ಬಜರಂಗದಳದ ವಿರುದ್ದ ಮಾತನಾಡಿದ ಆರ್ ಅಶೋಕ್ ವಿರುದ್ದ ಕ್ರಮಕ್ಕೆ ಸಂಘಟನೆಗಳ ಆಗ್ರಹ

Spread the love

ಬಜರಂಗದಳದ ವಿರುದ್ದ ಮಾತನಾಡಿದ ಆರ್ ಅಶೋಕ್ ವಿರುದ್ದ ಕ್ರಮಕ್ಕೆ ಸಂಘಟನೆಗಳ ಆಗ್ರಹ

ಬೆಂಗಳೂರು: ವಿಧಾನಸಭಾ ಅಧಿವೇಶನದಲ್ಲಿ ಮಾತನಾಡುವಾಗ ಬಜರಂಗದಳದ ವಿರುದ್ದ ಹೇಳಿಕೆ ನೀಡುರುವ ಆರ್ ಅಶೋಕ್ ಅವರು ಕ್ಷಮೆ ಯಾಚಿಸುವಂತೆ ಹಿಂದೂ ಸಂಘಟನೆಗಳ ನಾಯಕರು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ದಿನಾಂಕ: 21.02.2024 ರಂದು ಕರ್ನಾಟಕದ ವಿಧಾನಸಭಾ ಅಧಿವೇಶನದಲ್ಲಿ ಮಂಗಳೂರಿನ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ಶ್ರೀರಾಮ ಮತ್ತು ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ ಹಿನ್ನೆಲೆಯಲ್ಲಿ ಚರ್ಚೆ ಆಗುತ್ತಿದ್ದಂತಹ ಸಂದರ್ಭದಲ್ಲಿ ವಿರೋಧಪಕ್ಷದ ನಾಯಕರಾದ  ಅಶೋಕ್ ರವರು “ನಾನು ಗೃಹ ಸಚಿವನಾಗಿದ್ದಾಗ ನನಗೂ ಇಂತದ್ದೇ ಪರಿಸ್ಥಿತಿ ಬಂದಿತ್ತು. ಮಂಗಳೂರಿನ ಪಬ್ ನಲ್ಲಿ ಬಜರಂಗದಳದ ಕಾರ್ಯಕರ್ತರು ನುಗ್ಗಿ ಹೆಣ್ಣು ಮಕ್ಕಳಿಗೆ ಹೊಡೆದ್ರು ಅಂತ ಇದೇ ಸದನದಲ್ಲಿ ದೊಡ್ಡ ಗಲಾಟೆಯಾಯಿತು. ವಿಧಾನಸಭೆ, ವಿಧಾನಪರಿಷತ್ ನೊಳಗೆ ಧರಣಿ ಆಯ್ತು. ಆ ಸಂದರ್ಭದಲ್ಲಿ ನಾನು ಹಿಂದೆ ಮುಂದೆ ನೋಡಲಿಲ್ಲ. ನನಗೂ ಬಹಳ ಒತ್ತಡ ಇತ್ತು. ಅದರೂ ಬಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಆ್ಯಕ್ಸ್ ಹಾಕಿದೆ. ಆ ರೀತಿಯ ನಿಲುವನ್ನು ನೀವೂ ತಗೋಬೇಕು’ ಎಂದು ಭಾಷಣ ಮಾಡಿದ್ದಾರೆ.

ಸದನದಲ್ಲಿ ಹಿಂದುತ್ವದ ಪರವಾಗಿ ಮಾತನಾಡಬೇಕಾದಂತಹ, ವಿರೋಧ ಪಕ್ಷದ ನಾಯಕರಾಗಿರುವಂತಹ ವ್ಯಕ್ತಿಯ ಈ ಹೇಳಿಕೆಯು ಸಾವಿರಾರು ಹಿಂದೂ ಕಾರ್ಯಕರ್ತರ ಮನಸ್ಸಿಗೆ ಘಾಸಿಯನ್ನುಂಟುಮಾಡಿದೆ. ಅವರ ಮನಸ್ಥೆರ್ಯ ಮತ್ತು ಆತ್ಮಬಲವನ್ನು ಕುಗ್ಗಿಸಿದೆ. ಹಲವಾರು ವರ್ಷಗಳಿಂದ ಹಿಂದುತ್ವ, ಹಿಂದೂ ಸಮಾಜ, ಹಿಂದೂ ಧರ್ಮ, ಗೋಮಾತೆ, ಮಾತಾಭಗಿನಿಯರ ರಕ್ಷಣೆಗೋಸ್ಕರ ಹೋರಾಟ ಮಾಡಿ, ಕೇಸುಗಳನ್ನು ಹಾಕಿಸಿಕೊಂಡು ಜೈಲು ಶಿಕ್ಷೆ ಅನುಭವಿಸುತ್ತಾ ರಾಷ್ಟ್ರಸೇವೆಯಲ್ಲಿ ಸಮರ್ಪಿಸಿಕೊಂಡಿರುವ ಬಜರಂಗಿಗಳನ್ನು ಗೂಂಡಾಗಳಿಗೆ ಹೋಲಿಸಿ ಗೂಂಡಾ ಕೇಸನ್ನು ದಾಖಲಿಸಿದ್ದಲ್ಲದೆ, ಅದನ್ನು ಈಗ ಸಮರ್ಥಿಸುತ್ತಿರುವುದನ್ನು ವಿಶ್ವ ಹಿಂದೂ ಪರಿಷದ್ ಉಗ್ರವಾಗಿ ಖಂಡಿಸುತ್ತದೆ.

ತಾವು ಈ ವಿಷಯವನ್ನು ಪಕ್ಷದ ಹಿರಿಯರ, ಶಾಸಕರ ಮತ್ತು ನಾಯಕರ ಗಮನಕ್ಕೆ ತಂದು ಇವರ ಮೇಲೆ ಕ್ರಮ ಕೈಗೊಳ್ಳಬೇಕು. ಈ ವ್ಯಕ್ತಿಯನ್ನು ವಿರೋಧಪಕ್ಷದ ನಾಯಕ ಸ್ಥಾನದಿಂದ ಕೂಡಲೇ ತೆಗೆದುಹಾಕಬೇಕು. ಇದರೊಂದಿಗೆ ಅವರು ಬಜರಂಗದಳದ ಬಗ್ಗೆ ನೀಡಿದ ಹೇಳಿಕೆಯ ಬಗ್ಗೆ ಈ ಕೂಡಲೇ ಸಾರ್ವಜನಿಕವಾಗಿ, ಬೇಷರತ್ತಾಗಿ ಕ್ಷಮೆಯಾಚಿಸಬೇಕು ಎಂದು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.


Spread the love