ. ಪ್ರಾಪರ್ಟಿ ಕಾರ್ಡ್ ವಿಚಾರದಲ್ಲಿರುವ ಅವ್ಯವಸ್ಥೆಗಳನ್ನು ಶೀಘ್ರ ಸರಿಪಡಿಸದೇ ಹೋದಲ್ಲಿ ಅದರ ವಿರುದ್ಧ ಪ್ರತಿಭಟನೆಗೆ ಸಿದ್ಧತೆ ಮಾಡಬೇಕಾಗಬಹುದು ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ


Spread the love